ಕರ್ತವ್ಯನಿರತ ಪಿಎಸ್ಐ ಮೇಲೆ ಹಾಡುಹಗಲೇ ಮಾರಣಾಂತಿಕ ಹಲ್ಲೆಯಾದ ಘಟನೆ ನಡೆದಿದೆ. ಶ್ರೀರಾಂಪುರ ಠಾಣೆ ಪಿಎಸ್ಐ ಸರ್ಫುದ್ದೀನ್ ಹಲ್ಲೆಗೊಳಗಾದವರು. ಅವರ ತಲೆಗೆ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಭಾನುವಾರ ಮಧ್ಯಾಹ್ನ ಪಿಎಸ್ಐ ಸರ್ಫುದ್ದೀನ್ ಪ್ರಕರಣವೊಂದರ ತನಿಖೆಗಾಗಿ ಯಶವಂತಪುರದ ಆರ್ಟಿಒ ಕಚೇರಿ ಬಳಿ ಮಫ್ತಿಯಲ್ಲಿ ಬಂದಿದ್ದರು.
ಈ ವೇಳೆ ಆರೋಪಿಯಾದ ಉದಯ್ ಕುಮಾರ್, ತನ್ನ ತಂದೆ ನಡೆಸುತ್ತಿದ್ದ ಹೋಟೆಲ್ ಎದುರು ನಿಂತಿದ್ದ ದ್ವಿಚಕ್ರ ವಾಹನದಲ್ಲಿ ಪಿಎಸ್ಐ ಸರ್ಫುದ್ದೀನ್ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾನೆ. ಪಿಎಸ್ಐ ಇದನ್ನು ಪ್ರಶ್ನಿಸಿದ್ದು, ಇದೇ ವಿಚಾರಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ಉಂಟಾಗಿ ಜಗಳ ವಿಕೋಪಕ್ಕೆ ತಿರುಗಿತ್ತು.
ಆಕ್ರೋಶಗೊಂಡ ಉದಯ್ಕುಮಾರ್, ಪಿಎಸ್ಐ ಸರ್ಫುದ್ದೀನ್ ಅವರನ್ನು ರಸ್ತೆಯಲ್ಲೇ ಎಳೆದಾಡಿ ಹಲ್ಲೆ ಮಾಡಿದ್ದಾನೆ. ಅಲ್ಲದೆ, ಕಲ್ಲಿನಿಂದ ತಲೆಗೆ ಹೊಡೆದಿದ್ದು, ಬಲವಾದ ಏಟು ತಗುಲಿ ರಕ್ತಸ್ರಾವವಾಗಿದೆ. ಗಲಾಟೆಯನ್ನು ತಡೆದ ಸ್ಥಳೀಯರು, ಗಾಯಗೊಂಡಿದ್ದ ಸರ್ಫುದ್ದೀನ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸದ್ಯ ಹಲ್ಲೆ ನಡೆಸಿದ ಆರೋಪಿ ಉದಯ್ ಕುಮಾರ್ (34) ನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಧರ್ಮೇಂದರ್ ಕುಮಾರ್ ಮೀನಾ ಮಾಹಿತಿ ನೀಡಿದ್ದಾರೆ.
ಆರೋಪಿ ಉದಯ್ ಕುಮಾರ್ (34)