ಮೈಸೂರು ​ಛಾಯಾಚಿತ್ರಗ್ರಾಹಕನ ನಾಪತ್ತೆ ಪ್ರಕರಣ : ಕೊಲೆ ಮಾಡಿ ಹೂತು ಹಾಕಿದ ಮಾವ..!!

ಪುತ್ತೂರು : ತೋಟ ನೋಡಿಕೊಂಡು ಹೋಗಲು ಮೈಸೂರಿನಿಂದ ಪುತ್ತೂರಿಗೆ ಬಂದಿದ್ದ ಫೋಟೋಗ್ರಾಫರ್  ಜಗದೀಶ್‌ ಅವರನ್ನು  ಮಾವನೇ ಕೊಲೆ ಮಾಡಿ ಕಾಡಿನಲ್ಲಿ ಹೂತು ಹಾಕಿದ್ದ ವಿಚಾರ ಪೋಲಿಸ್ ತನಿಖೆಯಲ್ಲಿ ಬಯಲಾಗಿದೆ.

58 ವರ್ಷ ಪ್ರಾಯದ ಫೋಟೋಗ್ರಾಫರ್ ಜಗದೀಶ್ ಅವರು ಹೆಂಡತಿ ಹಾಗೂ ಮಗನ ಜೊತೆಯಲ್ಲಿ ಮೈಸೂರು ಜಿಲ್ಲೆಯ ಸುಬ್ರಹ್ಮಣ್ಯ ನಗರದಲ್ಲಿ ವಾಸ ಮಾಡಿಕೊಂಡಿದ್ದು, 3 ವರ್ಷದ ಹಿಂದೆ ಪುತ್ತೂರು ತಾಲೂಕು ಆರ್ಯಾಪು ಗ್ರಾಮದ ಕುಂಜೂರುಪಂಜ ಎಂಬಲ್ಲಿ ಸುಮಾರು 2 ಎಕರೆ ಜಾಗವನ್ನು ಕ್ರಯಕ್ಕೆ ಖರೀದಿಸಿ ಕೃಷಿ ಮಾಡಿದ್ದಾರೆ. 

ಆ ಜಾಗವನ್ನು ಮಾವ ಬಾಲಕೃಷ್ಣ ರೈ ಎಂಬುವವರು ನೋಡಿಕೊಳ್ಳುತ್ತಿದ್ದರು. ಕಳೆದ 18 ರಂದು ಜಗದೀಶ್ ಮೈಸೂರಿನಿಂದ ಬೆಳಿಗ್ಗೆ ಆತನ ಜಾಗಕ್ಕೆ ಬಂದಿದ್ದು, ಅಲ್ಲಿಂದ ಮಾವ ಬಾಲಕೃಷ್ಣ ರೈಯ ಜೊತೆಯಲ್ಲಿ ಸುತ್ತಾಡಿ ಪುಳಿತ್ತಡಿಗೆ ಬಂದು ಮೈಸೂರಿಗೆ ಹೋಗಲು ಕಾರನ್ನು ಹತ್ತಿ ಹೊರಟಿದ್ದು, ಆ ಬಳಿಕ ಕಾಣೆಯಾಗಿರುವ ಬಗ್ಗೆ ಪುತ್ತೂರು ಠಾಣೆಯಲ್ಲಿ ಅವರ ಅಣ್ಣ ಶಶಿಧರ್ ನೀಡಿದ ದೂರಿನಂತೆ  ಪ್ರಕರಣ ದಾಖಲಾಗಿತ್ತು.

ಆದರೆ ಜಗದೀಶ್ ನಾಪತ್ತೆಯಾದ ಹಿನ್ನೆಲೆಯಲ್ಲಿ, ತೋಟದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದ ಮಾವ ಬಾಲಕೃಷ್ಣ ರೈ ಮೇಲೆ ಅನುಮಾನಗೊಂಡ ಜಗದೀಶ್ ಅವರ ಅಣ್ಣ ಶಶಿಧರ್ ಅವರು ಮತ್ತೆ ಪುತ್ತೂರು ಠಾಣೆಗೆ ದೂರು ನೀಡಿದ್ದು, ಪಟ್ಲಡ್ಕದ ಬಾಲಕೃಷ್ಣ ರೈ ಮತ್ತು ಮಗ ಪ್ರಶಾಂತ್ ಯಾವುದೋ ದುರುದ್ದೇಶದಿಂದ ತನ್ನ ತಮ್ಮ ಜಗದೀಶನನ್ನು ಅಪಹರಣ ಮಾಡಿ ಜಗದೀಶನ ಜೀವಕ್ಕೆ ತೊಂದರೆಯನ್ನು ಉಂಟು ಮಾಡಿರುವ ಸಾಧ್ಯತೆ ಇರುವ ಬಗ್ಗೆ ನನಗೆ ಬಲವಾದ ಸಂಶಯ ಇದ್ದು , ಈ ಬಗ್ಗೆ ತನಿಖೆ ನಡೆಸಬೇಕೆಂದರು.

ಈ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ತನಿಖೆ ನಡೆಸಿದ್ದು, ಪ್ರಕರಣದ ಅಸಲಿ ಸತ್ಯ ಬಯಲಾಗಿದೆ. ಬಾಲಕೃಷ್ಣ ಅಲಿಯಾಸ್ ಸುಬ್ಬಯ್ಯ ರೈ ಆಸ್ತಿಯ ಆಸೆಗಾಗಿ ದುರುದ್ದೇಶದಿಂದ ಮಗ ಪ್ರಶಾಂತ್, ಪತ್ನಿ ಜಯಲಕ್ಷ್ಮಿ ಹಾಗೂ ತನ್ನ ಮನೆಯ ಹತ್ತಿರದ ನಿವಾಸಿ ಜೀವನ್ ಪ್ರಸಾದ್ ರವರೊಂದಿಗೆ ಸೇರಿಕೊಂಡು ಜಗದೀಶ್ ನನ್ನು ಕೊಲೆ ಮಾಡಿ ತನ್ನ ಮನೆಯ ಹತ್ತಿರದ ಕಾಡು ಪ್ರದೇಶದಲ್ಲಿ ಗುಂಡಿ ತೆಗೆದು ಮೃತದೇಹವನ್ನು ಹೂತು ಹಾಕಿರುವ ವಿಚಾರ ಬೆಳಕಿಗೆ ಬಂದಿದೆ.​ ​ಈ ಬಗ್ಗೆ ತನಿಖೆ ಪ್ರಗತಿಯಲ್ಲಿದೆ​​ 

 
 
 
 
 
 
 
 
 
 
 

Leave a Reply