ಮಂಗಳೂರು: ನೇಣು ಬಿಗಿದ ಸ್ಥಿತಿಯಲ್ಲಿ ವಿಶೇಷ ಚೇತನ ಯುವತಿಯ ಶವ ಪತ್ತೆ

ಮಂಗಳೂರು: ವಿಶೇಷ ಚೇತನ ಯುವತಿಯೋರ್ವಳು ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯ ಕೊಲ್ಯ ಸಾರಸ್ವತ ಕಾಲನಿ ಬಾಡಿಗೆ ಮನೆಯಲ್ಲಿ ನಡೆದಿದೆ. ಯುವತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಬಾಯಿಗೆ ಬಟ್ಟೆಯನ್ನು ಕಟ್ಟಿರುವುದು ಕೊಲೆ ಶಂಕೆಗೆ ಕಾರಣವಾಗಿದೆ. 

ಛತ್ತೀಸ್ ಗಢ ಮೂಲದ ಸರಿತಾ ವರ್ಮ(23) ನಿಗೂಢ ರೀತಿಯಲ್ಲಿ ಸಾವನ್ನಪ್ಪಿದಾಕೆ. ಇಬ್ಬರು ಸಹೋದರರು ಹಾಗೂ ಅತ್ತಿಗೆ ಜೊತೆ ಸರಿತಾ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಳು. ಜ.30ರಂದು ಸಂಜೆ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಘಟನೆ ವೇಳೆ ಸಹೋದರರಿಬ್ಬರು ಕೆಲಸಕ್ಕೆ ತೆರಳಿದ್ದರೆ, ಅತ್ತಿಗೆ ಆಸ್ಪತ್ರೆಗೆ ತೆರಳಿದ್ದರು. ಬಾಡಿಗೆ ಮನೆ ಮಾಲೀಕರು ವೃದ್ಧರಾಗಿದ್ದು ಅಸೌಖ್ಯದಿಂದಿದ್ದಾರೆ. ಕೆಳಗಿನ ಅಂತಸ್ತಿನಲ್ಲಿ ಮಾಲೀಕರಿದ್ದರೆ, ಮೇಲಿನ ಅಂತಸ್ತಿನಲ್ಲಿ ಬಾಡಿಗೆ ಕುಟುಂಬ ವಾಸ್ತವ್ಯವಿತ್ತು. 

ಸರಿತಾ ವರ್ಮ ವಿಶೇಷ ಚೇತನರಾಗಿದ್ದು, ಮೂಗಿ ಮತ್ತು ಕಿವಿ ಕೇಳದ ಸ್ಥಿತಿಯಲ್ಲಿದ್ದರು‌. ಸರಿತಾ ಬಾಯಿಗೆ ಬಟ್ಟೆಯನ್ನು ಬಿಗಿಯಾಗಿ ಕಟ್ಟಲಾಗಿದೆ. ಇದು ಶಂಕೆಗೆ ಕಾರಣವಾಗಿದ್ದು, ಹತ್ಯೆ ನಡೆಸಿದ ಬಳಿಕ ಯುವತಿಯನ್ನು ನೇಣು ಹಾಕಿದರೇ ಅನ್ನುವ ಸಂಶಯವನ್ನು ಉಳ್ಳಾಲ ಪೊಲೀಸರು ವ್ಯಕ್ತಪಡಿಸಿದ್ದಾರೆ.  ಕೆಳಗಿನ ಮನೆಯಲ್ಲಿರುವ ವೃದ್ಧ ಮಾಲೀಕರಿಗೆ ಯುವಕನೋರ್ವ ಮಧ್ಯಾಹ್ನ ಹಾಗೂ ರಾತ್ರಿ ಊಟ ತರುತ್ತಾನೆ. ಸರಿತಾ ವರ್ಮ  ಮೃತದೇಹ ಪತ್ತೆಯಾದ ದಿನದಂದು ಆತ ಎಂದಿನಂತೆ ಬಂದಿದ್ದ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯುಡಿಆರ್ ದಾಖಲಿಸಿರುವ ಪೊಲೀಸರು ಸಂಶಯಾಸ್ಪದ ವ್ಯಕ್ತಿಗಳನ್ನು ಠಾಣೆಗೆ ಕರೆಸಿ ವಿಚಾರಣೆ ಕೈಗೆತ್ತಿಕೊಂಡಿದ್ದಾರೆ‌.

 
 
 
 
 
 
 
 
 
 
 

Leave a Reply