ಕುಂದಾಪುರ : ಕರಾವಳಿಯನ್ನೇ ಬೆಚ್ಚಿ ಬೀಳಿಸಿದ್ದ ಫೈನಾನ್ಶಿಯರ್ ಅಜೇಂದ್ರ ಶೆಟ್ಟಿ ಕೊಲೆ ಪ್ರಕರಣ ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕೊಲೆ ಆರೋಪಿ ಪಾಲುದಾರ ಅನೂಪ್ ಶೆಟ್ಟಿ ಗೋವಾದಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಹೈದ್ರಾಬಾದ್ನಲ್ಲಿ ಒಂದಾದ ಸ್ನೇಹ ಹುಟ್ಟೂರಲ್ಲೇ ಅಂತ್ಯವಾಗಿದೆ.
ಅಜೇಂದ್ರ ಶೆಟ್ಟಿ ಕುಂದಾಪುರ ತಾಲೂಕಿನ ಯಡಾಡಿ ಮತ್ಯಾಡಿ ಸಮೀಪದ ಕೂಡಾಲ ನಿವಾಸಿಯಾದ್ರೆ. ಅನೂಪ್ ಶೆಟ್ಟಿ ಮೊಳಹಳ್ಳಿಯ ನಿವಾಸಿ. ಇಬ್ಬರ ಮನೆಯೂ ಅಕ್ಕಪಕ್ಕದ ಊರಿನಲ್ಲಿಯೇ ಇದ್ದರೂ ಕೂಡ ಇಬ್ಬರ ಸ್ನೇಹ ಗಾಢವಾಗಿದ್ದು ಹೈದ್ರಾಬಾದ್ನಲ್ಲಿ. ಅನೂಪ್ ಶೆಟ್ಟಿ ತಂದೆ ಹೈದ್ರಾಬಾದ್ನಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದರು. ಹೀಗಾಗಿ ಅನೂಪ್ ಶೆಟ್ಟಿ ಕೂಡ ತಂದೆಯ ಜೊತೆಗಿದ್ದ. ಇತ್ತ ಅಜೇಂದ್ರ ಶೆಟ್ಟಿ ಹೈದ್ರಾಬಾದ್ನ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದ. ಇಬ್ಬರ ಪರಿಚಯ ನಂತರ ಸ್ನೇಹಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯ ಗೊಂಡಿತು.
ತಮ್ಮೂರಲ್ಲಿ ಏನಾದರೂ ವ್ಯವಹಾರ ಮಾಡಬೇಕು ಅನ್ನುವ ಕನಸು ಹೊತ್ತ ಇವರೀರ್ವರು ಡ್ರೀಮ್ ಅನ್ನೋ ಹೆಸರಲ್ಲಿ ಫೈನಾನ್ಸ್ ವ್ಯವಹಾರವನ್ನು ಆರಂಭಿಸಿದ್ದರು. ಎಲ್ಲವೂ ಎಣಿಕೆಯಂತೆಯೇ ನಡೆಯುತ್ತಿತ್ತು. ಆದ್ರೆ ಹಣ ಕಾಸಿನ ವಿಚಾರದಲ್ಲಿ ಇಬ್ಬರ ನಡುವೆ ವೈಮನಸ್ಸು ಮೂಡಿತ್ತು. ಇದೇ ಕಾರಣಕ್ಕೆ ಇಬ್ಬರ ನಡುವೆ ಜಗಳವೂ ಆಗಿತ್ತಂತೆ. ಕೊಲೆ ಮಾಡುವ ಮುನ್ನ ಅನೂಪ್ ಶೆಟ್ಟಿ ಇಪತ್ತು ಸಾವಿರ ಹಣಡಾ ಬೇಡಿಕೆ ಇಟ್ಟಿದ್ದ. ಆದರೆ ಅಜೇಂದ್ರ ಶೆಟ್ಟಿ ಹಣ ನೀಡೋದಕ್ಕೆ ನಿರಾಕರಿಸಿದ್ದ.
ಅಜೇಂದ್ರ ಶೆಟ್ಟಿಯ ಕಾರು ಅಪಘಾತವಾದ ಬೆನ್ನಲ್ಲೇ ಹೊಸ ಕಾರೊಂದನ್ನು ಖರೀದಿ ಮಾಡಿದ್ದ. ಈ ವಿಚಾರದಲ್ಲಿ ಅನೂಪ್ ಶೆಟ್ಟಿಗೆ ಅಸಮಾಧಾನವಿತ್ತು. ತಮ್ಮದೇ ಮಾಲೀಕತ್ವದ ಡ್ರೀಮ್ ಫೈನಾನ್ಸ್ನಲ್ಲಿ ಸ್ನೇಹಿತ ಪಾಲುದಾರ ಅಜೇಂದ್ರ ಶೆಟ್ಟಿಯನ್ನು ಭೀಕರವಾಗಿ ಹತ್ಯೆ ಮಾಡಿದ್ದ ಅನೂಪ್ ಶೆಟ್ಟಿ ಸ್ಥಳದಿಂದ ಪರಾರಿಯಾಗಿದ್ದಾನೆ. ಕೊಲೆಯಾದ ಕ್ಷಣ ಮಾತ್ರದಲ್ಲಿಯೇ ಅಜೇಂದ್ರ ಶೆಟ್ಟಿಯ ಹೊಸ ಐಶಾರಾಮಿ ಕಾರಿನಲ್ಲಿ ಅನೂಪ್ ಶೆಟ್ಟಿ ಗೋವಾಕ್ಕೆ ಎಸ್ಕೇಪ್ ಆಗಿದ್ದಾನೆ.
ಪ್ರಕರಣದಲ್ಲಿ ಆರೋಪಿಯ ಬಂಧನಕ್ಕಾಗಿ ಕುಂದಾಪುರ ಪೊಲೀಸ್ ಉಪಾಧೀಕ್ಷಕರಾದ ಕೆ. ಶ್ರೀಕಾಂತ್ ರವರ ಮಾರ್ಗದರ್ಶನದಲ್ಲಿ ಕುಂದಾಪುರ ವೃತ್ತ ನಿರೀಕ್ಷಕರಾದ ಗೋಪಿಕೃಷ್ಣ ಮತ್ತು ಬೈಂದೂರು ವೃತ್ತ ನಿರೀಕ್ಷರಾದ ಸಂತೋಷ ಕಾಯ್ಕಿಣಿ ನೇತೃತ್ವದಲ್ಲಿ, ಕುಂದಾಪುರ ಉಪವಿಭಾಗದ ಅಪರಾಧ ಪತ್ತೆ ದಳದ ಸಿಬ್ಬಂದಿ ಯವರನ್ನೊಳಗೊಂಡ ವಿಶೇಷ ತಂಡವನ್ನು ರಚಿಸಿ ಆರೋಪಿಯನ್ನು ಜುಲೈ 31 ರಂದು ಗೋವಾ ರಾಜ್ಯದ ಕೋಲ್ವಾ ಬೀಚ್ ಬಳಿ ಬಂಧಿಸಲಾಗಿದೆ ಎಂದರು.
ಆರೋಪಿ ಅನೂಪ್ ಶೆಟ್ಟಿ ಈ ಮೊದಲು ದುಬಾಯಿ ಮತ್ತು ಸಿಂಗಾಪೂರದಲ್ಲಿ ಕೆಲಸ ಮಾಡಿಕೊಂಡಿದ್ದು ಬಳಿಕ ಊರಿಗೆ ಮರಳಿ ಅಜೇಂದ್ರ ಶೆಟ್ಟಿಯೊಂದಿಗೆ ಸೇರಿಕೊಂಡು ಫೈನಾನ್ಸ್ ವ್ಯವಹಾರ ಮಾಡಿಕೊಂಡಿದ್ದ. ಫೈನಾನ್ಸ್ ವ್ಯವಹಾರದಲ್ಲಿ ಇಬ್ಬರಿಗೂ ಆಗಿಂದಾಗ್ಗೆ ಗಲಾಟೆಗಳು ನಡೆದಿದ್ದು ಇದೇ ಕೊಲೆಗೆ ಪ್ರಮುಖ ಕಾರಣವಾಗಿದೆ ಎಂದು ಒಪ್ಪಿಕೊಂಡಿರುತ್ತಾನೆ. ಕೊಲೆಯ ಬಗ್ಗೆ ಇನ್ನಷ್ಟು ಮಾಹಿತಿ ಹೆಚ್ಚಿನ ತನಿಖೆಯ ಬಳಿಕ ತಿಳಿಯಲಿದೆ ಎಂದು ವಿಷ್ಣುವರ್ಧನ್ ಹೇಳಿದರು.
ಈ ವಿಶೇಷ ತಂಡದಲ್ಲಿ ಶ್ರೀಧರ್ ನಾಯ್ಕ ಪಿ.ಎಸ್.ಐ. ಶಂಕರನಾರಾಯಣ, ನಂಜನಾಯ್ಕ ಪಿ.ಎಸ್.ಐ. ಗಂಗೊಳ್ಳಿ, ಕುಂದಾಪುರ ಗ್ರಾಮಾಂತರ ಠಾಣೆಯ ಪಿ.ಎಸ್.ಐ. ನಿರಂಜನ ಗೌಡರವರೊಂದಿಗೆ ಉಪವಿಭಾಗದ ಸಿಬ್ಬಂದಿಯವರಾದ ಮೋಹನ, ಚಂದ್ರಶೇಖರ ನಾಗೇಂದ್ರ, ಶ್ರೀನಿವಾಸ, ಸಂತೋಷ್ ಕುಮಾರ್, ಸಂತೋಷ್, ರಾಘವೇಂದ್ರ, ರಾಮು, ಸೀತಾರಾಮ, ಸತೀಶ್, ಚಿದಾನಂದ, ಮಧುಸೂಧನ್ ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿಯವರಾದ ದಿನೇಶ್ ಸಹಕರಿಸಿರುತ್ತಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಬಂಧನಕ್ಕಾಗಿ ಕುಂದಾಪುರ ಪೊಲೀಸ್ ಉಪಾಧೀಕ್ಷಕರಾದ ಕೆ. ಶ್ರೀಕಾಂತ್ ರವರ ಮಾರ್ಗದರ್ಶನದಲ್ಲಿ ಕುಂದಾಪುರ ವೃತ್ತ ನಿರೀಕ್ಷಕರಾದ ಗೋಪಿಕೃಷ್ಣ ಮತ್ತು ಬೈಂದೂರು ವೃತ್ತ ನಿರೀಕ್ಷರಾದ ಸಂತೋಷ ಕಾಯ್ಕಿಣಿ, ಶಂಕರನಾರಾಯಣ ಪಿಎಸ್ ಐ ಶ್ರೀಧರ್ ನಾಯ್ಕ, ಗಂಗೊಳ್ಳಿ ಪಿಎಸ್ ಐ ನಂಜಾನಾಯ್ಕ, ಗ್ರಾಮಾಂತರ ಠಾಣೆಯ ಪಿ.ಎಸ್.ಐ. ನಿರಂಜನ ಗೌಡ ಉಪಸ್ಥಿತರಿದ್ದರು.
ಅನೂಪ್ಶೆಟ್ಟಿಯನ್ನು ಪೊಲೀಸರು ಭಾನುವಾರ ಬಂಧಿಸಿದ್ದು ಸೋಮವಾರ ಮಧ್ಯಾಹ್ನದ ಸುಮಾರಿಗೆ ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಹೆಚ್ಚಿನ ತನಿಖೆಗಾಗಿ ಆರೋಪಿಯನ್ನು ಪೊಲೀಸ್ ಅಭಿರಕ್ಷೆಗೆ (ಪೊಲೀಸ್ ಕಸ್ಟಡಿ) ನೀಡಬೇಕೆಂಬ ಅಭಿಯೋಜನೆ ಪರ ವಾದ ಆಲಿಸಿದ 1ನೇ ಜೆ.ಎಂ.ಎಫ್.ಸಿ ನ್ಯಾಯಾಧೀಶರಾದ ನಾಗ ರತ್ನಮ್ಮ ಆರೋಪಿಯನ್ನು ಆ.9 ಸೋಮವಾರ ತನಕ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದ್ದು ಅಭಿಯೋಜನೆ ಪರ ಸಹಾಯಕ ಸರಕಾರಿ ಅಭಿಯೋಜಕಿ ವರ್ಷಾಶ್ರೀ ವಾದಿಸಿದ್ದರು.