2004 ರಿಂದ 2016ರವರೆಗೆ ದೇವಸ್ಥಾನಕ್ಕೆ ಕಾಣಿಕೆ ರೂಪದಲ್ಲಿ ಸಂದಾಯವಾಗಿರುವ ಚಿನ್ನಾ ಭರಣ ಹಾಗೂ ಆಸ್ತಿಪಾಸ್ತಿಗಳನ್ನು ನಿಯಮಾನುಸಾರ ನೋಂದಣಿ ಮಾಡಿಲ್ಲ. 2016ರಲ್ಲಿ ದೇವಿಯ 4.20 ಕಿಲೋ ತೂಕದ ಬಂಗಾರದ ಹಾರ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಮನೆಯಲ್ಲಿ ಪತ್ತೆಯಾಗಿತ್ತು. ಆದರೂ ಸರ್ಕಾರಿ ಲೆಕ್ಕಪರಿಶೋಧಕರಿಗೆ ಚಿನ್ನಾಭರಣಗಳ ಮಾಹಿತಿ ಸಲ್ಲಿಸದಿರುವುದು ಆಶ್ಚರ್ಯ ತಂದಿದೆ ಎಂದರು.
ದೇವಸ್ಥಾನದ ಸಿಬ್ಬಂದಿ ಬಗ್ಗೆ ಯಾವುದೇ ನಿಖರ ಮಾಹಿತಿ ಲಭ್ಯವಿಲ್ಲ. ಇದನ್ನು ಗಮನಿಸಿದರೆ ನಕಲಿ ನೌಕರರ ಹೆಸರಿನಲ್ಲಿ ಸಂಬಳ ಹಣವನ್ನು ಅಧಿಕಾರಿಗಳೇ ಕಬಳಿಸುತ್ತಿರುವ ಅನುಮಾನ ವ್ಯಕ್ತವಾಗುತ್ತಿದೆ. ಸಿಬ್ಬಂದಿಯ ಸಂಬಳದಲ್ಲಿ ಕಡಿತ ಮಾಡಿದ ಭವಿಷ್ಯ ನಿಧಿಯನ್ನು ಇಲಾಖೆಗೆ ಸಲ್ಲಿಸದೇ ಇರುವ ಕಾರಣ ಈ ಹಿಂದೆ 7.46 ಲಕ್ಷ ರೂ. ದಂಡ ಹಾಕಲಾಗಿತ್ತು. ಇದನ್ನು ಸಂಬಂಧಪಟ್ಟ ಅಧಿಕಾರಿಯಿಂದ ವಸೂಲಿ ಮಾಡುವ ಬದಲು ದೇವಸ್ಥಾನದ ಖಾತೆಯಿಂದ ಭರಿಸಲಾಗಿದೆ ಎಂದರು.
ಮಹಾಸಂಘದ ಸದಸ್ಯರಾದ ಸುನೀಲ್ ಘನವಟ್, ಪ್ರಭಾಕರ ನಾಯಕ್, ಶ್ರೀನಿವಾಸ, ಚಂದ್ರ ಮೊಗೇರ, ಮಧುಸೂದನ ಐಯ್ಯರ್ ಉಪಸ್ಥಿತರಿದ್ದರು.