ಬ್ರಹ್ಮಾವರ: ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಉಪ್ಪಿನಕೋಟೆ ಎಂಬಲ್ಲಿರುವ
ಫ್ಲ್ಯಾಟ್ ನಲ್ಲಿ ದುಷ್ಕರ್ಮಿಗಳು ಮಹಿಳೆಯೊಬ್ಬರನ್ನು ಕುತ್ತಿಗೆಗೆ ವಯರ್ ಬಿಗಿದು ಕೊಲೆ
ಮಾಡಿರುವ ಘಟನೆ ನಡೆದಿದೆ.
ಕೊಲೆಯಾದವರನ್ನು ವಿಶಾಲ ಗಾಣಿಗ(35) ಎಂದು ಗುರುತಿಸಲಾಗಿದೆ. ಇವರು ಜು.11ರಂದು ರಾತ್ರಿಯಿಂದ ಮನೆಯಲ್ಲಿ ಒಬ್ಬರೆ ಇದ್ದ ಸಂದರ್ಭದಲ್ಲಿ ದುಷ್ಕಮಿಗಳು ಫ್ಲ್ಯಾಟ್ ಗೆ ಆಗಮಿಸಿ ಮಹಿಳೆಯನ್ನು ಕೊಲೆ ಮಾಡಿದ್ದಾರೆಂದು ಶಂಕಿಸಲಾಗಿದೆ.
ಇಂದು ಸಂಜೆ ವೇಳೆ ಈ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ವಿಶಾಲ ಗಾಣಿಗ ಅವರ ಪತಿ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ.
ತಮ್ಮ ತಂದೆಯ ಜೊತೆ ಇಂದು ಗಂಗೊಳ್ಳಿಯ ಮನೆಗೆ ಹೋಗುವವರಿದ್ದರು. ದಾರಿ ಮದ್ಯೆ ಬ್ಯಾಂಕ್ ನ ಕೆಲಸ ಇರುವ ಕಾರಣ ಅದನ್ನು ಮುಗಿಸಿ ಗಂಗೊಳ್ಳಿ ಮನೆಗೆ ಬರುವೆ ಎಂದು ತಿಳಿಸಿದ್ದರು.
ಸಂಜೆಯಾದರೂ ಮನೆಗೆ ಬಾರದ ಕಾರಣ ಮಗಳನ್ನು ಹುಡುಕಿ ಬ್ರಹ್ಮಾವರಕ್ಕೆ ತಂದೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಘಟನೆ ಬೆಳಕಿಗೆ ಬಂದಿದೆ. ಬ್ಯಾಂಕ್ ಕೆಲಸ ಮುಗಿಸಿ ಮನೆಗೆ ಹಿಂತಿರುಗಿದಾಗ ಘಟನೆ ನಡೆದಿದೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ದುಷ್ಕಮಿಗಳು ಕೊಲೆಗೈದ ಬಳಿಕ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ದೋಚಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಎಸ್ಪಿ ವಿಷ್ಣುವರ್ಧನ್, ಹೆಚ್ಚುವರಿ ಎಸ್ಪಿ ಕುಮಾರ ಚಂದ್ರ ಆಗಮಿಸಿ
ಪರಿಶೀಲನೆ ನಡೆಸಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.