ನಾರಿ ಮುನಿದರೆ ಮಾರಿ ಎಂಬ ಮಾತು ಮತ್ತೊಮ್ಮೆ ಸಾಬೀತಾಗಿದೆ. ಬಸ್ ನಲ್ಲಿ ಅನುಚಿತವಾಗಿ ವರ್ತಿಸಿದ ದುರುಳನನ್ನು ಯುವತಿಯೊಬ್ಬಳು ಅಟ್ಟಿಸಿಕೊಂಡು ಹೋಗಿ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಕೇರಳದ ಕರಿವೆಲ್ಲೂರಿನಲ್ಲಿ ನಡೆದಿದೆ.
ಕಣ್ಣೂರಿನಿಂದ ಕನ್ಹಂಗದ್ ಪ್ರದೇಶಕ್ಕೆ ಕೆಎಸ್ಆರ್ಟಿಸಿ ಮೂಲಕ ಕಣ್ಣೂರಿನ ಕರಿವೇಲೂರು ಮೂಲದ ಆರ್.ಟಿ.ಆರತಿ ಎಂಬಾಕೆ ಪ್ರಯಾಣ ಮಾಡುತ್ತಿದ್ದಳು.
ಈ ವೇಳೆ ವ್ಯಕ್ತಿಯೊಬ್ಬ ಆರತಿ ಜತೆ ಅಸಭ್ಯವಾಗಿ ನಡೆದುಕೊಂಡಿದ್ದಾನೆ. ಆರೋಪಿಯನ್ನು ರಾಜೀವ್ (52) ಎಂದು ಗುರುತಿಸಲಾಗಿದೆ.
ಬಸ್ ನೀಲೇಶ್ವರಮ್ಗೆ ತೆರಳುತ್ತಿದ್ದಂತೆ ಆಕೆಯ ಜತೆ ರಾಜೀವ್ ಅನುಚಿತವಾಗಿ ವರ್ತಿಸಿದ್ದಾನೆ. ಅನೇಕ ಬಾರಿ ಆತನಿಗೆ ಆರತಿ ಎಚ್ಚರಿಕೆ ನೀಡಿದರು. ತನ್ನ ನೀಚ ಕೆಲವನ್ನು ಆತ ಮುಂದುವರಿಸಿದ್ದಾನೆ.
ಬಸ್ನಲ್ಲಿ ಆರತಿಗೆ ಕಿರುಕುಳ ನೀಡುತ್ತಿದ್ದರೂ ಬಸ್ಸಿನಲ್ಲಿದ್ದ ಯಾರೊಬ್ಬರು ಕೂಡ ಅವಳಿಗೆ ಸಹಾಯ ಮಾಡಲಿಲ್ಲ ಎನ್ನಲಾಗಿದೆ.
ಇದಾದ ಬಳಿಕ ಆರತಿ ಪಿಂಕ್ ಪೊಲೀಸರಿಗೆ ಕಾಲ್ ಮಾಡಿ ಮಾಹಿತಿ ನೀಡುತ್ತಾಳೆ. ಇದು ಗೊತ್ತಾಗಿ ಬಸ್ ಕನ್ಹಾಂಗದ್ ನಿಲ್ದಾಣದಲ್ಲಿ ನಿಲ್ಲುತ್ತಿದ್ದಂತೆ ಬಸ್ನಿಂದ ಇಳಿದು ಆರೋಪಿ ಪರಾರಿಯಾಗುತ್ತಾನೆ. ಆತನನ್ನು ಯಾವುದೇ ಕಾರಣಕ್ಕೂ ಬಿಡಲೇಬಾರದು ಎಂದು ನಿರ್ಧಾರಕ್ಕೆ ಬರುವ ಆರತಿ, ಆತನನ್ನು ಅಟ್ಟಿಸಿಕೊಂಡು ಹೋಗುತ್ತಾಳೆ. ಅಲ್ಲದೆ, ಆರೋಪಿಯು ಮಿಸ್ ಆಗಬಾರದು ಅಂತಾ ಫೋಟೋವನ್ನು ತನ್ನ ಮೊಬೈಲ್ನಲ್ಲಿ ಸೆರೆ ಹಿಡಿದುಕೊಳ್ಳುತ್ತಾಳೆ.
ಆರೋಪಿ ರಾಜೀವ್ ಲಾಟರಿ ಕೊಳ್ಳುವ ಗ್ರಾಹಕನಂತೆ ನಾಟಕವಾಡಿ, ಅಂಗಡಿ ಒಳಗೆ ಹೋದಾಗ ಸ್ಥಳೀಯರ ನೆರವಿನಿಂದ ಆತನನ್ನು ಆರತಿ ಹಿಡಿಯುತ್ತಾಳೆ. ಬಳಿಕ ಆತನನ್ನು ಕನ್ಹಾಂಗದ್ ಪೊಲೀಸರಿಗೆ ಒಪ್ಪಿಸುತ್ತಾಳೆ.
ಆಕೆ ನೀಡಿದ ದೂರಿನ ಆಧಾರದ ಮೇಲೆ ಆರೋಪಿ ರಾಜೀವ್ನನ್ನು ಪೊಲೀಸರು ಬಂಧಿಸಿದ್ದಾರೆ.