ಮಂಗಳೂರು: ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿರುವ ಇಡ್ಯಾ ಗ್ರಾಮದ ಜಾರ್ಡಿನ್ ಅಪಾರ್ಟ್ ಮೆಂಟ್ ನಲ್ಲಿ ಆ.17 ರಂದು ಕಳ್ಳತನ ನಡೆದಿತ್ತು. ಇದಕ್ಕೆ ಸಂಬಂಧಿಸಿದಂತೆ ನಾಲ್ಕು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಮಂಗಳವಾರ ನಡೆದ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಸುರತ್ಕಲ್ ನ ಗ್ರಾಮವೊಂದರ ಜಾರ್ಡಿನ್ ಅಪಾರ್ಟ್ ಮೆಂಟ್ ನಿವಾಸಿಯಾಗಿದ್ದ ವಿದ್ಯಾ ಪ್ರಭು ಅವರ ಫ್ಲ್ಯಾಟ್ ಗೆ ರಾತ್ರಿ ವೇಳೆ ಬಾಲ್ಕನಿಯಿಂದ ಒಳ ನುಗ್ಗಿದ ಕಳ್ಳರು ಹಣ ಮತ್ತು ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ತನಿಖೆ ನಡೆಸಿದ ಪೋಲಿಸರು ಕೇರಳ ತಿರುವನಂತಪುರಂ ಮೂಲದ ಆರೋಪಿಗಳಾದ ರಘು ಮತ್ತು ಅಮೇಶ್ ಈ ಇಬ್ಬರನ್ನು ಸೆ. 15 ರಂದು ಬಂಧಿಸಿದ್ದರು.
ಇನ್ನುಳಿದಆರೋಪಿಗಳ ಪತ್ತೆಗೆ ಮುಂದಾದಗ ಒಬ್ಬ ಅದೇ ಫ್ಲಾಟಿನಲ್ಲಿ ವಾಸವಿದ್ದು ಕಳ್ಳತನಕ್ಕೆ ಸಂಚು ರೂಪಿಸಿದ್ದ, ವೈನ್ ಶಾಪ್ ಒಂದರಲ್ಲಿ ಮೆನಜರ್ ಕೆಲಸ ಮಾಡಿಕೊಂಡಿದ್ದ, ಸೇನೆಯಿಂದ ನಿವೃತ್ತಗೊಂಡಿರುವ ನವೀನ್ ಮತ್ತು ಇನ್ನೋರ್ವ ಅದೇ ವೈನ್ ಶಾಪಿನಲ್ಲಿ ವೈಟರ್ ಕೆಲಸ ಮಾಡುತ್ತಿದ್ದ ಬೆಳ್ತಂಗಡಿಯ ಸಂತೋಷ್ ಎಂಬ ಇಬ್ಬರನ್ನು ಸೆ. 18ರಂದು ಸುರತ್ಕಲ್ ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳ್ಳತನ ಮಾಡಿದ ಹಣವನ್ನು ಆರೋಪಿಗಳು ದುಂದುವೆಚ್ಚ ಮಾಡಿದ್ದಾರೆ. ಅವರ ವಶದಲ್ಲಿದ್ದ ರೂ.30,85,710 ನಗದು ಮತ್ತು 224 ಗ್ರಾಂ ಚಿನ್ನಾಭರಣಗಳನ್ನು ಸ್ವಾಧೀನ ಪಡಿಸಿಕೊಂಡು ,ಕೃತ್ಯಕ್ಕೆ ಉಪಯೋಗಿಸಿದ ಕಾರು ಮತ್ತು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಇವರಿಷ್ಟೆ ಅಲ್ಲದೆ ಈ ಪ್ರಕರಣದಲ್ಲಿ ಕೇರಳ ಮೂಲದ ಇನ್ನಿಬ್ಬರು ಆರೋಪಿಗಳಿದ್ದು ಅವರನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಹೇಳಲಾಗಿದೆ.