ಉಜಿರೆಯಲ್ಲಿ ಅಪಹರಣಗೊಂಡಿದ್ದ ಬಾಲಕನನ್ನು ರಕ್ಷಿಸಿದ ಪೊಲೀಸರು

ಬೆಳ್ತಂಗಡಿ: ಸಿನಿಮೀಯ ರೀತಿಯಲ್ಲಿ ಉಜಿರೆಯಲ್ಲಿ ನಡೆದಿದ್ದ ಬಾಲಕನ ಕಿಡ್ನಾಪ್ ಪ್ರಕರಣಕ್ಕೆ ಕೊನೆಗೂ ತೆರೆ ಬಿದ್ದಿದ್ದು ಪೊಲೀಸರು ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಗುವನ್ನು ಕೋಲಾರದಲ್ಲಿ ಪತ್ತೆ ಹಚ್ಚಿ 6 ಜನ ಅಪಹರಣಕಾರರನ್ನು ಪೊಲೀಸರು ಬಂಧಿಸಿದ್ದಾರೆ. ಅಪಹರಣ ವಾದ 48 ಗಂಟೆಗಳಲ್ಲಿ ಈ ಪ್ರಕರಣವನ್ನು ಭೇದಿಸಿದ್ದಾರೆ. ಉಜಿರೆ ರಥಬೀದಿಯ ಬಿಜೋಯ್ ಅವರ ಮಗ ಅನುಭವ್ (8) ಮನೆಯ ಅಂಗಳದಲ್ಲಿ ಆಡುತ್ತಿದ್ದಾಗ ಎರಡು ದಿನಗಳ ಹಿಂದೆ ಕಿಡ್ನಾಪ್ ಮಾಡಿದ್ದರು. ಈ ಪ್ರಕರಣ ಉಭಯ ಜಿಲ್ಲೆಗಳಲ್ಲಿ ಸಾಕಷ್ಟು ಆತಂಕ ಸೃಷ್ಟಿ ಮಾಡಿತ್ತು.

ಅಪಹರಣ ಘಟಿಸಿದ ಕೂಡಲೇ ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ನೇತೃತ್ವದಲ್ಲಿ ನಾಲ್ಕು ತಂಡಗಳ ರಚನೆ ಮಾಡಿ ಪ್ರಕರಣವನ್ನು ಬೇಧಿಸಲು ಕಾರ್ಯಪ್ರವೃತ್ತರಾಗಿದ್ದರು. ಶುಕ್ರವಾರ (ಡಿ. 18) ರಾತ್ರಿಯಿಂದಲೆ ಕೋಲಾರದಲ್ಲಿ ಬೀಡುಬಿಟ್ಟ ಪೊಲೀಸರು, ಘಟನೆ ನಡೆದ 48 ಗಂಟೆಗಳೊಳಗೆ ಪ್ರಕರಣವನ್ನು ಬೇಧಿಸುವಲ್ಲಿ ಸಫಲರಾಗಿದ್ದಾರೆ.

ಶನಿವಾರ ಬೆಳಗ್ಗೆ 5 ರ ಹೊತ್ತಲ್ಲಿ ವಿಶೇಷ ತಂಡಧ ಪೊಲೀಸರು ಕೋಲಾರದ ಮಾಸ್ತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಹರಣಕಾರರನ್ನು ಮಗುವಿನೊಂದಿಗೆ ಪತ್ತೆ ಹಚ್ಚಿದರು. ಬಂಧಿತ ಅಪಹರಣಕಾರರನ್ನು ಕೋಲಾರ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.

ಆರೋಪಿಗಳನ್ನು ಅಪರಾಹ್ನ 11 ರ ವೇಳೆಗೆ ಕೋಲಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಬೆಳ್ತಂಗಡಿ ನ್ಯಾಯಾಲಯಕ್ಕೆ ಕರೆತರಲಾಗುತ್ತದೆ ಎನ್ನಲಾಗಿದೆ. ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ., ಉಪನಿರೀಕ್ಷಕ ಬಂದಕುಮಾರ್, ಧರ್ಮಸ್ಥಳ ಠಾಣೆ ಉಪನಿರೀಕ್ಷಕ ಪವನ್ ಕುಮಾರ್ ನೇತೃತ್ವದ ವಿಶೇಷ ತಂಡ ಬಂಧಿತರನ್ನು ಹಾಜರು ಪಡಿಸುವ ಸಾಧ್ಯತೆ ಇದೆ.

 
 
 
 
 
 
 
 
 
 
 

Leave a Reply