ಉಡುಪಿ: 12 ಲಕ್ಷ ಲಾಟರಿ ಗೆದ್ದಿದ್ದು, ಬಹು ಮಾನದ ಹಣ ಪಡೆಯಲು ಹಣಕಟ್ಟ ಬೇಕೆಂಬ ದುಷ್ಕರ್ಮಿಗಳ ಮಾತು ನಂಬಿ ಉಡುಪಿ ಕಾರ್ಕಳ ಮೂಲದ ಯುವಕನೊಬ್ಬ ಎರಡು ಲಕ್ಷ ನೀಡಿ ಮೋಸ ಹೋದ ಘಟನೆ ನಡೆದಿದೆ.
ಕಾರ್ಕಳ ಬೆಳ್ಮಣ್ ನಿವಾಸಿ 19 ವರ್ಷ ಪ್ರಾಯದ ಯುವಕನಿಗೆ ತಾವು 12,18,095 ರೂ. ಹಣದ ಲಾಟರಿ ಗೆದ್ದಿರುವುದಾಗಿ ಮೊಬೈಲ್ ಗೆ ಮೆಸೇಜ್ ಬಂದಿತ್ತು.
ರಾಮ ಪ್ರಕಾಶ ಪಟೇಲ್ ಎಂಬ ವ್ಯಕ್ತಿಯು ಕರೆ ಮಾಡಿ ನಂಬಿಸಿ ಲಾಟರಿಯ 17400 ಡಾಲರ್ ಹಣ ವನ್ನು ರೂಪಾಯಿಗೆ ವರ್ಗಾವಣೆ ಮಾಡಲು 6,500 ಹಣವನ್ನು ಕಟ್ಟ ಬೇಕು ಎಂದು ಹೇಳಿ ಬ್ಯಾಂಕ್ ಖಾತೆ ವಿವರ ನೀಡಿದ್ದ.
ಅದರಂತೆ ಡಿಪಾಸಿಟ್ ಮಾಡಿಸಿಕೊಂಡು, ನಂತರ ಇನ್ನೊಬ್ಬ ಪಂಕಜ್ ಸಿಂಗ್ ಅಧೋರಿಯಾ ಎಂಬವನು ಕರೆ ಮಾಡಿ ಬೇರೆ ಬೇರೆ ಖಾತೆಯ ನಂಬ್ರ ಗಳನ್ನು ನೀಡಿ ಆ ಖಾತೆಗಳಿಗೆ ಹಣ ಡಿಪಾಸಿಟ್ ಮಾಡುವಂತೆ ತಿಳಿಸಿದ್ದರು.
ಒಟ್ಟು ರೂಪಾಯಿ 2, 05,500 ಸಾವಿರ ಹಣವನ್ನು ವಂಚನೆಯಿಂದ ಬರೊಡ ಬ್ಯಾಂಕಿನ ಮೊಬೈಲ್ ಆ್ಯಪ್ ಮೂಲಕ ಡಿಪಾಸಿಟ್ ಮಾಡಿಸಿಕೊಂಡು ಹಣವನ್ನು ನೀಡದೆ ಮೋಸ ಮಾಡಿದ್ದಾರೆ.
ಈ ಬಗ್ಗೆ ಯುವಕ ನೀಡಿದ ದೂರಿನಂತೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.