ಬೆಂಗಳೂರು: ರಾಜ್ಯದಲ್ಲಿ ಕರೋನಾ ಎರಡನೇ ಅಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಹೊರಡಿಸಿದೆ. ಇದರಂತೆ ಮತ್ತೆ ಶೇ. 50 ಆಸನ ಅವಕಾಶ ನಿರ್ಬಂಧವನ್ನು ಹೇರಲಾಗಿದ್ದು, ಈ ಮೂಲಕ ಎಲ್ಲ ವ್ಯಾಪಾರಸ್ಥರಿಗೆ ಮತ್ತೊಮ್ಮೆ ಕರೊನಾ ಶಾಕ್ ಎದುರಾಗಿದೆ.
ಇದೀಗ ಉದ್ಯಮ ಕ್ಷೇತ್ರದ ಮೇಲೆ ಮತ್ತೆ ಕರಿಛಾಯೆ ಆವರಿಸುವ ಸಾಧ್ಯತೆ ಎಲ್ಲಾ ರೀತಿಯಲ್ಲೂ ಕಾಣುತ್ತಿದೆ.ಇದಲ್ಲದೆ ಶಾಲೆ, ಜಿಮ್, ಕ್ಲಬ್, ಪಾರ್ಟಿಹಾಲ್, ಈಜುಕೊಳಗಳನ್ನು ಮುಚ್ಚಲು ಸೂಚಿಸಲಾಗಿದೆ. ವಿದ್ಯಾಗಮವೂ ಸೇರಿ 6ರಿಂದ 9ನೇ ತರಗತಿ ಸ್ಥಗಿತಗೊಳಿಸಲಾಗಿದೆ. ಎಸ್ಎಸ್ಎಲ್ಸಿ ಹಾಗೂ ಪಿಯುಸಿ ತರಗತಿಗಳು ಮುಂದುವರಿದಿದೆ, ಆದರೆ ಹಾಜರಾತಿ ಕಡ್ಡಾಯ ಇರುವುದಿಲ್ಲ.
ರಾಜ್ಯದಲ್ಲಿ ಹೆಚ್ಚಾಗಿ ಕರೋನಾ ಪ್ರಕರಣಗಳು ಕಂಡುಬರುತ್ತಿರುವ ಬೆಂಗಳೂರು, ಮೈಸೂರು, ಕಲಬುರಗಿ, ದಕ್ಷಿಣ ಕನ್ನಡ, ಉಡುಪಿ, ಬೀದರ್, ಧಾರವಾಡ ಜಿಲ್ಲೆಗಳಲ್ಲಿ ಪಬ್, ಬಾರ್, ಕ್ಲಬ್, ರೆಸ್ಟೋರೆಂಟ್ ಹಾಗೂ ಚಿತ್ರಮಂದಿರಗಳಲ್ಲಿ ಗ್ರಾಹಕರ ಸಂಖ್ಯೆ ಶೇ. 50 ಮೀರುವಂತಿಲ್ಲ. ಈ ನಿರ್ಬಂಧಗಳೂ ಏಪ್ರಿಲ್ 20ರ ವರೆಗೆ ಜಾರಿಯಲ್ಲಿರಲಿವೆ.