ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ವತಿಯಿಂದ ಗುಂಡಿಬೈಲು ಬ್ರಾಹ್ಮಿ ಸಭಾಭವನದಲ್ಲಿ ಲೋಕ ಕಲ್ಯಾಣಾರ್ಥವಾಗಿ ಮತ್ತು ಸಮಸ್ತ ಸಮಾಜದ ಶ್ರೇಯೋಭಿವೃದ್ಧಿಗಾಗಿ 25ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಲಕ್ಷ್ಮಿ ಹೃದಯ ಹೋಮ ಮೂಡಬೆಟ್ಟು ರಮೇಶ್ ಭಟ್ಟ ಇವರ ನೇತೃತ್ವದಲ್ಲಿ ಭಕ್ತಿ ಶ್ರದ್ಧಾಪೂರ್ವಕವಾಗಿ ವಿಜೃಂಭಣೆಯಿಂದ ಸಂಪನ್ನಗೊಂಡಿತು. ಬೆಳಿಗ್ಗೆ ಪರಿಷತ್ತಿನ ಮಹಿಳಾ ಸದಸ್ಯರಿಂದ ಭಜನೆ ನಂತರ ಆಸುಪಾಸಿನ ವಿವಿಧ ವಲಯಗಳ ವಿಪ್ರ ಸದಸ್ಯರಿಂದ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ನಡೆಯಿತು. ಈ ಸಂದರ್ಭದಲ್ಲಿ ಸಮಾಜದ ಅಶಕ್ತರಿಗೆ ರೂ. 30,000 ವೈದ್ಯಕೀಯ ಸಹಾಯಧನ ವಿತರಿಸಲಾಯಿತು ಹಾಗೂ ರಜತ ವರ್ಷದ ಇನ್ನೊಂದು ಮಹತ್ವಾಕಾಂಕ್ಷೆಯ ಯೋಜನೆಯಾಗಿ ಸ್ವಂತ ಜಾಗ ಹೊಂದಿದ ಆರ್ಥಿಕವಾಗಿ ಹಿಂದುಳಿದ ವಿಪ್ರ ಸಮಾಜದ ಒಂದು ಕುಟುಂಬಕ್ಕೆ ಮುಂದಿನ ವರ್ಷದಲ್ಲಿ ಉಚಿತವಾಗಿ ಮನೆ ಕಟ್ಟಿಕೊಡುವ ಸಂಕಲ್ಪ ಕೈಗೊಳ್ಳಲಾಯಿತು. ಯುವ ಬ್ರಾಹ್ಮಣ ಪರಿಷತ್ತಿನ ಅಧ್ಯಕ್ಷರಾದ ಚೈತನ್ಯ ಎಂ.ಜಿ. , ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಎನ್., ಕೋಶಾಧಿಕಾರಿ ಕುಮಾರಸ್ವಾಮಿ ಉಡುಪ ಮತ್ತಿತರರು ಉಪಸ್ಥಿತರಿದ್ದರು.