ಉಡುಪಿ : ಯಕ್ಷಗಾನ ಕಲಾರಂಗ 16 ವರ್ಷಗಳ ಹಿಂದೆ ಕಲಾವಿದರಿಗಾಗಿ ಆರಂಬಿಸಿದ ‘ಜೀವನ ಆನಂದ’ ವಿಮೆಯ ಪಾಲಸಿದಾರರಾದ ಮಂದಾರ್ತಿ ಮೇಳದ ಕಲಾವಿದರಾದ ಸಾಧು ಕೊಠಾರಿ ಯವರು ಇತ್ತೀಚೆಗೆ ಮೇಳದ ಚೌಕಿಯಲ್ಲಿ ನಿಧನ ಹೊಂದಿದ್ದು, ಅವರ ವಿಮಾ ಮೊತ್ತ 1 ಲಕ್ಷ ರೂ, ಜತೆಗೆ ಬೋನಸ್ 65 ಸಾವಿರ ರೂಪಾಯಿಯನ್ನು ಯಕ್ಷಗಾನ ಕಲಾರಂಗದ ಅಧ್ಯಕ್ಷರಾದ ಎಂ. ಗಂಗಾಧರ ರಾವ್ ಸಾಧು ಕೊಠಾರಿಯವರ ಪತ್ನಿ ಶಕುಂತಲಾ ಕೊಠಾರಿಗೆ ಹಸ್ತಾಂತರಿಸಿದರು.
ವಾರ್ಷಿಕ ಪ್ರೀಮಿಯಮ್ನ ಭಾಗಶಃ ಹಣವನ್ನು ಸಂಸ್ಥೆ ನೀಡುತ್ತಾ ಬಂದಿದ್ದು, 53ಕಲಾವಿದರು ಈ ಯೋಜನೆಯಲ್ಲಿ ತೊಡಗಿಸಿ ಕೊಂಡಿದ್ದಾರೆ. ಇದರೊಂದಿಗೆನೆರವಿನ ರೂಪದಲ್ಲಿ ಸಂಸ್ಥೆಯ ವತಿಯಿಂದ 20ಸಾವಿರ ರೂಪಾಯಿಯನ್ನು ಫೆಬ್ರವರಿ 08.2021೧ರಂದು ಕಲಾರಂಗದ ಕಛೇರಿಯಲ್ಲಿ ನೀಡಿ ನೊಂದ ಕುಟುಂಬವನ್ನು ಸಂತೈಸಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಮುರಲಿ ಕಡೆಕಾರ್, ಕೋಶಾಧಿಕಾರಿ ಮನೋಹರ ಕೆ., ಜತೆ ಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ಹಾಗೂ ಸಾಧು ಕೊಠಾರಿಯವರ ಪುತ್ರಿ ಮಾಧುರಿ ಉಪಸ್ಥಿತರಿದ್ದರು.