ಉಡುಪಿ : ವಿಶ್ವ ಮೀನುಗಾರಿಕೆ ದಿನ ಆಚರಣೆ

ಉಡುಪಿ : ಉಡುಪಿ ತಾಲೂಕು ಕುಕ್ಕೆಹಳ್ಳಿಯ ಮಹೇಶ್ ಹೆಬ್ಬಾರ್ ಅವರ ಮೀನುಕೃಷಿ ಕ್ಷೇತ್ರದಲ್ಲಿ ಇತ್ತೀಚೆಗೆ ವಿಶ್ವ ಮೀನುಗಾರಿಕೆ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಕೂರ್ಮರಾವ್ ಎಂ. ಮಾತನಾಡಿ, ಮೀನು ಕೃಷಿಕರು ಇಲಾಖೆಯ ಕಾರ್ಯಕ್ರಮಗಳ ಸದುಪಯೋಗಪಡಿಸಿಕೊಂಡು ಸ್ವಾವಲಂಭಿಗಳಾಗುವಂತೆ ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ವೈ ಮಾತನಾಡಿ, ಜಿಲ್ಲೆಯಲ್ಲಿ ಸಮುದ್ರ ಮೀನುಗಾರಿಕೆಯ ಜೊತೆಗೆ ಒಳನಾಡು ಮೀನುಗಾರಿಕೆಗೂ ಸಾಕಷ್ಟು ಅವಕಾಶಗಳಿವೆ. ಕೃಷಿಕರು ತಮ್ಮ ಜಮೀನಿನಲ್ಲಿ ಕೃಷಿ

ಹೊಂಡ ನಿರ್ಮಿಸಿಕೊಳ್ಳುವುದರ ಜೊತೆಗೆ ಮೀನುಗಾರಿಕೆಗೆ ಯೋಗ್ಯವಾಗಿರುವ ಗ್ರಾಮ ಪಂಚಾಯತ್ ಕೆರೆಗಳನ್ನೂ ಸಹ ಆಯ್ಕೆ ಮಾಡಿಕೊಂಡು ಹೆಚ್ಚು ಮೀನುಕೃಷಿಯಲ್ಲಿ ತೊಡಗಿಕೊಳ್ಳಬೇಕು. ಇಲಾಖೆಯ ಮಿಷನ್ ಮಿಲಿಯನ್ ಟನ್ ಮೀನು ಉತ್ಪಾದನಾ ಗುರಿ ತಲುಪಲು ಶ್ರಮವಹಿಸಬೇಕು ಎಂದರು.

ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಗಣೇಶ್ ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿವಕುಮಾರ್ ಮೀನುಕೃಷಿ ಕುರಿತು, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಮತ್ಸ್ಯ ವಿಜ್ಞಾನಿ ಶ್ರೀನಿವಾಸ ಹುಲುಕೋಡಿ ಮೀನುಮರಿ ಸಾಕಾಣಿಕೆ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಮೀನುಗಾರಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಮೀನುಕೃಷಿ ಕೊಳದ ಮಾಲೀಕ ಮಹೇಶ್ ಹೆಬ್ಬಾರ್, ಮೀನು ಕೃಷಿಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಉಡುಪಿಯ ಮೀನುಗಾರಿಕಾ ಉಪನಿರ್ದೇಶಕ ಶಿವಕುಮಾರ್ ಜಿ.ಎಂ ಸ್ವಾಗತಿಸಿ, ನಿರೂಪಿಸಿದರು. ಮಲ್ಪೆಯ ಮೀನುಗಾರಿಕಾ ಉಪನಿರ್ದೇಶಕ ರವಿಕುಮಾರ್ ವಂದಿಸಿದರು.

ನಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ರಾಕೇಶ್ ಪೂಜಾರಿ ಯವರ ಬಯೋಫ್ಲಾಕ್ ಘಟಕಕ್ಕೆ ಭೇಟಿ ನೀಡಿ, ಮಾಹಿತಿ ಪಡೆದರು.

 
 
 
 
 
 
 
 
 

Leave a Reply