ಉಳ್ಳಾಲದಲ್ಲಿ ಯಾವುದೇ ತಲವಾರು ದಾಳಿ ಯತ್ನ ನಡೆದಿಲ್ಲ‌: ಪೊಲೀಸ್‌ ಆಯುಕ್ತ ಎನ್‌.ಶಶಿಕುಮಾರ್‌

ಉಳ್ಳಾಲದಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆಗೆ ಯತ್ನ ಆಗಿದೆ ಎಂಬ ಸುದ್ದಿಯಲ್ಲಿ ಹುರುಳಿಲ್ಲ. ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ಸ್ಪಷ್ಟನೆ ನೀಡಿದ್ದಾರೆ. 

ಇತ್ತೀಚೆಗೆ ಸುರತ್ಕಲ್ ನಲ್ಲಿ ಹತ್ಯೆ ಘಟನೆಯಾದ ಬೆನ್ನಲ್ಲೇ ಎಂಆರ್ ಪಿಎಲ್ ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಮೇಲೆ ಹಲ್ಲೆ ಆಗಿದೆ ಎಂದು ಸುದ್ದಿ ಹಬ್ಬಿಸಲಾಗಿತ್ತು. ಪರಿಶೀಲನೆ ನಡೆಸಿದಾಗ, ಅದು ಸುಳ್ಳು ಸುದ್ದಿಯಾಗಿತ್ತು. ಇವತ್ತು ಬೆಳಗ್ಗೆ ಉಳ್ಳಾಲದಲ್ಲಿ ವ್ಯಕ್ತಿ ಮೇಲೆ ಹಲ್ಲೆ ಆಗಿದೆಯೆಂದು ಜಾಲತಾಣದಲ್ಲಿ ವದಂತಿ ಎಬ್ಬಿಸಲಾಗಿದೆ. ಆದರೆ ಅಂತಹ ಯಾವುದೇ ಘಟನೆ ನಡೆದಿಲ್ಲ. ದೂರು ನೀಡಿರುವ ವ್ಯಕ್ತಿಯನ್ನು ವಿಚಾರಣೆ ನಡೆಸಿದ್ದೇನೆ. ಮನೆಯ ಬಳಿ ಯಾರೋ ಹಿಂದಿನಿಂದ ಬಂದಂತಾಯ್ತು ಅಂತ ಹೇಳಿದ್ದಾರೆ. ನಾವು ಆತನನ್ನು ಪರಿಶೀಲನೆ ಮಾಡುತ್ತಿದ್ದೇವೆ ಎಂದು ಕಮಿಷನರ್ ತಿಳಿಸಿದ್ದಾರೆ. 

ಸ್ಥಳೀಯ ಮಾಧ್ಯಮಗಳು ಇಂತಹ ಸುದ್ದಿ ಪ್ರಸಾರದ ವೇಳೆ ಪೊಲೀಸರಿಂದ ಸ್ಪಷ್ಟನೆ ಪಡೆದುಕೊಳ್ಳಬೇಕು.‌ ಕೋಮು ಸಾಮರಸ್ಯ ಕದಡಿರುವ ಸಂದರ್ಭದಲ್ಲಿ ಜಾಲತಾಣದಲ್ಲಿ ಹರಡುವ ವದಂತಿಗಳನ್ನು ನಂಬಿ ಸುದ್ದಿ ಮಾಡಬಾರದು. ಕೋಮು ಸಾಮರಸ್ಯ ಕಾಪಾಡುವುದು ಎಲ್ಲರ ಜವಾಬ್ದಾರಿ. ಸಾರ್ವಜನಿಕರು ಸಂಯಮದಿಂದ ವರ್ತಿಸಬೇಕು ಎಂದು ಕಮಿಷನರ್ ಮನವಿ ಮಾಡಿದ್ದಾರೆ.

 
 
 
 
 
 
 
 
 
 
 

Leave a Reply