ಉಡುಪಿ ಸೀರೆಗಳು ಉಡುಪಿಯ ಹೆಮ್ಮೆ

ಮಣಿಪಾಲ: ಉಡುಪಿ ಸೀರೆಗಳು ಉಡುಪಿಯ ಹೆಮ್ಮೆಯ ಸ್ಥಳೀಯ ಉತ್ಪನ್ನವಾಗಿದೆ. ಪ್ರಧಾನಮಂತ್ರಿಯವರು ನೀಡಿದ ಕರೆಯಂತೆ, ಸಾರ್ವಜನಿಕರು ಸ್ವದೇಶಿ ವಸ್ತುಗಳ ಬಳಕೆ, ಉತ್ಪಾದನೆಗೆ ಹೆಚ್ಚಿನ ಪ್ರೋತ್ಸಾಹ ಹಾಗೂ ಬೆಂಬಲ ನೀಡಲು ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಹೇಳಿದ್ದಾರೆ.

ಅವರು ಮಂಗಳವಾರ ರಜತಾದ್ರಿಯಲ್ಲಿ ಜಿ.ಪಂ., ಉಡುಪಿ ಕೈಮಗ್ಗ ಮತ್ತು ಜವಳಿ ಇಲಾಖೆ ಹಾಗೂ ಉಡುಪಿ ಜಿಲ್ಲೆಯ ಕೈಮಗ್ಗ ನೇಕಾರರ ಸಹಕಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಪ್ರಧಾನ ಮಂತ್ರಿಯವರ ವೋಕಲ್ ಾರ್ ಲೋಕಲ್ ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯ ಕೈಮಗ್ಗ ನೇಕಾರರ ಸಹಕಾರ ಸಂಘಗಳ ಕೈಮಗ್ಗ ನೇಕಾರರಿಂದ ನೇಯಲ್ಪಟ್ಟ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ಉದ್ಘಾಟಿಸಿ ಮಾತನಾಡಿದರು.ಉಡುಪಿ ಸೀರೆಗಳ ಬಳಕೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾಡುವುದರ ಮೂಲಕ ಸ್ಥಳೀಯ ಉತ್ಪನ್ನಕ್ಕೆ ಮಾರುಕಟ್ಟೆ ವ್ಯವಸ್ಥೆ ಒದಗಿಸಿ ಅದನ್ನು ಪೋತ್ಸಾಹಿಸಬೇಕಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಹ ಉಡುಪಿ ಸೀರೆಯ ಬಳಕೆ ಮಾಡುತ್ತಾರೆ. ಸ್ಥಳೀಯರಾದ ನಾವು ಉಡುಪಿ ಸೀರೆಯನ್ನು ಬಳಕೆ ಮಾಡುವ ಮೂಲಕ ನಮ್ಮದೇ ಸ್ಥಳೀಯ ಉತ್ಪನ್ನಕ್ಕೆ ಹೆಚ್ಚಿನ ಬೆಂಬಲ ನೀಡಬೇಕು ಎಂದು ದಿನಕರ ಬಾಬು ಕರೆ ನೀಡಿದರು.

ಉಡುಪಿ ಕೈಮಗ್ಗ ಸೀರೆಗಳು ನಮ್ಮದೇ ನೇಕಾರರ ವಿಶಿಷ್ಟ ಕಲೆಯಾಗಿದ್ದು, ಈ ಕಲೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಉಡುಪಿ ಜಿ.ಪಂ.ನ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಯ ಸದಸ್ಯರ ವಿಶೇಷ ಆಸಕ್ತಿಯಿಂದ ಸೀರೆಗಳ ಪ್ರದರ್ಶನ ಮತ್ತು ಮಾರಾಟವನ್ನು ಆಯೋಜಿಸಲಾಗಿತ್ತು.

ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘ, ಶಿವಳ್ಳಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘ, ಬ್ರಹ್ಮಾವರ ಪ್ರಾಥಮಿಕ ನೇಕಾರರ ಸೇವಾ ಸಹಕಾರ ಸಂಘ ಹಾಗೂ ಕಿನ್ನಿಗೋಳಿ ತಾಳಿಪಾಡಿ ಪ್ರಾಥಮಿಕ ನೇಕಾರರ ಸೇವಾ ಸಂಘದ ಸದಸ್ಯರು ಉಡುಪಿ ಸೀರೆಗಳ ಮಾರಾಟದಲ್ಲಿ ಭಾಗವಹಿಸಿದ್ದರು. ಮೇಳದಲ್ಲಿ 850ರಿಂದ 1400 ರೂ.ವರೆಗೆನ ಸೀರೆಗಳು ಪ್ರದರ್ಶನದಲ್ಲಿ ಲಭ್ಯವಿದ್ದವು.

ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರತಾಪ್ ಹೆಗ್ಡೆ ಮಾರಾಳಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶೋಭಾ ಜಿ. ಪುತ್ರನ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋತ್, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಕೈಮಗ್ಗ ಜವಳಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್. ಶಿವಶಂಕರ್ ಮತ್ತಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply