ಮುದ್ರಣಾಲಯಗಳ ಮಾಲಕರ ಸಂಘದ ಪದಪ್ರದಾನ ಸಮಾರಂಭ

ಉಡುಪಿ: ಉಡುಪಿ ಜಿಲ್ಲಾ ಮುದ್ರಣಾಲಯಗಳ ಮಾಲಕರ ಸಂಘ(ರಿ) ಇದರ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ, ಹಿರಿಯ ಕಾರ್ಮಿಕರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಇತ್ತೀಚೆಗೆ ಉಡುಪಿಯ ಪುರಭವನದಲ್ಲಿ ನಡೆಯಿತು‌.

ಜಿಲ್ಲಾ ಕೈಗಾರಿಕಾ ಕೇಂದ್ರ ಉಡುಪಿ ಜಿಲ್ಲೆಯ ಉಪನಿರ್ದೇಶಕರಾದ ಸೀತಾರಾಮ ಶೆಟ್ಟಿ ಮತ್ತು ಉಡುಪಿ ವಿಭಾಗದ ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್ ಬಿ.ಆರ್. ಅವರು ಮುಖ್ಯ ಅತಿಥಿಗಳಾಗಿದ್ದು, ಮುದ್ರಣಾಲಯಗಳಿಗೆ ಸಂಬಂಧಿಸಿದಂತೆ ಉಪಯುಕ್ತ ಮಾಹಿತಿಗಳನ್ನು ಹಂಚಿಕೊಂಡರು. ಉಡುಪಿಯ ಭವಾನಿ ಕಾರ್ಡ್ಸ್ ಮತ್ತು ಸ್ಟೇಶನರಿ ಮಾಲಕರಾದ ದಶರಥ್ ಸಿಂಗ್ ಚೌಹಾಣ್ ಸಮಾರಂಭದ ಅತಿಥಿಯಾಗಿದ್ದರು. ಮಾಜಿ ಅಧ್ಯಕ್ಷ ಮತ್ತು ರಾಜ್ಯ ಸಮನ್ವಯ ಸಮಿತಿ ಸಹಸಂಚಾಲಕರಾದ ಅಶೋಕ್ ಶೆಟ್ಟಿ ಮತ್ತು ಮುದ್ರಕರ ಸಹಕಾರಿ ಸಂಘದ ಬಿ.ಜಿ. ಸುಬ್ಬರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಿಲ್ಲಾಧ್ಯಕ್ಷರಾದ ಪ್ರಕಾಶ್ ಜಿ. ಕೊಡವೂರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.

ಆರಂಭದಲ್ಲಿ ಕುಮಾರಿ ಕೃತಿ ಎಸ್. ಆಚಾರ್ಯ ಮತ್ತು ನಮೃತಾ ಪ್ರಾರ್ಥನಾ ಗೀತೆ ಹಾಡಿದರು. ಸಂಘದ ನಿಕಟಪೂರ್ವ ಅಧ್ಯಕ್ಷ ಮತ್ತು ರಾಜ್ಯ ಸಮನ್ವಯ ಸಮಿತಿ ಸಂಚಾಲಕರಾದ ಎಂ. ಮಹೇಶ್ ಕುಮಾರ್ ಸ್ವಾಗತಿಸಿದರು. ಮಾಜಿ ಅಧ್ಯಕ್ಷರಾದ ಮೋಹನ್ ಉಪಾಧ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿಕಟಪೂರ್ವ ಅಧ್ಯಕ್ಷರಾದ ಮಹೇಶ್ ಕುಮಾರ್ ಅವರು ನೂತನ ಜಿಲ್ಲಾಧ್ಯಕ್ಷ ಪ್ರಕಾಶ್ ಕೊಡವೂರು ಅವರಿಗೆ, ನಿಕಟಪೂರ್ವ ಕಾರ್ಯದರ್ಶಿ ಮನೋಜ್ ಕಡಬ ಅವರು ನೂತನ ಜಿಲ್ಲಾ ಕಾರ್ಯದರ್ಶಿ ಜಿ.ಎಂ. ಶರೀಫ್ ಅವರಿಗೆ ಮತ್ತು ನಿಕಟಪೂರ್ವ ಕೋಶಾಧಿಕಾರಿ ಸುಧೀರ್ ಡಿ. ಬಂಗೇರ ಅವರು ನೂತನ ಕೋಶಾಧಿಕಾರಿ ರವಿ ಬೇಳಂಜೆ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು.

ಮಾಜಿ ಅಧ್ಯಕ್ಷರಾದ ರಮೇಶ್ ತಿಂಗಳಾಯ, ಯತೀಶ್ಚಂದ್ರ ಮತ್ತು ಶಿವಪ್ರಸಾದ್ ಶೆಟ್ಟಿ ಅವರು ಪದಗ್ರಹಣ ಮಾಡುತ್ತಿರುವ ಜಿಲ್ಲಾ ಮತ್ತು ವಲಯ ಪದಾಧಿಕಾರಿಗಳ ವಿವರಗಳನ್ನು ನೀಡಿದರು. ಮುದ್ರಣಾಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ಕಾರ್ಮಿಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಮಾಜಿ ಅಧ್ಯಕ್ಷರಾದ ಚಂದ್ರ ನಾಯರಿ ಅವರು ಸನ್ಮಾನ ಪತ್ರವನ್ನು ಓದಿದರು. ಎಸ್.ಎಸ್. ಎಲ್.ಸಿ. ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಮುದ್ರಣಾಲಯಗಳ ಮಾಲಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಾರ್ಯಕಾರಿ ಸಮಿತಿ ಸದಸ್ಯರಾದ ರಾಮಚಂದ್ರ ಪೈ ಅವರು ವಿದ್ಯಾರ್ಥಿಗಳ ಹೆಸರನ್ನು ವಾಚಿಸಿದರು.

ಈ ಸಂದರ್ಭದಲ್ಲಿ ಸಂಘದ ದರಪಟ್ಟಿ, ಐಡಿ ಕಾರ್ಡ್, ರಾಜ್ಯ ಸಮ್ಮೇಳನದ ಬ್ರೋಚರ್ ಬಿಡುಗಡೆಗೊಳಿಸಲಾಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎಂ. ಶರೀಫ್ ಕೊನೆಯಲ್ಲಿ ಧನ್ಯವಾದವಿತ್ತರು. ಯೋಗೀಶ್ ಕೊಳಲಗಿರಿ ಅವರು ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply