ನ. 7 ರಿಂದ 9ರ ವರೆಗೆ “ಉಡುಪಿ ಟೂರಿಸಂ ಕನೆಕ್ಟ್ – 2022” ಕಾರ್ಯಾಗಾರ

ರಜತಮಹೋತ್ಸವದ ಸಂಭ್ರಮದಲ್ಲಿರುವ ಉಡುಪಿ ಜಿಲ್ಲೆಯಲ್ಲಿ ಉಡುಪಿಯ ಕುರಿತು ಹಲವು ಕಾರ್ಯಕ್ರಮಗಳನ್ನ ಸಂಯೋಜಿಸಲಾಗಿದೆ. ಅದರಂತೆ ಕರಾವಳಿ ಪ್ರವಾಸೋದ್ಯಮ ಸಂಘಟನೆ (ACT) ಇವರು ಉಡುಪಿ ಜಿಲ್ಲಾಡಳಿತ, ಉಡುಪಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಜೊತೆಗೂಡಿ ನವೆಂಬರ್ 7 ರಿಂದ 9ರ ವರೆಗೆ 3 ದಿನ “ಉಡುಪಿ ಟೂರಿಸಂ ಕನೆಕ್ಟ್ – 2022” ಎಂಬ ವೈಶಿಷ್ಟ ಪೂರ್ಣ ಕಾರ್ಯಾಗಾರ ಏರ್ಪಡಿಸಿದೆ.

ಭಾರತ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಬೆಂಗಳೂರು ಕಚೇರಿ ಈ ಕಾರ್ಯಾಗಾರದ (ಶೃಂಗ ಸಭೆಯ) ಪ್ರಾಯೋಜಕರಾಗಿದ್ದು, 3 ದಿನಗಳ ಕಾರ್ಯಕ್ರಮದಲ್ಲಿ ದೇಶದಾದ್ಯಂತ ಸುಮಾರು 50 ಮಂದಿ ಟ್ರಾವೆಲ್ ಏಜೆಂಟ್, ಸೋಶಿಯಲ್ ಮೀಡಿಯಾ ಪ್ರಭಾವಿಗಳು, ಇವೆಂಟ್ ನಿರ್ವಾಹಕರು ಭಾಗವಹಿಸಲಿದ್ದಾರೆ. ಅವರಿಗೆ ಈ ಕಾರ್ಯಾಗಾರದಲ್ಲಿ ಉಡುಪಿ ಜಿಲ್ಲೆಯ ಸಮಗ್ರ ಪ್ರವಾಸೋದ್ಯಮದ ಪರಿಚಯ ಮಾಡಿಕೊಡಲಾಗುವುದು.

ದಿನಾಂಕ 08-11-2022ರಂದು ಉಡುಪಿಯ ಹೋಟೆಲ್ ಕಿದಿಯೂರು ಇಲ್ಲಿನ ಶೇಷಶಯನ ಸಭಾಂಗಣದಲ್ಲಿ “ಉಡುಪಿಯ ಪ್ರವಾಸೋದ್ಯಮದ ಕಾರ್ಯಾಗಾರ” ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭ ಉಡುಪಿ ಜಿಲ್ಲೆಯ ಪ್ರವಾಸಿ ಪ್ರದರ್ಶನವೊಂದನ್ನು (ಟ್ರಾವೆಲ್ ಎಕ್ಸಿಬಿಷನ್) ಆಯೋಜಿಸಲಾಗಿದೆ. ಅಂದು ಬೆಳಿಗ್ಗೆ 9:30 ಕ್ಕೆ ಶಾಸಕರಾದ ಶ್ರೀ ಕೆ ರಘುಪತಿ ಭಟ್ ಕಾರ್ಯಾಗಾರ ಉದ್ಘಾಟಿಸುವರು. ಜಿಲ್ಲಾಧಿಕಾರಿ ಕೂರ್ಮಾ ರಾವ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಪ್ರಸನ್ನ ಎಚ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್ ಅಕ್ಷಯ್ ಮಚ್ಚೀಂದ್ರ, ಕೆನರಾ ಬ್ಯಾಂಕ್ ಮುಖ್ಯ ಪ್ರಬಂಧಕರಾದ ರಾಮ ನಾಯ್ಕ್ ಕೆ ಭಾಗವಹಿಸುವರು.

ಈ ಸಂದರ್ಭದಲ್ಲಿ ಭಾರತ ಸರ್ಕಾರದ ಪ್ರವಾಸೋದ್ಯಮ ಇಲಾಖೆ ವತಿಯಿಂದ ಉಡುಪಿ ಜಿಲ್ಲೆಯಲ್ಲಿ 12 ದಿನಗಳ ಕಾಲ ನಡೆಯಲಿರುವ ಲೈಫ್ ಗಾರ್ಡ್ ವೃತ್ತಿಪರ ತರಬೇತಿ ಕಾರ್ಯಕ್ರಮವನ್ನು ಭಾರತ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಪ್ರಾದೇಶಿಕ ನಿರ್ದೇಶಕರು (ದಕ್ಷಿಣ ಪ್ರಾಂತ್ಯ) ಮೊಹಮ್ಮದ್ ಫಾರೂಕ್ ಉದ್ಘಾಟಿಸುವರು. ಬಳಿಕ ಉಡುಪಿಯ ಪ್ರವಾಸೋದ್ಯಮದ ಪ್ರದರ್ಶಕರೊಂದಿಗೆ ವಿವಿಧ ರಾಜ್ಯಗಳಿಂದ ಆಗಮಿಸಿದ ಪ್ರವಾಸಿ ಏಜಂಟರೊಂದಿಗೆ ಮುಖಾಮುಖಿ ಕಾರ್ಯಕ್ರಮವಿದೆ. ಮಧ್ಯಾಹ್ನ 2:30 ರಿಂದ ಸಾರ್ವಜನಿಕರಿಗೆ ಈ ಪ್ರದರ್ಶನಕ್ಕೆ ಮುಕ್ತ ಪ್ರವೇಶವಿದೆ.

ಈ ಸಂದರ್ಭದಲ್ಲಿ ಉಡುಪಿ ಪ್ರವಾಸೋದ್ಯಮದ ಕುರಿತು ವಿಶೇಷ ಸೆಮಿನಾರ್ ಕಾರ್ಯಕ್ರಮ ನಡೆಯಲಿದ್ದು, ಸಾರ್ವಜನಿಕರು ಭಾಗಿದಾರರೊಂದಿಗೆ ಮುಖಾಮುಖಿ ಕಾರ್ಯಕ್ರಮದಲ್ಲಿ ಪ್ರಸಿದ್ಧ ಸಂಪನ್ಮೂಲ ವ್ಯಕ್ತಿಗಳಿಂದ ಪ್ರವಾಸೋದ್ಯಮದ ಕುರಿತು ಮಾಹಿತಿ ಪಡೆಯಬಹುದು.

ಮಾಹಿತಿಯ ವಿಷಗಳು : ಬೆಡ್ & ಬ್ರೇಕ್ ಫಾಸ್ಟ್ / ಹೋಂ ಸ್ಟೇ ಪ್ರಾರಂಭಿಸುವ ವಿಧಾನ/ ನಿಯಮಾವಳಿಗಳು ವಿಷಯದ ಕುರಿತು ಭಾರತ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಪ್ರಾದೇಶಿಕ ನಿರ್ದೇಶಕರಲ್ಲಿ ಮಾಹಿತಿ ಪಡೆದುಕೊಳ್ಳಬಹುದು. ಹೊಸ ಸರಳೀಕೃತ ಸಿ.ಆರ್.ಜೆಡ್ ನಿಯಮಾವಳಿಗಳು ಕುರಿತು ಉಡುಪಿ ಜಿಲ್ಲೆಯ ಸಿ.ಆರ್.ಜೆಡ್. ಅಧಿಕಾರಿಗಳಲ್ಲಿ ಮಾಹಿತಿ ಪಡೆದುಕೊಳ್ಳಬಹುದು. ಪ್ರವಾಸೋದ್ಯಮ ಚಟುವಟಿಕೆಗಳಿಗೆ ಬ್ಯಾಂಕಿನ ಆರ್ಥಿಕ ಸಹಕಾರ ಕುರಿತು ಕೆನರಾ ಬ್ಯಾಂಕ್ ಅಧಿಕಾರಿಗಳಲ್ಲಿ ಮಾಹಿತಿ ಪಡೆದುಕೊಳ್ಳಬಹುದು. ಹಾಗೂ ಈ ಕಾರ್ಯಾಗಾರದಲ್ಲಿ ಉಡುಪಿ ಪ್ರವಾಸೋದ್ಯಮದ ಭವಿಷ್ಯ ಕುರಿತು ಶ್ರೀಮತಿ ಅನಿತಾ ಬಿ. ಡೆಪ್ಯುಟಿ ಡೈರೆಕ್ಟರ್, ಕರ್ನಾಟಕ ಸರ್ಕಾರ ಪ್ರವಾಸೋದ್ಯಮ ಇಲಾಖೆ ಇವರಿಂದ ಉಪನ್ಯಾಸಗೋಷ್ಠಿ, ಚರ್ಚೆ ನಡೆಯಲಿದೆ.

ಉಡುಪಿ ಜಿಲ್ಲೆಯ ಪ್ರವಾಸೋದ್ಯಮ ಭಾಗಿದಾರರು, ಸಾರ್ವಜನಿಕರು ಈ ಕಾರ್ಯಕ್ರಮದ ಪ್ರಯೋಜನ ಪಡೆಯಬೇಕೆಂದು ಈ (ಶೃಂಗಸಭೆಯ) ಕಾರ್ಯಾಗಾರದ ಗೌರವಾಧ್ಯಕ್ಷರು, ಶಾಸಕರಾದ ಶ್ರೀ ಕೆ ರಘುಪತಿ ಭಟ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply