ಉಡುಪಿ: ಕೂಸಮ್ಮ ಶಂಭುಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಹಳೆ ಕಟ್ಟಡವನ್ನು ಕೆಡವಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕೆಳ ಅಂತಸ್ತಿನ ನಿರ್ಮಾಣಕ್ಕೆ ಖಾಸಾಗಿ ಕಂಪೆನಿ ಗುಂಡಿ ತೆಗೆದ್ದಿತ್ತು. ಧಾರಕಾರವಾಗಿ ಸುರಿದಿದ್ದ ಮಳೆಯಿಂದ ಆ ಹೊಂಡದಲ್ಲಿ ನೀರು ಸಂಗ್ರಹವಾಗಿ ಕೃತಕ ನೆರೆ ಉಂಟಾಗಿದೆ.
ಪ್ರಸ್ತುತ ಹಾಜಿ ಅಬ್ದುಲ್ಲಾ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಇರುವ ಜಾಗದಲ್ಲಿ ಅದರ ನಿರ್ವಹಣೆಗಾಗಿ ಬಿಆರ್ಎಸ್ ಸಂಸ್ಥೆಯೊಂದಿಗೆ ಸರ್ಕಾರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಒಡಂಬಡಿಕೆ ಮಾಡಿಕೊಂಡಿದೆ. ಅದಕ್ಕಾಗಿ ಬಹುಮಹಡಿಯ ಕಟ್ಟಡದ ಕಾಮಗಾರಿ ಆರಂಭವಾಗಿತ್ತು. ಆದರೆ ಕಾನೂನಾತ್ಮಕ ತೊಡಕುಂಟಾಗಿ ಕಾಮಗಾರಿ ಹಲವು ತಿಂಗಳ ಹಿಂದೆ ಸ್ಥಗಿತಗೊಂಡಿತ್ತು. ಮೊನ್ನೆಯಿಂದ ಸುರಿದ ಬಿರುಸಾದ ಮಳೆಗೆ ಈ ಹೊಂಡದಲ್ಲಿ ನೀರು ತುಂಬಿದೆ.
ಈ ರೀತಿಯಾಗಿ ನೀರು ನಿಂತಿರುವುದರಿಂದ ಅಕ್ಕಪಕ್ಕದ ಬಹುಮಹಡಿ ಕಟ್ಟಡಗಳಿಗೂ ಅಪಾಯವಾಗುವ ಆತಂಕ ಎದುರಾಗಿದೆ. ಇನ್ನು ಕಟ್ಟಡ ಕಾಮಗಾರಿಯ ಕೆಲ ಸಾಮಗ್ರಿಗಳು ಇಲ್ಲೇ ಇರುವುದರಿಂದ ಅವುಗಳಲ್ಲಿಯೂ ನೀರು ನಿಂತು ಸೊಳ್ಳೆಗಳಿಗೆ ಆಶ್ರಯ ತಾಣವಾಗಿದೆ. ಈ ಕುರಿತು ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಗಣೇಶ್ರಾಜ್ ಸರಳೇಬೆಟ್ಟು, ಕೂಡಲೇ ಜಿಲ್ಲಾಡಳಿತ ಎಚ್ಚೆತ್ತು ಇದರತ್ತ ಗಮನಹರಿಸಿ ಹೊಂಡ ಮುಚ್ಚಿಸಬೇಕು. ಇಲ್ಲವಾದ್ದಲ್ಲಿ ಸಂಬಂಧಪಟ್ಟವರಿಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚಿಸಬೇಕೆಂದು ಒತ್ತಾಯಿಸಿದ್ದಾರೆ.