ಭೀಕರ ಅಪಘಾತ: ವರ್ತಕ ಸೀತಾರಾಮ ಶೆಟ್ಟಿ ಸಾವು

ಕುಂದಾಪುರ: ಅಪರಿಚಿತ ವಾಹನವೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಬೈಕ್ ಸವಾರ ಸಾವನ್ನಪ್ಪಿದ ಘಟನೆ ಇಲ್ಲಿನ‌ ತಲ್ಲೂರು ಜಂಕ್ಷನ್ ಸಮೀಪ ಬುಧವಾರ ರಾತ್ರಿ ನಡೆದಿದೆ. ತಲ್ಲೂರಿನ ನಿವಾಸಿ, ಕುಂದಾಪುರದಲ್ಲಿ ವರ್ತಕರಾಗಿರುವ ಸೀತಾರಾಮ ಶೆಟ್ಟಿ (55) ಸಾವನ್ನಪ್ಪಿದವರು.

ಕುಂದಾಪುರದಿಂದ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ಸೀತಾರಾಮ ಶೆಟ್ಟಿಯವರು ತಲ್ಲೂರು ಸಮೀಪಿಸುತ್ತಿದ್ದಂತೆ ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದು ಪರಾರಿಯಾಗಿದೆ. ಇದೇ ವೇಳೆಯಲ್ಲಿ ಹೆದ್ದಾರಿಯಲ್ಲಿ ಸಾಗುತ್ತಿದ್ದ ಪಿಕಪ್ ವಾಹನವೊಂದು ಗಾಯಾಳು ಸೀತಾರಾಮ ಶೆಟ್ಟಿಯ ವರನ್ನು ತಪ್ಪಿಸುವ ಭರದಲ್ಲಿ ರಸ್ತೆ ವಿಭಾಜಕಕ್ಕೆ ಢಿಕ್ಕಿ ಹೊಡೆದಿದೆ. ಅಪರಿಚಿತ ವಾಹನ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಸೀತಾರಾಮ ಶೆಟ್ಟಿಯವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲು‌ ಪ್ರಯತ್ನಿಸಲಾಗಿತ್ತಾದರೂ ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ.

ಮೃತರು ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಅಪಘಾತದ ವೇಳೆ ಹೆದ್ದಾರಿಯಲ್ಲಿ ಟ್ರಾಫಿಕ್‌ ಜಾಮ್ ಆಗಿದ್ದು ಕುಂದಾಪುರ ನಗರ ಠಾಣೆಯ ಠಾಣಾಧಿಕಾರಿ ಸದಾಶಿವ ಗವರೋಜಿ ಹಾಗೂ ಸಿಬ್ಬಂದಿ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.

 
 
 
 
 
 
 
 
 
 
 

Leave a Reply