ಅಮೇರಿಕಾದ ರಾಲೇ ಮಹಾನಗರದಲ್ಲಿ ‘ಶ್ರೀಕೃಷ್ಣ ವೃಂದಾವನ’ ಎಂಟನೇ ಶಾಖೆಯ ಲೋಕಾರ್ಪಣೆ. 

ಉದ್ಯೋಗವನ್ನರಸಿ ಬಂದು ವಿದೇಶಗಳಲ್ಲಿ ನೆಲೆಸಿರುವ ಭಾರತೀಯ ಭಕ್ತರ ಅನುಗ್ರಹಕ್ಕಾಗಿ, ಭಾರತೀಯ ಹಿಂದೂ ಸಂಸ್ಕೃತಿಯನ್ನು ಹಾಗೂ ಆಚಾರ್ಯ ಮಧ್ವರು ಅನುಗ್ರಹಿ ಸಿದ ತತ್ವವಾದವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ವಿಶ್ವದ ಅನೇಕ ದೇಶಗಳಲ್ಲಿ ಕೃಷ್ಣ, ಮುಖ್ಯ ಪ್ರಾಣ, ರಾಯನ್ನು ಪ್ರತಿಷ್ಠಾಪಿಸಿ, ಕೃಷ್ಣಪ್ರಜ್ಞೆಯನ್ನು ಜಾಗೃತಗೊಳಿಸಿದ ಕೀರ್ತಿ ಉಡುಪಿ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರದ್ದು .

ಅದರಲ್ಲೂ ಅಮೇರಿಕಾದಂತಹ ದೊಡ್ಡ ರಾಷ್ಟ್ರದಲ್ಲಿ ನೆಲೆಸಿರುವ ಲಕ್ಷಾಂತರ ಅನಿವಾಸಿ ಭಾರತೀಯರಿಗಾಗಿ ಅಲ್ಲಿನ ಭಕ್ತರ ಅಪೇಕ್ಷೆ ಯಂತೆ ಬೇರೆ ಬೇರೆ ರಾಜ್ಯಗಳಲ್ಲಿ ಏಳು ಮಂದಿರಗಳು ಈಗಾಗಲೇ ಸ್ಥಾಪಿತಗೊಂಡಿದ್ದು, ಇದೀಗ ವಿಜಯದಶಮಿಯ ಪರ್ವಕಾಲದಲ್ಲಿ North Carolina ರಾಜ್ಯದ Raliegh ಯಲ್ಲಿ ಬಹುನಿರೀಕ್ಷಿತ ಮಂದಿರವು ಎಂಟನೆಯ ಶಾಖೆಯಾಗಿ ಲೋಕಾರ್ಪಣೆಗೊಂಡು ಭಕ್ತರ ಶ್ರದ್ಧಾ ಕೇಂದ್ರವಾಗಿ ತನ್ನ ಕಾರ್ಯವನ್ನು ಪ್ರಾರಂಭಿಸಿದೆ.

ಉಡುಪಿ ಕೃಷ್ಣನನ್ನು ಪ್ರತಿಷ್ಠಾಪಿಸಿದ ಆಚಾರ್ಯ ಮಧ್ವರ ಅವತಾರದ ದಿನದಂದೇ ಇಲ್ಲಿ ಕೃಷ್ಣನನ್ನು ಪ್ರತಿಷ್ಠಾಪಿಸುವ ಯೋಗಾಯೋಗ ಕೂಡಿ ಬಂದಿದ್ದು ಭಕ್ತರನ್ನು ಇನ್ನಷ್ಟು ಭಕ್ತಿ ಪರವಶರನ್ನಾಗಿ ಮಾಡಿತು. ಈ ಮೂಲಕ Ralieghಯ ಭಕ್ತರ ಅನೇಕ ವರ್ಷಗಳ ಕನಸು ನನಸಾದಂತಾಗಿದೆ, ಅಲ್ಲದೆ ವಿಜಯ ದಶಮಿಯಂದು ಪ್ರಾರಂಭಗೊಂಡ ಮೊದಲ ಶಾಖೆ ಎಂಬ ಕೀರ್ತಿಗೂ ಪಾತ್ರವಾಗಿದೆ.

ಅಕ್ಟೋಬರ್ 25 ಭಾನುವಾರ ವಿಜಯದಶಮಿಯ ಶುಭಮುಹೂರ್ತದಲ್ಲಿ ಕೃಷ್ಣ,  ಮುಖ್ಯಪ್ರಾಣ, ರಾಯರ ಪ್ರತಿಮೆಯನ್ನು ವೈಭವೋ ಪೇತವಾಗಿ ಬರಮಾಡಿಕೊಂಡು ಪಂಚಾಮೃತ, ಕಲಶಾಭಿಷೇಕ ಗಳೊಂದಿಗೆ ಪ್ರಾಣ ಪ್ರತಿಷ್ಠಾಪನೆಯನ್ನು ಮಾಡಿ ಮಾತನಾಡಿದ ಶ್ರೀಪಾದರು ‘ದೇವಕಿಯ ಎಂಟನೇ ಗರ್ಭದಲ್ಲಿ, ಎಂಟನೇ ಅವತಾರವಾಗಿ, ಅಷ್ಟಮಿಯಂದು ಜನಿಸಿದ ಕೃಷ್ಣನಿಗೂ ಎಂಟಕ್ಕೂ ನಂಟು ಇದೆ. ಕೃಷ್ಣನಿಗೆ ಪ್ರೀತಿಯ ಸಂಖ್ಯೆ ಎಂಟು ಹಾಗಾಗಿ ಇಲ್ಲಿನ ಕೃಷ್ಣಭಕ್ತರ ಪ್ರೀತಿಗೆ ಒಲಿದು ಇದನ್ನು ಎಂಟನೇ ಶಾಖೆಯನ್ನಾಗಿ ಆರಿಸಿ ಕೊಂಡ.ಈ ನಿಟ್ಟಿನಲ್ಲಿ Ralieghಯು ನಂದಗೋಕುಲದಂತೆ ಕೃಷ್ಣನಿಗೆ ಅತ್ಯಂತ ಪ್ರಿಯವಾಗಿದ್ದು, ಇಲ್ಲಿನ ಭಕ್ತರ ಕಷ್ಟವನ್ನು ಪರಿಹರಿಸಿ, ಇಲ್ಲೇ ಶಾಶ್ವತವಾಗಿ ನೆಲೆಗೊಳ್ಳುವಂತೆ ಆಗಲಿ ಎಂದು ಹರಸಿದರು.

ಶ್ರೀಪಾದರು ಕೃಷ್ಣನ ಪೂಜಾ ಕೈಂಕರ್ಯಕ್ಕಾಗಿ ತಮ್ಮ ಪ್ರಿಯ ಶಿಷ್ಯನಾದ ನಾಗೇಂದ್ರ ಉಡುಪ ಇವರನ್ನು ಅರ್ಚಕರನ್ನಾಗಿ ನೇಮಿಸಿ ಆಶೀರ್ವದಿಸಿದರು. ಶ್ರೀ ಮಠದ ದಿವಾನರಾದ ಪ್ರಸನ್ನ ಆಚಾರ್ಯರು ಉಪಸ್ಥಿತರಿದ್ದು, ಕೊರೋನಾ ನಿಮಿತ್ತ ಸಾವಿರಾರು ಭಕ್ತರು ಅಂತರ್ಜಾಲದ ಮೂಲಕ ಸುಂದರ ಕ್ಷಣಗಳನ್ನು ವೀಕ್ಷಿಸಿ ಈ ವೈಭವಕ್ಕೆ ಸಾಕ್ಷಿಯಾದರು.
 
 
 
 
 
 
 
 
 

Leave a Reply