ಮಲ್ಪೆಯ ಫ್ಲವರ್ಸ್ ಆಫ್ ಪ್ಯಾರಡೈಸ್ ಪಬ್ಲಿಕ್ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ 

ಮಲ್ಪೆ, ಸೆ.7: ಮಲ್ಪೆ ಫ್ಲವರ್ಸ್ ಆಫ್ ಪ್ಯಾರಡೈಸ್ ಪಬ್ಲಿಕ್ ಸ್ಕೂಲ್ನಲ್ಲಿ ಶಿಕ್ಷಕರ ದಿನವನ್ನು ಶಿಕ್ಷಕರಿಗೆ ಅಭಿನಂದನೆ ಮತ್ತು ಇತ್ತೀಚೆಗೆ ನಿಧನರಾದ ಮಲ್ಪೆಗೆ ಶೈಕ್ಷಣಿಕವಾಗಿ ಬಹಳಷ್ಟು ಕೊಡುಗೆಗಳನ್ನು ನೀಡಿದ ಆದರ್ಶ ಶಿಕ್ಷಕ ಮಾಧವ ಮಾಸ್ಟರ್ ಎಂದೇ ಜನಪ್ರಿಯರಾದ ದಿವಂಗತ ಮಲ್ಪೆಮಾಧವ ಜತ್ತನ್ನ ಅವರಿಗೆ ನುಡಿ ಗೌರವ ಅರ್ಪಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.

ಶಾಲೆಯ ಶೈಕ್ಷಣಿಕ ನಿರ್ದೇಶಕ ಯಾಸೀನ್ ಮಲ್ಪೆಮಾತನಾಡಿ, ಯಾವುದೇ ಸೇವೆಗೆ ನಾವು ಸಲ್ಲಿಸುವ ಕೃತಜ್ಞತೆ ಮತ್ತು ಗೌರವ ಆ ಸೇವೆಯ ಘನತೆಗೆ ಒಪ್ಪುವಂತಿರಬೇಕು. ಆದರೆ ಶಿಕ್ಷಕರ ವಿಷಯದಲ್ಲಿ ಅವರಿಗೆ ಸಮಾಜದಲ್ಲಿ ಸಿಗುತ್ತಿರುವ ಗೌರವ, ಅವರು ಸಮಾಜಕ್ಕೆ ಕೊಡುತ್ತಿರುವ ಸೇವೆ ಮತ್ತು ಕೊಡುಗೆಗಳಿಗೆ ಹೋಲಿಸಿದರೆ ತೀರಾ ಕಡಿಮೆ ಪ್ರಮಾಣದ್ದು ಎಂದರು. ಸಮಾಜವನ್ನು ಕಟ್ಟುವ, ದೇಶದ ಭವಿಷ್ಯವನ್ನು ರೂಪಿಸುವ ಮತ್ತು ಮುಂದಿನ ಪೀಳಿಗೆಗೆ ರಚನಾತ್ಮಕ ದಿಕ್ಕು ತೋರಿಸುವ ಸರ್ವಶ್ರೇಷ್ಠ ಕಾರ್ಯದಲ್ಲಿ ತಮ್ಮನ್ನು ಶ್ರದ್ಧೆಯಿಂದ ತೊಡಗಿಸಿಕೊಂಡಿರುವ ಶಿಕ್ಷಕರಿಗೆ ಅಷ್ಟೇ ಶ್ರೇಷ್ಠ ಮಟ್ಟದ ಗೌರವ ಸಲ್ಲಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

 ದಿವಂಗತ ಮಾಧವ ಮಾಸ್ಟರ್ ತಮ್ಮ ಶಿಕ್ಷಕ ಹುದ್ದೆಯ ಋಣ ತೀರಿಸಿದ ಆದರ್ಶ ಶಿಕ್ಷಕ. ಓರ್ವ ಶಿಕ್ಷಕನಾಗಿ ಸಮಾಜಕ್ಕೆ ಏನೆಲ್ಲಾ ಕೊಡಲು ಸಾಧ್ಯವೋ ಅದೆಲ್ಲವನ್ನೂ ಅವರು ಕೊಟ್ಟು ಹೋದರು. ಮಲ್ಪೆಯ ಒಂದು ಪ್ರೌಢಶಾಲೆ, ಮತ್ತೊಂದು ಆಂಗ್ಲ ಮಾಧ್ಯಮ ಶಾಲೆ ಈ ಊರಿಗೆ ಮಾಧವ  ಮಾಸ್ಟರ್ ರವರ ಅತಿ ದೊಡ್ಡ ಕೊಡುಗೆಗಳು. ಈ ಶಾಲೆಗಳ ಪ್ರತಿಯೊಂದು ಗೋಡೆಯ ಹಿಂದೆಯೂ ಅವರ ಬೆವರ ಹನಿಗಳಿವೆ. ನಮ್ಮೆಲ್ಲಾ ಶಿಕ್ಷಕರಿಗೆ ಮಾಧವ ಮಾಸ್ಟರ್ ಒಂದು ಅನುಕರಣಾರ್ಹ ಮಾದರಿಯಾಗಬೇಕು ಎಂದು ಅವರು ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉದ್ಯಾವರ ಯಶಸ್ವಿ ಫಿಶ್‌ಮೀಲ್ ಉದಯ ಕುಮಾರ್ ಸಾಲ್ಯಾನ್, ಮಾಧವ ಮಾಸ್ಟರ್ ಅವರ ಪುತ್ರಿ ಅಂಜನಾ ದೇವಿ ಹಾಗೂ ಅವರ ಸಹೋದರ ನವೀನ್‌ಚಂದ್ರ ಜತ್ತನ್ನ ಅವರಿಗೆ ಮಾಧವ ಮಾಸ್ಟರ್‌ರ ಹೆಸರಿನ ಗೌರವ ಫಲಕವನ್ನು ನೀಡಿ ಸನ್ಮಾನಿಸಿದರು. ಮಲ್ಪೆ ಎಜುಕೇಶನ್ ಟ್ರಸ್ಟ್ನ ಸದಸ್ಯ ಉಸ್ತಾದ್ ಉಸ್ಮಾನ್ ಕೊಡವೂರು ಸಂದರ್ಭೋಚಿತವಾಗಿ ಮಾತನಾಡಿದರು. ಶಾಲಾ ಮುಖ್ಯ ಶಿಕ್ಷಕಿ ಶ್ವೇತಾ ಪ್ರಶಾಂತ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾರಂಭದಲ್ಲಿ ಮಾಧವ ಮಾಸ್ಟರ್ ಕುರಿತು ವ್ಯಕ್ತಿ ಚಿತ್ರವನ್ನು ಪ್ರದರ್ಶಿಸಲಾಯಿತು. ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸಹನಾ ಅನಿಲ್ ವ್ಯಕ್ತಿ ಚಿತ್ರ ಪರಿಚಯ ನೀಡಿದರು. ಅರೇಬಿಕ್ ಶಿಕ್ಷಣ ಮುಖ್ಯಸ್ಥ ಮೌಲಾನಾ ಇಮ್ರಾನುಲ್ಲಾ ಖಾನ್ ಸಮಾರೋಪ ಭಾಷಣ ಮಾಡಿದರು.

 

ಈ ಬಾರಿಯ ಎಸ್ ಎಸ್  ಎಲ್  ಸಿ  ಪರೀಕ್ಷೆಯಲ್ಲಿ, ಹಿಂದಿ ವಿಷಯದಲ್ಲಿ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆಗೆ ಕಾರಣಕರ್ತರಾದ ಶಿಕ್ಷಕ ಜಾಫರ್ ಅಲಿ ಅವರನ್ನು ಸನ್ಮಾನಿಸಲಾಯಿತು. ಕಳೆದ ಲಾಕ್ಡೌನ್ ಅವಧಿಯಲ್ಲಿ ಶಿಕ್ಷಕರಿಗಾಗಿ ಏರ್ಪಡಿಸ ಲಾಗಿದ್ದ ಆನ್ಲೈನ್ ಕ್ವಿಜ್ ಸ್ಪರ್ಧೆಯ ವಿಜೇತರಾದ ಸಾಮ್ಯಾ ಸಲೀಮ್ ಮತ್ತು ಮುನವ್ವರ ಅವರಿಗೆ ಬಹುಮಾನವನ್ನು ವಿತರಿಸಲಾಯಿತು. ಶಾಲಾ ವಿದ್ಯಾರ್ಥಿಗಳು ಶಿಕ್ಷಕರ ಸೇವೆಯನ್ನು ಪ್ರಶಂಸಿಸಿ ಗೀತೆ ಹಾಡಿದರು. ಟ್ರಸ್ಟ್ನ ಅಧ್ಯಕ್ಷ ಎಫ್.ಎಂ.ಅಬ್ದುರ್ರಝಾಕ್ ಅತಿಥಿಗಳಿಗೆ ಸ್ಮರಣಿಕೆಯನ್ನು ನೀಡಿ ದರು. ಟ್ರಸ್ಟ್ ಸದಸ್ಯರಾದ ಖತೀಬ್ ಅಲ್ತಾಫ್, ಟಿ.ಖುರೈಷ್ ಮತ್ತು ಫಿರೋಜ್ ಉಪಸ್ಥಿತರಿದ್ದರು. ಶಿಕ್ಷಕಿ ನೌಶೀನ್ ಸ್ವಾಗತಿಸಿ, ಜ್ಯೋತಿ ವಂದಿಸಿದರು. ಮಾರ್ಟೀನಾ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply