ಮಹೇಶ್ ಮರ್ಣೆಯ ಕೈಚಳಕದಲ್ಲಿ  ಚಿತ್ರ ಹಾಗು ಶಿಲ್ಪಕಲೆಗಳು 

ಆಧುನಿಕ ಜಗತ್ತಿನಲ್ಲಿ ಚಿತ್ರಕಲೆ, ಶಿಲ್ಪಕಲೆಗಳು ವೈವಿಧ್ಯಪೂರ್ಣವಾಗಿ ರೂಪುಗೊಂಡು ಕಲಾರಸಿಕರಿಗೆ ಪ್ರಭಾವ ಬೀರುತ್ತ ಬಂದಿದೆ. ಒಬ್ಬ ಶಿಲ್ಪಿ ತನ್ನ ಅಪೂರ್ವ ಜಾಣ್ಮೆಯಿಂದ ಎಂತಹ ಕಲ್ಲನ್ನು ಕೂಡ ಮೂರ್ತಿಯನ್ನಾಗಿ ಮಾಡಬಲ್ಲನು. ಅಲ್ಲದೆ ತನ್ನ ಕ್ರಿಯಾ ಶೀಲತೆಯಿಂದ ಯಾವ ವಸ್ತುವಿನಲ್ಲಿಯೂ ಕೂಡ ಕಲಾ ದೇವತೆಯನ್ನು ಪ್ರತಿಷ್ಠಾಪನೆ ಮಾಡಬಲ್ಲನು, ಇಂತಹ ನೂರಾರು ಜನ ಹಿರಿಯ ಕಲಾವಿದರು ನಮ್ಮ ನಾಡಿನಲ್ಲಿದ್ದಾರೆ. 
ಈ ಹಿರಿಯ ಕಲಾವಿದರಿಗೆ ಸರಿಸಾಟಿ ಎಂಬಂತೆ ಉಡುಪಿಯ ಉದಯೋನ್ಮುಖ ಯುವ ಕಲಾವಿದರಲ್ಲಿ ಮಹೇಶ್ ಮರ್ಣೆ ಓಬ್ಬರು. ಉಡುಪಿಯಿಂದ ಸುಮಾರು ಇಪ್ಪತ್ತು ಕಿಲೋಮೀಟರ್ ದೂರದಲ್ಲಿರುವ ಮರ್ಣೆ ಗ್ರಾಮದಲ್ಲಿ 1984 ರಲ್ಲಿ ಜನಿಸಿದ ಮಹೇಶ್ ಗೆ ಶಿಲ್ಪ ಕೆತ್ತನೆಯ ಹವ್ಯಾಸ ಹುಟ್ಟಿಕೊಂಡಿತ್ತು. ಮರ್ಣೆ ಶ್ರೀಧರಾಚಾರ್ಯ ಮತ್ತು ಲಲಿತಾ ದಂಪತಿಗಳಿಗೆ ಪುತ್ರರಾಗಿರುವ ಇವರು ಉನ್ನತ ವ್ಯಾಸಂಗ ಮಾಡಲು ಇಷ್ಟವಿದ್ದರೂ ಮನೆಯ ಆರ್ಥಿಕ ಪರಿಸ್ಥಿತಿಯಿಂದ ಅದನ್ನು ಸಾಧಿಸಲು ಸಾಧ್ಯವಾಗಲಿಲ್ಲ. ಆದರೆ ತನ್ನ ಇಷ್ಟದ ಹವ್ಯಾಸವನ್ನು ವೃತ್ತಿಯನ್ನಾಗಿ ಸ್ವೀಕರಿಸಿ ಆ ವೃತ್ತಿಯಲ್ಲಿರುವ ಕಲಾವಂತಿಕೆಯನ್ನು ನಾಡಿನ ಜನರಿಗೆ ಉಣಬಡಿಸುತ್ತಾರೆ. 
ಮಹೇಶ್ ಮರ್ಣೆಯಲ್ಲಿರುವ ಕಲಾವಿದ ಶಿಲ್ಪಿ ಉನ್ನತ ರೂಪ ಪಡೆದಿದ್ದು, ಖ್ಯಾತ ಶಿಲ್ಪಿ ಗುಣವಂತೇಶ್ವರ ಭಟ್ ಅವರ ಮಾರ್ಗ ದರ್ಶನದಲ್ಲಿ ಬೆಳೆದ ಅವರು ಶಿಲ್ಪಕಲೆಯಲ್ಲಿ ಪರಿಪಕ್ವತೆಯನ್ನು ಸಾಧಿಸಿದರು ಸಹೋದರರಾದ ಸಂತೋಷ್ ಮತ್ತು ಉಮೇಶ್ ರವರ ಪ್ರೋತ್ಸಾಹದೊಂದಿಗೆ ಶಿಲ್ಪಕಲಾ ತರಬೇತಿಯನ್ನು ಪೂರ್ಣಗೊಳಿಸಿದರು. ಪ್ರತಿಭಾವಂತ ಕಲಾವಿದ ಗೋಪಾಡ್ಕರ್ ರವರ ಪರಿಚಯ ವಾದ ನಂತರ ಅವರಲ್ಲಿ ತನ್ನ ಕಲಾಸೇವೆಯನ್ನು ಮುಂದುವರಿಸಿದ ಮಹೇಶ್ ರವರು ಈವರೆಗೆ ಸಾವಿರಾರು ಕಾಷ್ಟ ಹಾಗೂ ಶಿಲೆ ಗಳಿಂದ ಶಿಲ್ಪವನ್ನು ರಚಿಸಿರುತ್ತಾರೆ. ಥರ್ಮೋಫೋಮ್ ನಲ್ಲಿ 10 ಅಡಿ ಎತ್ತರದ ಸುಂದರ ನಟರಾಜನ ವಿಗ್ರಹ, 7 ಅಡಿ ಎತ್ತರದ ನಟರಾಜನ ವಿಗ್ರಹ, ಥರ್ಮಕೋಲ್ ನಲ್ಲಿ ಮಹಾಗಣಪತಿ ಹಾಗೂ ಮುಂತಾದ ಶಿಲ್ಪಕಲಾಕೃತಿಯನ್ನು ರಚಿಸಿರುತ್ತಾರೆ. ಅಪೂರ್ವ ವೇದಿಕೆ ನಿರ್ಮಾಣ : ಕೇವಲ ಶಿಲ್ಪಕಲೆ ಅಲ್ಲದೆ ಅತ್ಯುತ್ತಮವಾದ ಪಾರಂಪರಿಕ ವೇದಿಕೆ ನಿರ್ಮಾಣದಲ್ಲಿಯೂ ಮಹೇಶ್ ಮರ್ಣೆ ಯವರು ಎತ್ತಿದ ಕೈ. ತನ್ನ ಅದ್ಭುತ ಕಲಾಕೃತಿಯಿಂದ ಹಲವಾರು ಸುಂದರ ಕಾರ್ಯಕ್ರಮಗಳಲ್ಲಿ ವೇದಿಕೆ ನಿರ್ಮಾಣ ಮಾಡಿದ್ದಾರೆ. ಈ ವೇದಿಕೆಯನ್ನು ನೋಡಿದ ಹಲವಾರು ಜನ ಕಲಾಪ್ರೇಮಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. 
ಐಸ್ ಕ್ರೀಮ್ ಕಡ್ಡಿಯಿಂದ ಅರಳಿದ ಗಣಪ : ಪ್ರತಿವರ್ಷ ಗಣೇಶ ಚತುರ್ಥಿ ಸಂದರ್ಭ ಸೃಜನಾತ್ಮಕವಾಗಿ ಗಣಪತಿ ಕಲಾಕೃತಿಯನ್ನು ರಚಿಸಿರುತ್ತಾರೆ. ಈ ಬಾರಿ ಐಸ್ ಕ್ರೀಮ್ ತಿನ್ನಲು ಬಳಸುವ ಕಡ್ಡಿಯನ್ನು ಫೆವಿಕೋಲ್ ಗಮ್ ನಿಂದ ಅಂಟಿಸಿ ದಪ್ಪ ಮಾಡಿಕೊಂಡು ಅದರಿಂದ ಗಣಪತಿಯ ಮುಖ, ಹೊಟ್ಟೆ, ಕೈಕಾಲುಗಳನ್ನು ಕೆತ್ತನೆಯ ಮೂಲಕ ಮೂಡಿಸಿದ್ದಾರೆ. ಕಡ್ಡಿಯನ್ನು ಕ್ರಮವಾಗಿ ಜೋಡಿಸಿ ಪ್ರಭಾವಳಿ, ಗಣಪತಿ ಪೀಠ ರಚಿಸಿದ್ದಾರೆ. ಇದಕ್ಕೆ 3500 ಐಸ್ ಕ್ರೀಮ್ ಕಡ್ಡಿ ಉಪಯೋಗಿಸಲಾಗಿದೆ. ಗಣಪತಿ ಪ್ರಭಾವಳಿ, ಆಭರಣ ಗಳ ಅಲಂಕಾರಕ್ಕಾಗಿ ಕೆಂಪು ಮತ್ತು ಕಪ್ಪು ಬಣ್ಣದ 750 ಬೆಂಕಿ ಕಡ್ಡಿ ಬಳಸಿದ್ದು, 24 ಇಂಚು ಎತ್ತರ ಮತ್ತು 17 ಇಂಚು ಅಗಲ ವಿರುವ ಈ ಕಲಾಕೃತಿ 15 ದಿನಗಳ ಕಠಿಣ ಪರಿಶ್ರಮದಿಂದ ರೂಪುಗೊಂಡಿದೆ ಎಂದು ಅವರು ಹೇಳುತ್ತಾರೆ. ಈ ಹಿಂದೆ ಬಾಟಲಿ ಯೊಳಗೆ ಗಣಪತಿ, ತರಕಾರಿಯಲ್ಲಿ ಗಣಪತಿ, ಸೀಮೆಸುಣ್ಣದಲ್ಲಿ ಗಣಪತಿಯ ಕಲಾಕೃತಿಯನ್ನು ರಚಿಸಿದ್ದಾರೆ. ಈಗಾಗಲೇ ಹತ್ತಾರು ಕಡೆಗಳಲ್ಲಿ ಇವರ ಸಾಧನೆಯನ್ನು ಗಮನಿಸಿ ಸನ್ಮಾನ ದೊರಕಿದೆ. ಈ ಕಲಾವಿದನಿಗೆ  ಸರಿಯಾದ ಮಾರ್ಗದರ್ಶನ, ಪ್ರೋತ್ಸಾಹ ನೀಡಿದಲ್ಲಿ ರಾಷ್ಟ್ರಮಟ್ಟದಲ್ಲಿ ಕಲಾವಿದನಾಗುವಲ್ಲಿ ಸಂದೇಹವಿಲ್ಲ. ತನ್ನ ಎಲ್ಲಾ ಬಗೆಯ ಕಲಾಪ್ರಕಾರಗಳಲ್ಲಿ ಸಾಧನೆಯನ್ನು ಮಾಡಿ ಹವ್ಯಾಸ ಮತ್ತು ಉದ್ಯೋಗದಲ್ಲಿ ಹೊಸ ಪರಿಕಲ್ಪನೆಯನ್ನು ತಂದ ಮಹೇಶ್ ಮರ್ಣೆ ಅಭಿನಂದಾರ್ಹರು. 
 
 
 
 
 
 
 
 
 

Leave a Reply