ಜಾಮೀನು ಪಡೆದರು ಯುವಕನನ್ನು ಕರೆದೊಯ್ದ ಪೊಲೀಸರು: ಸಾರ್ವಜನಿಕರ‌ ತೀವ್ರ ಆಕ್ರೋಶ

ಕುಂದಾಪುರ: ಗಲಾಟೆ ಸಂಬಂಧಿತ ವಿಚಾರದಲ್ಲಿ ಜಾಮೀನು ಪಡೆದಿದ್ದರೂ‌ ಕೂಡ ಓರ್ವ ಯುವಕನನ್ನು ಕುಂದಾಪುರ ಗ್ರಾಮಾಂತರ ಠಾಣೆ ಪೊಲೀಸರು ಮಂಗಳವಾರವ ವಶಕ್ಕೆಪಡೆದಿದ್ದಾರೆ.‌ ಇದನ್ನು ಖಂಡಿಸಿ ಕಂಡ್ಲೂರಿನಲ್ಲಿರುವ ಗ್ರಾಮಾಂತರ ಠಾಣೆಯೆದುರು ನೂರಾರು‌ ಸಂಖ್ಯೆಯಲ್ಲಿ ಸಾರ್ವಜನಿಕರು ಜಮಾಯಿಸಿದ ಘಟನೆ ಇಂದು ನಡೆದಿದೆ.

 ಮಾ.17ರಂದು ನಡೆದ ಗಲಾಟೆ ವಿಚಾರದಲ್ಲಿ‌ ನಾಗರಾಜ್ ಎನ್ನುವ ಯುವಕನ ವಿರುದ್ಧ ಪ್ರಕರಣವೊಂದು ದಾಖಲಾಗಿದ್ದು ಅದಕ್ಕೆ ಆತ ತನ್ನ ವಕೀಲರ ಮೂಲಕ‌ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಜಾಮೀನು ಪಡೆದಿದ್ದಾನೆ. ಆದರೆ ಏಕಾಏಕಿ‌ ಮಂಗಳವಾರ‌ ಆತನ ಮನೆಗೆ ಬಂದ ಪೊಲೀಸರು‌ ಠಾಣೆಗೆ ಕರೆದೊಯ್ದಿದ್ದಾರೆ. ವಿಚಾರ ತಿಳಿದ ಕೂಡಲೇ ಬೈಂದೂರು ಹಾಗೂ ಕುಂದಾಪುರ ವಿಧಾನಸಭಾ ಕ್ಷೇತ್ರದ ನೂರಾರು‌ ಮಂದಿ ಪಕ್ಷಾತೀತವಾಗಿ ಠಾಣೆಯೆದುರು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ, ಘಟನೆ ಬಗ್ಗೆ ಈಗಾಗಲೇ ಎಸ್ಪಿಯವರ ಗಮನಕ್ಕೆ ತರಲಾಗಿದೆ. ಅವರು ಸೂಕ್ತ ಕ್ರಮದ ಭರವಸೆ ನೀಡಿದ್ದಾರೆ. ಆದರೆ ಯಾವುದೋ ರಾಜಕೀಯ ಒತ್ತಡಕ್ಕೆ ಮಣಿದು ಪೊಲೀಸರು ಕೆಲಸ ಮಾಡುವುದು ಸರಿಯಲ್ಲ. ನಾನು‌ ಕೂಡ ನಾಲ್ಕು ಬಾರಿ ಶಾಸಕ‌ನಾಗಿದ್ದು ಪೊಲೀಸರಿಗೆ ಯಾವ ವಿಚಾರದಲ್ಲಿಯೂ ಒತ್ತಡ ಹಾಕಿಲ್ಲ. ಆದರೆ ಇದೀಗ ಪ್ರತಿ ಕೇಸಿನಲ್ಲೂ ರಾಜಕೀಯ ಹಸ್ತಕ್ಷೇಪವಾಗುತ್ತಿರುವ ದೂರುಗಳು ಕೇಳಿಬರುತ್ತಿದ್ದು ಇದನ್ನು ಸಹಿಸಲ್ಲ. ಮುಂದೆ ಇಂತಹ ಘಟನೆ ಪುನರಾವರ್ತನೆಯಾದರೆ ಸಂಬಂದಪಟ್ಟ ಠಾಣೆಯೆದುರು ಧರಣಿ ಸತ್ಯಾಗ್ರಹ ಮಾಡಲಾಗುತ್ತದೆ ಎಂದರು.

ಆರೋಪಿಯನ್ನು ವಿಚಾರಣೆಗಾಗಿ ಕರೆದಿದ್ದೆವು. ಆದರೆ ಆತ ಬಾರದ ಹಿನ್ನೆಲೆ ಮನೆಗೆ ತೆರಳಿ ಕರೆತರಬೇಕಾಯಿತು ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

 
 
 
 
 
 
 
 
 
 
 

Leave a Reply