ಎಸ್.ಸಿ.ಡಿ.ಸಿ.ಸಿ.ಬ್ಯಾಂಕ್ ಮ್ಯಾನೇಜರ್ ವಂಡ್ಸೆ ಜಯರಾಜ್ ಶೆಟ್ಟಿ ಕೋವಿಡ್ ಗೆ ಬಲಿ

ಕುಂದಾಪುರ: ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್‌ನ ಸಾಬರಕಟ್ಟೆ ಶಾಖೆಯ ಮ್ಯಾನೇಜರ್ ವಂಡ್ಸೆ ಜಯರಾಜ್ ಶೆಟ್ಟಿ (46) ಕೋವಿಡ್‌ಗೆ ಬಲಿಯಾಗಿದ್ದಾರೆ. 

ಕಳೆದ ಒಂದು ವಾರದಿಂದ ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಹೆಚ್ಚಿನ ಚಿಕಿತ್ಸೆಗೆ ಕೆ.ಎಂ.ಸಿಗೆ ದಾಖಲಾಗಿದ್ದರು.ಶನಿವಾರ ಬೆಳಿಗ್ಗೆ ಚಿಕಿತ್ಸೆಗೆ ಸ್ಪಂದಿಸದೆ ನಿಧನರಾದರು.ಮೃತರು ತಾಯಿ,ಪತ್ನಿ,ಪುತ್ರ,ಪುತ್ರಿಯನ್ನು ಅಗಲಿದ್ದಾರೆ.

ಜಯರಾಜ್ ಶೆಟ್ಟಿ ಎಸ್.ಸಿ.ಡಿ.ಡಿ.ಸಿ.ಸಿ. ಬ್ಯಾಂಕಿನ ನೌಕರರ ಸಂಘದ ಅಧ್ಯಕ್ಷರಾಗಿ, ವಂಡ್ಸೆ ಪದವಿಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ನೌಕರರನ್ನು ಸಂಘಟಿಸಿ ತನ್ನ ಅಧ್ಯಕ್ಷತೆಯಲ್ಲಿ ಬ್ರಹ್ಮಾವರದಲ್ಲಿ ಬೃಹತ್ ಸಮಾವೇಶ ನಡೆಸಿದ್ದರು. ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಎಲ್ಲಾ ನೌಕರರ ಸಂಭಾವನೆ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 

ವಂಡ್ಸೆಯಲ್ಲಿ ಸ್ನೇಹಿತರೊಂದಿಗೆ ಸೇರಿಕೊಂಡು ಸಾಯಿ ಕಲ್ಚರಲ್ & ಸ್ಫೋರ್ಟ್ಸ್ ಕ್ಲಬ್ ಸ್ಥಾಪಿಸಿ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬೆಂಬಲ ನೀಡಿದ್ದರು.ಬ್ಯಾಂಕಿನ ಮ್ಯಾನೇಜರ್ ಆಗಿ ಗ್ರಾಹಕರೊಂದಿಗೆ ಉತ್ತಮ ಸಂಬಂಧ ಉಳಿಸಿಕೊಂಡಿದ್ದರು. ಸ್ವಂತ ಉದ್ಯೋಗ ಮಾಡುವವರಿಗೆ ಬ್ಯಾಂಕ್ ವತಿಯಿಂದ ಆರ್ಥಿಕ ಸಹಕಾರ ಕೊಡಿಸಿ ಉತ್ತೇಜನ ನೀಡುತ್ತಾ ಬಂದಿದ್ದರು. ಎಲ್ಲಾ ಸಿಬ್ಬಂದಿಗಳೊಂದಿಗೂ ಆತ್ಮೀಯ ಬಾಂಧವ್ಯ ಹೊಂದಿದ್ದರು. 

ಮೃತರ ಅಂತ್ಯಕ್ರೀಯೆ ವಂಡ್ಸೆಯ ಅವರ ಮನೆ ಸಮೀಪ ಕೋವಿಡ್ ಮಾರ್ಗಸೂಚಿಯಂತೆ ನಡೆಯಿತು. ಇವರ ನಿಧನಕ್ಕೆ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಸೇರಿದಂತೆ ಅನೇಕ ಗಣ್ಯರು, ಬ್ಯಾಂಕಿನ ಸಿಬ್ಬಂದಿಗಳು ಸಂತಾಪ ಸೂಚಿಸಿದ್ದಾರೆ.

 
 
 
 
 
 
 
 
 
 
 

Leave a Reply