ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸಿಬ್ಬಂದಿಗಳ ಬಾಕಿ ವೇತನ ಪಾವತಿಗೆ ರೂ.368.70 ಲಕ್ಷ ಬಿಡುಗಡೆ

ಉಡುಪಿಯ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯಾಧಿಕಾರಿಗಳು ಮತ್ತು ಇತರ ಸಿಬ್ಬಂದಿಗಳ ಬಾಕಿ ಇರುವ ವೇತನವನ್ನು ಪಾವತಿಸಲು ಶಾಸಕ ಶ್ರೀ ಕೆ ರಘುಪತಿ ಭಟ್ ಅವರು ಮಾಡಿರುವ ಮನವಿಯಂತೆ ಸರ್ಕಾರ ವೈದ್ಯಾಧಿಕಾರಿಗಳು ಮತ್ತು ಇತರ ಸಿಬ್ಬಂದಿಗಳ ಬಾಕಿ ಇರುವ ವೇತನವನ್ನು ಪಾವತಿಸಲು ರೂ. 228.33 ಲಕ್ಷಗಳು ಹಾಗೂ ಇತರ ಬಾಕಿ ಇರುವ ಸಾದಿಲ್ವಾರು ವೆಚ್ಚ ರೂ. 140.37 ಲಕ್ಷಗಳು ಸೇರಿದಂತೆ ಒಟ್ಟು ರೂ. 368.70 ಲಕ್ಷಗಳನ್ನು ಭರಿಸಲು ಅನುಮತಿ ನೀಡಿ ಆದೇಶಿಸಿದೆ.

ಖಾಸಗಿಯವರು ನಿರ್ವಹಿಸುತ್ತಿದ್ದ 200 ಹಾಸಿಗೆಯ ಕೂಸಮ್ಮ ಶಂಭು ಶೆಟ್ಟಿ ಮೆಮೋರಿಯಲ್ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉಡುಪಿ ಇದನ್ನು ಸರ್ಕಾರದ ಸುಪರ್ದಿಗೆ ಪಡೆಯಲಾಗಿತ್ತು. ಸರ್ಕಾರದ ಸುಪರ್ದಿಗೆ ಪಡೆಯುವ ಮೊದಲು ಕಾರ್ಯನಿರ್ವಹಿಸಲಾಗಿದ್ದ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳ ಬಾಕಿ ವೇತನ ಭತ್ಯೆ ಹಾಗೂ ಇತರ ಬಾಕಿ ಮೊತ್ತ ಭರಿಸಲು ಒಟ್ಟು ರೂ. 3,68,71,724/- ಗಳ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲಾಗಿತ್ತು.

ಈ ಮೊತ್ತವನ್ನು ತಕ್ಷಣದಲ್ಲಿ ಪಾವತಿಸಲು ಕಳೆದ ಜೂನ್ ತಿಂಗಳಲ್ಲಿ ಶಾಸಕ ಶ್ರೀ ಕೆ ರಘುಪತಿ ಭಟ್ ಅವರು ಮಾನ್ಯ ಮುಖ್ಯಮಂತ್ರಿಯವರಾದ ಶ್ರೀಯುತ ಬಸವರಾಜ್ ಬೊಮ್ಮಾಯಿ ಅವರಲ್ಲಿ ಚರ್ಚಿಸಿ ನೀಡಿರುವ ಮನವಿಗೆ ಮಾನ್ಯ ಮುಖ್ಯಮಂತ್ರಿಯವರು “ವೇತನ ಬಾಕಿ ಪಾವತಿ ಮಾಡುವುದು” ಎಂದು ಷರಾ ಬರೆದು ಆರ್ಥಿಕ ಇಲಾಖೆಗೆ ಸೂಚಿಸಿರುವಂತೆ ಶಾಸಕ ರಘುಪತಿ ಭಟ್ ಅವರು ಸರ್ಕಾರದ ಮಟ್ಟದಲ್ಲಿ ನಡೆಸಿರುವ ನಿರಂತರ ಪ್ರಯತ್ನದಿಂದ ಆರ್ಥಿಕ ಇಲಾಖೆಯ ಒಪ್ಪಿಗೆಯಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರೂ. 368.70 ಲಕ್ಷಗಳನ್ನು ಭರಿಸಲು ಅನುಮತಿ ನೀಡಿ ಈ ಆದೇಶ ಹೊರಡಿಸಿದೆ.

ಮಾನ್ಯ ಮುಖ್ಯಮಂತ್ರಿಯವರಾದ ಶ್ರೀಯುತ ಬಸವರಾಜ ಬೊಮ್ಮಾಯಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಡಾll ಸುಧಾಕರ್ ಅವರಿಗೆ ಶಾಸಕ ರಘುಪತಿ ಭಟ್ ಕೃತಜ್ಞತೆ ಸಲ್ಲಿಸಿದ್ದಾರೆ.

 
 
 
 
 
 
 
 
 

Leave a Reply