ಹವ್ಯಕ ಕನ್ನಡದ ‘ಬಾಣದ್ ಸೇತ್ವೆ’ ಕೃತಿ ಅನಾವರಣ

ಉಡುಪಿ : ಇತ್ತೀಚೆಗೆ ಉಡುಪಿ ಶ್ರೀ ಅದಮಾರು ಮಠದ ಆಶ್ರಯದಲ್ಲಿ, ತಾಮರಸ ಕೂಟ ಬಾರಕೂರು ಹಾಗೂ ಯಕ್ಷಕುಟೀರ ಟ್ರಸ್ಟ್(ರಿ) ಸಹಯೋಗದಲ್ಲಿ ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಕನ್ನಡ ಉಪನ್ಯಾಸಕ ಶಿವಕುಮಾರ ಅಳಗೋಡು, ಹವ್ಯಕ ಕನ್ನಡ ಭಾಷೆಯಲ್ಲಿ ರಚಿಸಿದ ‘ಬಾಣದ್ ಸೇತ್ವೆ’ ಯಕ್ಷಗಾನ ಪ್ರಸಂಗವನ್ನು ಉಡುಪಿ ಶ್ರೀ ಅದಮಾರು ಮಠದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಅನಾವರಣಗೊಳಿಸಿದರು. 

ಬಳಿಕ ಮಾತನಾಡಿದ ಅವರು, ಶರಸೇತು ಬಂಧನದ ಕಥೆ ಮಹಾಭಾರತದಲ್ಲಿ ಇದೆಯೋ ಇಲ್ಲವೋ ಬೇರೆ ವಿಚಾರ. ಆದರೆ ಈ ಕಥೆಯಲ್ಲಿ, ನಮಗಿಂತ ಕಿರಿಯರನ್ನು ಎತ್ತರಕ್ಕೆ ತರುವಾಗ ಹಿರಿಯರು ತ್ಯಾಗ ಮಾಡಬೇಕೆಂಬ ಸಂದೇಶವಿದೆ. ಆಂಜನೇಯ, ಅರ್ಜುನನಿಗಿಂತ ದೊಡ್ಡ ಭಕ್ತ. ಆದರೂ ಕೃಷ್ಣ, ಅರ್ಜುನನ್ನು ಎತ್ತರಕ್ಕೆ ಏರಿಸುವ ಸಂದರ್ಭದಲ್ಲಿ ಆತನಿಗಿಂತಲೂ ಎತ್ತರದಲ್ಲಿರುವ ಆಂಜನೇಯ ತನ್ನ ಗೆಲುವನ್ನು ತ್ಯಾಗ ಮಾಡಿದ ಎಂಬುದು ಇಲ್ಲಿಯ ಸಂದೇಶ ಎಂದು ಶ್ರೀಗಳು ಹರಸಿದರು.

ಹಿರಿಯ ವಿದ್ವಾಂಸ ಡಾ. ಪಾದೇಕಲ್ಲು ವಿಷ್ಣು ಭಟ್ಟರು ಮಾತನಾಡುತ್ತ, ಶಿವಕುಮಾರ ಅಳಗೋಡು ಅವರು ಹವ್ಯಕ ಕನ್ನಡದಲ್ಲಿ ರಚಿಸಿರುವ ‘ಬಾಣದ್ ಸೇತ್ವೆ’ ಎಂಬ ಪ್ರಸಂಗಕ್ಕೆ, ಕ್ರಿ.ಶ. ೧೭೯೪-೧೮೫೪ರ ಅವಧಿಯಲ್ಲಿ ಜೀವಿಸಿದ್ದ ಹಟ್ಟಿಯಂಗಡಿ ರಾಮಭಟ್ಟರು ಬರೆದ ಸುಭದ್ರಾ ಕಲ್ಯಾಣ ಪ್ರಸಂಗದೊಳಗಿನ ‘ಶರಸೇತು ಬಂಧನ’ ಪ್ರಸಂಗವು ಮೂಲ ಆಕರವಾಗಿದೆ. ಮೂಲ ಕವಿಯು ಬಳಸಿದ ಯಕ್ಷಗಾನದ ಛಂದಸ್ಸುಗಳನ್ನೇ ಬಳಸಿಕೊಂಡು ಈ ಪ್ರಸಂಗವನ್ನು ರಚಿಸಿದ್ದು ಕವಿಯ ಪ್ರತಿಭಾ ಸಾಮರ್ಥ್ಯವನ್ನು ಬಿಂಬಿಸುತ್ತದೆ ಎಂದರು.

ಪೂರ್ಣಪ್ರಜ್ಞ ಸಮೂಹ ಸಂಸ್ಥೆಗಳ ಗೌರವ ಕರ‍್ಯದರ್ಶಿಗಳಾದ ಪ್ರದೀಪ್ ಕುಮಾರ್, ಪ್ರಾಂಶುಪಾಲ ಡಾ. ರಾಘವೇಂದ್ರ ಎ. ಕರ‍್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕೃತಿಕಾರ ಶಿವಕುಮಾರ ಅಳಗೋಡು ಸ್ವಾಗತಿಸಿ, ಸುಹಾಸ್ ಭಟ್, ಜಟ್ಟೀಮನೆ ನಿರೂಪಿಸಿದರು.

ಕೃತಿ ಅನಾವರಣದ ಬಳಿಕ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಆಶ್ರಯದಲ್ಲಿ ಪ್ರಸಿದ್ಧ ಕಲಾವಿದರಾದ ಕೊಂಡದಕುಳಿ ರಾಮಚಂದ್ರ ಹೆಗಡೆ, ಕ್ಯಾದಗಿ ಮಹಾಬಲೇಶ್ವರ ಭಟ್, ಲಂಬೋದರ ಹೆಗಡೆ, ಶ್ರೀನಿವಾಸ ಪ್ರಭು, ರವಿ ಮೋತಿಗುಡ್ಡೆ, ಬಂಗಾರಮಕ್ಕಿ ರಾಮಚಂದ್ರ ಭಟ್, ಆದಿತ್ಯ ಹೆಗಡೆ, ಕಿರಣ್ ಹಾಡಿಕೈಯವರಿಂದ ಸಂಪೂರ್ಣ ಹವ್ಯಕ ಕನ್ನಡ ಭಾಷೆಯಲ್ಲಿಯೇ ‘ಬಾಣದ್ ಸೇತ್ವೆ’ ಪ್ರಸಂಗದ ತಾಳಮದ್ದಳೆ ಸಂಪನ್ನಗೊಂಡಿತು.

 
 
 
 
 
 
 
 
 

Leave a Reply