ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕೇವಲ ಹಿಜಾಬ್ ವಿವಾದ ಮತ್ತು ಮುಸ್ಲಿಂ ಧರ್ಮಕ್ಕೆ ಸಂಬಂಧಪಟ್ಟ ವಿಚಾರಗಳು ಮಾತ್ರ ಆಲೋಚನೆಗೆ ಬರುತ್ತವೆ. ಕಾಣದ ಕೈಗಳ ಕುಮ್ಮಕ್ಕಿನಿಂದ ಉಡುಪಿಯಲ್ಲಿ ಕೇವಲ ಆರು ಮಂದಿ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರಿಂದ ಉದ್ದೇಶಪೂರ್ವಕವಾಗಿ ಪ್ರಾರಂಭಗೊಂಡ ಹಿಜಾಬ್ ವಿವಾದ ಇಂದು ಇತರ ಜಿಲ್ಲೆಗಳಿಗೂ ಹಬ್ಬಿದೆ. ಇಂತಹ ಸೂಕ್ಷ್ಮ ವಿಚಾರದ ಬಗ್ಗೆ ಪೂರ್ವಾಪರ ಆಲೋಚಿಸದೆ, ವಿಧ್ಯಾರ್ಥಿನಿಯರು ಮುಸ್ಲಿಂ ಧರ್ಮದವರು ಎಂಬ ಒಂದೇ ಕಾರಣಕ್ಕೆ ಹಠಾತ್ ಎಚ್ಚೆತ್ತುಕೊಂಡು ಹಿಜಾಬ್ ವಿವಾದವನ್ನು ಇನ್ನಷ್ಟು ಕೆದಕುವ ನಿಟ್ಟಿನಲ್ಲಿ ಬಾಲಿಶ ಹೇಳಿಕೆ ನೀಡಿರುವ ಸಿದ್ದು ವರ್ತನೆಯಿಂದ ಕಾಂಗ್ರೆಸ್ಸಿನ ಮುಸ್ಲಿಂ ತುಷ್ಟೀಕರಣ ನೀತಿ ಮಗದೊಮ್ಮೆ ಅನಾವರಣಗೊಂಡಿದೆ ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.
ಬಾಯ್ತೆರೆದರೆ ಸಂವಿಧಾನದ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವ ಸಿದ್ದು ಕೇರಳ ಮತ್ತು ಮಹಾರಾಷ್ಟ್ರದ ಉಚ್ಛ ನ್ಯಾಯಾಲಯಗಳು ಹಿಜಾಬ್ ಪ್ರಕರಣದ ಬಗ್ಗೆ ಏನು ಹೇಳಿವೆ ಎಂಬುವುದನ್ನು ಮೊದಲು ಅರಿತುಕೊಳ್ಳಲಿ. ಸ್ವತಃ ವಕೀಲರಾಗಿರುವ ಸಿದ್ದರಾಮಯ್ಯನವರಿಗೆ ನ್ಯಾಯಾಲಯದ ತೀರ್ಪಿನ ಬಗ್ಗೆ ಎಳ್ಳಷ್ಟೂ ತಿಳಿದಿಲ್ಲವೇ? ಸಮಾನತೆಯ ಬಗ್ಗೆ ಉದ್ದುದ್ದ ಭಾಷಣ ಬಿಗಿಯುವವರಿಗೆ ಶಾಲಾ ಕಾಲೇಜುಗಳಲ್ಲಿ ಸಮಾನತೆಗಾಗಿ ಸಮವಸ್ತ್ರ ಧರಿಸಬೇಕು ಮತ್ತು ಧಾರ್ಮಿಕ ಹಕ್ಕನ್ನು ಎಲ್ಲಿ ಕೇಳಬೇಕು ಎಂಬ ಕನಿಷ್ಠ ಜ್ಞಾನವೂ ಇಲ್ಲವೇ? ತನ್ನ ಆಡಳಿತಾವಧಿಯಲ್ಲಿಯೂ ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರದ ಪದ್ಧತಿ ರೂಡಿಯಲ್ಲಿ ಇದ್ದುದನ್ನು ಸಿದ್ದು ಮರೆತಂತಿದೆ.
ಪೊಲೀಸರು ಹಬ್ಬದ ಸಂದರ್ಭದಲ್ಲಿಯೂ ಸಮವಸ್ತ್ರವನ್ನೇ ಧರಿಸಬೇಕು ಎಂದು ಉಪದೇಶ ನೀಡಿದ ಸಿದ್ದು ಇದೀಗ ಹಿಜಾಬ್ ಪ್ರಕರಣದಲ್ಲಿ ಉಲ್ಟಾ ಹೊಡೆದಿರುವುದು ಹಾಸ್ಯಾಸ್ಪದ. ಮುಸ್ಲಿಂ ಧರ್ಮದ ದಿರಿಸನ್ನು ಅತೀ ಸಂಭ್ರಮದಿಂದ ಸ್ವೀಕರಿಸುವ ಸಿದ್ದು, ಅಭಿಮಾನಿಯೊಬ್ಬ ಕೇಸರಿ ಪೇಟಾ ತೊಡಿಸಿದಾಗ ಮೈ ಮೇಲೆ ಚೇಳು ಹರಿದಂತೆ ವರ್ತಿಸಿ, ಅದನ್ನು ತಕ್ಷಣ ಕಿತ್ತು ಎಸೆದಾದಲೇ ರಾಜ್ಯದ ಜನತೆಗೆ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯನವರ ಗೋಸುಂಬೆತನ ಬಣ್ಣ ಬದಲಾಯಿಸುವ ಮಾನಸಿಕತೆಯ ದರ್ಶನವಾಗಿದೆ.
ನನ್ನ ಹೆಸರಲ್ಲೂ ರಾಮನಿದ್ದಾನೆ ಎಂಬ ಬೂಟಾಟಿಕೆಯ ಮಾತನ್ನಾಡುವ ಸಿದ್ದು, ಮೀನು ಮಾಂಸ ತಿಂದು ದೇವಸ್ಥಾನಕ್ಕೆ ಹೋಗುತ್ತೇನೆ ಎಂಬ ಉಡಾಫೆಯ ಮಾತನ್ನಾಡಿ, ತಾನು ಕಾಯಾ ವಾಚಾ ಮನಸಾ ಹಿಂದೂ ವಿರೋಧಿ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿಯೂ ಹಿಂದೂ ಕಾರ್ಯಕರ್ತರ ಕಗ್ಗೊಲೆ ವಿಚಾರದಲ್ಲಿ ಸುಮ್ಮನಿದ್ದ ಸಿದ್ದರಾಮಯ್ಯ ಹಿಂದೂ ವಿರೋಧಿ ನೀತಿಯಿಂದ ಹೆಜ್ಜೆ ಹೆಜ್ಜೆಗೂ ಹಿಂದೂಗಳನ್ನು ಅವಮಾನಿಸುವ ಮತ್ತು ಧಮನಿಸುವ ಕಾರ್ಯದಲ್ಲಿ ನಿರತವಾಗಿದ್ದನ್ನು ಇಡೀ ಕರ್ನಾಟಕ ಕಂಡಿದೆ. ಪಕ್ಷದ ನಾಯಕರ ಆಂತರಿಕ ಕಚ್ಚಾಟದ ಭಾಗವಾಗಿಯೂ ಪ್ರಚಲಿತ ವಿವಾದದ ಬಗ್ಗೆ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿಕೆಶಿ ನಿಲುವಿಗೂ ಕ್ಯಾರೇ ಎನ್ನದ ಸಿದ್ದು ವರ್ತನೆ ನಗೆಪಾಟಲಿಗೀಡಾಗಿರುವುದು ವಾಸ್ತವ. ತನ್ನ ಹಿಂದೂ ವಿರೋಧಿ ತತ್ವದ ಭಾಗವಾಗಿ ಹಿಜಾಬ್ ವಿವಾದದ ಬೆಂಕಿಗೆ ತುಪ್ಪ ಸುರಿಯುವ ಕುಕೃತ್ಯದಲ್ಲಿ ಭಾಗಿಯಾಗಿರುವ ಸಿದ್ದು ಮಾನಸಿಕತೆಯನ್ನು ರಾಜ್ಯದ ಸಮಸ್ತ ಹಿಂದೂ ಸಮುದಾಯ ಎಂದಿಗೂ ಕ್ಷಮಿಸದು ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.