ಪಡುಬಿದ್ರಿ ಬ್ಲೂ ಫ್ಲಾಗ್ ಬೀಚ್ ಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ಭೇಟಿ

ಪಡುಬಿದ್ರಿ: ತೌಖ್ತೆ ಚಂಡಮಾರುತದಿಂದ ಹಾನಿಗೊಳಗಾದ ಪಡುಬಿದ್ರಿ ಬ್ಲೂ ಫ್ಲ್ಯಾಗ್ ಬೀಚ್ ಗೆ ಇಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಭೇಟಿ ನೀಡಿ ಬ್ಲೂ ಫ್ಲಾಗ್ ಕಡಲ ತೀರದಲ್ಲಿ ಉಂಟಾದ ಹಾನಿಯನ್ನು ವೀಕ್ಷಿಸಿದರು.

ಹಾನಿಗೊಳಗಾದ ಕಡಲ ತೀರವನ್ನು ಶೀಘ್ರವಾಗಿ ಒಂದು ವಾರದ ಒಳಗಾಗಿ ಪುನರ್ ಸಜ್ಜುಗೊಳಿಸಿ ಪ್ರವಾಸಿಗರ ಆಕರ್ಷಣೆಗೆ ಉಪಯೋಗವಾಗುವಂತೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಅಲ್ಲೇ ಹಾಜರಿದ್ದ ಬ್ಲೂ ಫ್ಲ್ಯಾಗ್ ಸಿಬ್ಬಂದಿಗಳು ಈ ಕುರಿತು ಜಿಲ್ಲಾಧಿಕಾರಿಗಳಿಗೆ ಭರವಸೆ ನೀಡಿದರಲ್ಲದೇ ನಮ್ಮ ಕಡಲ ತೀರ ಅಭಿವೃದ್ಧಿಗೆ ಶ್ರಮಿಸಿ ಸ್ಥಳೀಯ ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡಿ ಬದುಕು ಕಟ್ಟಿಕೊಟ್ಟಿರುವ ಬಗ್ಗೆ ಸದಾ ಉಪಕೃತರಾಗಿರುವುದಾಗಿ ಜಿಲ್ಲಾಧಿಕಾರಿಗಳ ಬಗ್ಗೆ ವಿನಂತಿ ಪೂರ್ವಕವಾಗಿ ಅರಿಕೆ ಮಾಡಿದರು.

ಬ್ಲೂ ಫ್ಲ್ಯಾಗ್ ಬೀಚ್ ನಿರಂತರವಾಗಿ ಸುಸಜ್ಜಿತವಾಗಿ ಮುಂದುವರೆಸಿಕೊಂಡು ಹೋಗಲು ಅವಶ್ಯಕವಾಗಿರುವ ಎಲ್ಲಾ ಉಪಕ್ರಮ ಕೈಗೊಳ್ಳಲು ಅಗತ್ಯ ಕ್ರಮ ವಹಿಸುವಂತೆ ಸ್ಥಳದಲ್ಲಿ ಹಾಜರಿದ್ದ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಸೋಮಶೇಖರ, ಬನವಾಸಿ ಇವರಿಗೆ ಸೂಚಿಸಿದರು.

ಬ್ಲೂ ಫ್ಲ್ಯಾಗ್ ಬೀಚ್ ಮ್ಯಾನೇಜರ್ ವಿಜಯ ಶೆಟ್ಟಿ, ಪ್ರವಾಸೋದ್ಯಮ ಇಲಾಖೆ ಸಿಬ್ಬಂದಿ ರಮೇಶ್ ದೇವಾಡಿಗ, ಗ್ರಾಮ ಸಹಾಯಕ ಜಯರಾಂ, ಸ್ಥಳೀಯ ಪೋಲೀಸ್ ಠಾಣೆ ಸಿಬ್ಬಂದಿ ಹಾಜರಿದ್ದರು.

 
 
 
 
 
 
 
 
 
 
 

Leave a Reply