ಹಿರಿಯ ಯಕ್ಷಗಾನ ಕಲಾವಿದ ಚಿತ್ತೂರು ನಾರಾಯಣ ದೇವಾಡಿಗ ನಿಧನ

ಬೈಂದೂರು : ಹಿರಿಯ ಯಕ್ಷಗಾನ ಕಲಾವಿದರಾದ ಚಿತ್ತೂರು ನಾರಾಯಣ ದೇವಾಡಿಗ(70) ಇಂದು ಬೈಂದೂರಿನ ಪುತ್ರಿಯ ಮನೆಯಲ್ಲಿ ನಿಧನರಾದರು.

ಕುಂದಾಪುರ ತಾಲೂಕಿನ ಹಳ್ನಾಡಿನ ದೇವಾಡಿಗರು ತನ್ನ ಹದಿನಾಲ್ಕನೇ ವಯಸ್ಸಿನಲ್ಲಿ ಗೆಜ್ಜೆ ಕಟ್ಟಿ, ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಗುರು ವೀರಭದ್ರ ನಾಯಕ, ನೀಲಾವರ ರಾಮಕೃಷ್ಣಯ್ಯ, ಹಿರಿಯಡ್ಕ ಗೋಪಾಲರಾಯರ ಗರಡಿಯಲ್ಲಿ ಪಳಗಿ ಸ್ತ್ರೀವೇಷಧಾರಿಯಾಗಿ ಮೇಳ ಸೇರಿದರು. 

ಕಮಲಶಿಲೆ, ಸಾಲಿಗ್ರಾಮ, ಹಳವಾಡಿ, ಗೋಳಿಗರಡಿ, ಮಾರಣಕಟ್ಟೆ, ಸೌಕೂರು, ಮಡಾಮಕ್ಕಿ, ಪೆರ್ಡೂರು ಹಾಗು ಹಾಲಾಡಿ ಮೇಳಗಳಲ್ಲಿ ಸುದೀರ್ಘ ಐದು ದಶಕಗಳ ಕಲಾಸೇವೆ ಗೈದಿರುತ್ತಾರೆ.ಕಳೆದೆರಡು ವರ್ಷಗಳಲ್ಲಿ ಅಸೌಖ್ಯದಿಂದಾಗಿ ಮನೆಯಲ್ಲಿದ್ದು ಅದರ ಪೂರ್ವದಲ್ಲಿ ಮಂದಾರ್ತಿ ಮೇಳದಲ್ಲಿ ಕಲಾಸೇವೆ ಮಾಡಿದ್ದರು. ಅಂಬೆ, ಮೀನಾಕ್ಷಿ, ದ್ರೌಪದಿ, ದಮಯಂತಿ, ಚಿತ್ರಾಂಗದೆ ಮೊದಲಾದ ಪೌರಾಣಿಕ ಸ್ತ್ರೀಪಾತ್ರಗಳನ್ನು ಅನನ್ಯವಾಗಿ ಚಿತ್ರಿಸಿದ್ದಾರೆ. 

ಕೃಷ್ಣ, ಭೀಷ್ಮ, ರಾಮ, ರಾವಣ, ಈಶ್ವರ, ಅರ್ಜುನ ಮೊದಲಾದ ಪುರುಷ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಕಲಾಸಾಧನೆಗೆ ದ್ಯೋತಕವಾಗಿ ಹಲವು ಪುರಸ್ಕಾರಗಳು ಇವರನ್ನು ಅರಸಿ ಬಂದಿವೆ.

ನಾಲ್ಕು ವರ್ಷಗಳ ಹಿಂದೆ ಸಂಸ್ಥೆಯು ಶಿರಿಯಾರ ಮಂಜು ನಾಯ್ಕ ನೆನಪಿನಲ್ಲಿ ಯಕ್ಷಗಾನ ಕಲಾರಂಗ ಪ್ರಶಸ್ತಿ ನೀಡಿ ಸನ್ಮಾನಿಸಿತ್ತು. ಪತ್ನಿ ,ಈರ್ವರು ಪುತ್ರರು,ಓರ್ವ ಪುತ್ರಿಯನ್ನು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ .ಇವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದರು.

 
 
 
 
 
 
 
 
 
 
 

Leave a Reply