ತೆಕ್ಕಟ್ಟೆ: ಬೋನಿಗೆ ಬಿದ್ದ ಚಿರತೆ..!

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತೆಕ್ಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಲಾಡಿ ಎಂಬಲ್ಲಿ ಕೆಲವು ತಿಂಗಳಿಂದ ಜನರಿಗೆ ಆತಂಕ ಸೃಷ್ಟಿಸಿದ ಚಿರತೆಯೊಂದು ಇಂದು ಬೆಳಿಗ್ಗೆ ಬೋನಿಗೆ ಬಿದ್ದಿದ್ದು ಕಂಡು ಬಂದಿದೆ.

ಕಳೆದ ಸೆ. 8 ರಂದು ಸುರೇಶ್ ದೇವಾಡಿಗರ ಅವರ ಮನೆಯ ಸಾಕು ನಾಯಿಯನ್ನು ಚಿರತೆ ಹೊತ್ತೊಯ್ದಿದಿದ್ದು, ಈ ಘಟನೆಯಿಂದ ಈ ಭಾಗದ ಜನರು ಆತಂಕಗೊಂಡಿದ್ದರು.

ಈ ಭಾಗದಲ್ಲಿ ನಾಯಿ, ಜಾನುವಾರು ಸೇರಿದಂತೆ ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸುವುದು ಮಾತ್ರವಲ್ಲದೇ ಹಾಡುಹಗಲೇ ಪ್ರತಕ್ಷವಾಗಿ ಚಿರತೆ ನಿರಂತರವಾಗಿ ಉಪಟಳ ನೀಡುತ್ತಿದ್ದು ಮಾಲಾಡಿಯ ಎಕ್ರೆಗಟ್ಟಲೆ ಇರುವ ಈ ತೋಟದಲ್ಲಿ 2018 ಆಗಸ್ಟ್ ತಿಂಗಳಲ್ಲಿ ಚಿರತೆಯೊಂದು ಬೋನಿಗೆ ಬಿದ್ದಿತ್ತು. ಬಳಿಕ ಚಿರತೆ ಆಗ್ಗಾಗೆ ಕಾಣಿಸಿಕೊಳ್ಳುತ್ತಿದ್ದು ಅ.6, 2019, ಡಿ.12, 2019, ಡಿ.24,2019 ರಲ್ಲಿ ಹಾಗೂ 2022 ರ ಎಪ್ರಿಲ್ ತಿಂಗಳಿನಲ್ಲಿ ‘ಆಪರೇಶನ್ ಚೀತಾ’ ಕಾರ್ಯಾಚರಣೆ ನಡೆಸಿದ ಇಲಾಖೆ ಚಿರತೆಯನ್ನು ಬೋನಿಗೆ ಬೀಳಿಸಿತ್ತು. ಇದು ಸುಮಾರು 4 ರಿಂದ 5 ವರ್ಷ ಪ್ರಾಯದ ಚಿರತೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಅರಣ್ಯ ಇಲಾಖೆಯು ಒಂದು ತಿಂಗಳಿಂದ ಬೋನು ಇಟ್ಟು ಚಿರತೆ ಹಿಡಿಯುವ ಕಾರ್ಯಾಚರಣೆ ನಡೆಸಲು ಮುಂದಾಗಿದ್ದು, ಅದು ಇಂದು ಯಶಸ್ವಿಯಾಗಿದೆ.

ಚಿರತೆ ಉಪಟಳವಿರುವ ಮಾಲಾಡಿ ತೋಟದ ಬಳಿಯೇ ಸರಕಾರಿ ಶಾಲೆ, ಅಂಗನವಾಡಿ ಹಾಗೂ ದೇವಸ್ಥಾನ ಸೇರಿದಂತೆ ವಸತಿ ಪ್ರದೇಶವಿದೆ. ಆಸುಪಾಸಿನಲ್ಲಿ 50ಕ್ಕೂ ಅಧಿಕ ಮನೆಗಳಿದೆ. ನಿರಂತರವಾಗಿ ಚಿರತೆ ಕಾಟದಿಂದ ಇಲ್ಲಿನ ಜನರು ಭಯಭೀತರಾಗಿದ್ದಾರೆ.

ಈ ಸಂದರ್ಭದಲ್ಲಿ ಕುಂದಾಪುರ ವಲಯ ಅರಣ್ಯಾಧಿಕಾರಿ ಕಿರಣ್ ಬಾಬು, ಉಪವಲಯ ಅರಣ್ಯಾಧಿಕಾರಿ ಉದಯ್, ಅರಣ್ಯ ರಕ್ಷಕಿ ಮಾಲತಿ, ರಂಜಿತ್, ಸೋಮಶೇಖರ್, ತೆಕ್ಕಟ್ಟೆ ಗ್ರಾ.ಪಂ ಉಪಾಧ್ಯಕ್ಷ ಸಂಜೀವ ದೇವಾಡಿಗ, ಪಿಡಿಓ ಸುನೀಲ್, ಮಲ್ಯಾಡಿ ಶಿವರಾಮ್ ಶೆಟ್ಟಿ ಮೊದಲಾದವರು ಭೇಟಿ ನೀಡಿದರು.

 
 
 
 
 
 
 
 
 
 
 

Leave a Reply