ಉಡುಪಿ ಜಿಲ್ಲಾ ಬಿಜೆಪಿ : ಸಂಘಟನಾತ್ಮಕ ಸರಣಿ ಕಾರ್ಯಕ್ರಮಗಳು

ಉಡುಪಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಕರೆಯಂತೆ ರಾಜ್ಯ ಬಿಜೆಪಿ ಸೂಚನೆ ಮೇರೆಗೆ ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಜಿಲ್ಲೆ ಮತ್ತು ಎಲ್ಲಾ ಆರು ಮಂಡಲಗಳ ವ್ಯಾಪ್ತಿಯ 25ಕ್ಕೂ ಮಿಕ್ಕಿ ವಿವಿಧ ಕೇಂದ್ರಗಳಲ್ಲಿ ಯೋಗ ಶಿಬಿರಗಳ ಆಯೋಜನೆ ಮೂಲಕ ಜೂನ 21ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅತ್ಯಂತ ಯಶಸ್ವಿಯಾಗಿ ಆಚರಿಸಲಾಗಿದೆ.

ಅಂತಾರಾಷ್ಟ್ರೀಯ ಯೋಗ ದಿನದ ಜೊತೆಗೆ ಇತರ ಹಲವಾರು ಸಂಘಟನಾತ್ಮಕ ಕಾರ್ಯಕ್ರಮಗಳನ್ನು ಜಿಲ್ಲೆಯಾದ್ಯಂತ ಬೂತ್ ಮಟ್ಟದವರೆಗೆ ಹಮ್ಮಿಕೊಳ್ಳಲಾಗುವುದು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.ಇಂದು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

• ಜೂನ್ 23ರಂದು ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಪುಣ್ಯ ತಿಥಿ ಮತ್ತು ಜುಲೈ 6ರಂದು ಅವರ ಜನ್ಮದಿನ: ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ, ಅವರ ತ್ಯಾಗ, ಬಲಿದಾನ ಮತ್ತು ಸಿದ್ಧಾಂತದ ಕುರಿತು ವಿಚಾರ ಸಂಕಿರಣವನ್ನು ಆಯೋಜಿಸುವ ಜೊತೆಗೆ ಈ 14 ದಿನಗಳ ಪರ್ಯಂತ ಪ್ರತಿ ಬೂತ್ ಮಟ್ಟದಲ್ಲಿ ಸಸಿ ನೆಡುವ ಅಭಿಯಾನ ವೃಕ್ಷಾಪರೋಹಣವನ್ನು ನಡೆಸಲಾಗುವುದು. ಕೆರೆ, ಬಾವಿಗಳು ಮತ್ತು ಇತರ ಜಲ ಮೂಲಕಗಳ ಬಗ್ಗೆ ವಿಶೇಷ ಗಮನ ಹರಿಸಿ ‘ಕ್ಲೀನ್ ಇಂಡಿಯಾ, ಹೆಲ್ತ್‌ ಇಂಡಿಯಾ’ ಘೋಷಣೆಯಡಿಯಲ್ಲಿ ಪ್ಲಾಸ್ಟಿಕ್ ಮುಕ್ತ ಅಭಿಯಾನವನ್ನು ನಡೆಸಲಾಗುವುದು.

• ಜೂನ್ 25ರಂದು ತುರ್ತು ಪರಿಸ್ಥಿತಿಯ ಕರಾಳ ದಿನಾಚರಣೆ: 1975ರಲ್ಲಿ ಕಾಂಗ್ರೆಸ್ ಪಕ್ಷ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರುವ ಮೂಲಕ ಪ್ರಜಾಪ್ರಭುತ್ತದ ಹತ್ಯೆ ಮಾಡಿ, ಮಾನವ ಹಕ್ಕುಗಳನ್ನು ಹತ್ತಿಕ್ಕಿದ ದಿನವಾದ ಜೂನ್ 25ನ್ನು ತುರ್ತು ಪರಿಸ್ಥಿತಿಯ ಕರಾಳ ದಿನವಾಗಿ ಆಚರಿಸಲಾಗುವುದು. ಕಾಂಗ್ರೆಸ್ ಪಕ್ಷ ಕೈಗೊಂಡ ಧಮನಕಾರಿ ನೀತಿ ಮತ್ತು ಪ್ರಜಾಪ್ರಭುತ್ವ, ಹತ್ತಿಕ್ಕುವ ನೀತಿಯನ್ನು ಖಂಡಿಸುವ ಮೂಲಕ ಕಾರ್ಯಕ್ರಮ ಆಯೋಜಿಸಲಾಗುವುದು.

• ಜೂನ್ 27ರಂದು ಪ್ರಧಾನಿ ಮೋದಿಯವರ ಮನ್ ಕಿ ಬಾತ್: ಪ್ರಧಾನಿ ನರೇಂದ್ರ ಮೋದಿಯವರು ವಿವಿಧ ಸಾಮಾಜಿಕ ವಿಷಯಗಳ ಬಗ್ಗೆ ಮನವರಿಕೆ ಮಾಡಲು ದೇಶವಾಸಿಗಳೊಂದಿಗೆ ಹಂಚಿಕೊಳ್ಳುವ ಮನ್ ಕಿ ಬಾತ್ ಕಾರ್ಯಕ್ರಮವನ್ನು ಜೂನ್ 27ರಂದು ಜಿಲ್ಲೆಯಾದ್ಯಂತ ಮಂಡಲ, ಮಹಾ ಶಕ್ತಿ ಕೇಂದ್ರ, ಶಕ್ತಿ ಕೇಂದ್ರ ಮತ್ತು ಬೂತ್ ಮಟ್ಟದಲ್ಲಿ ಪಕ್ಷದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಆಲಿಸುವಂತೆ ಆಯೋಜಿಸಲಾಗುವುದು.

ಸೇವಾ ಹಿ ಸಂಘಟನ್-2ರ ಮುಂದಿನ 3 ಹಂತಗಳು:

• ಲಸಿಕೆ ಹಾಕುವ ಆಂದೋಲನ: ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಕರೆಯಂತೆ, ‘ಮೇರಾ ಬೂತ್, ವ್ಯಾಕ್ಸಿನೇಷನ್ ಯುಕ್ತ’ ತತ್ವದಡಿ, 45 ವರ್ಷ ಮೇಲ್ಪಟ್ಟ ಎಲ್ಲರಿಗೂ 2 ಬಾರಿ ಲಸಿಕೆ ಹಾಕಿಸುವುದು. 18+ ಮೇಲ್ಪಟ್ಟ ಮುಂಚೂಣಿ ಕಾರ್ಮಿಕ ವರ್ಗಕ್ಕೆ ಆದ್ಯತೆಯ ಜೊತೆಗೆ, 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕಿಸುವ ಬಗ್ಗೆ ಪ್ರೇರಣೆ ನೀಡುವುದು.

• ಪರಿಹಾರ ಕಾರ್ಯಗಳು: ಸೇವಾ ಹಿ ಸಂಘಟನ್ ತತ್ವದಡಿ ಜನಸೇವಾ ಕಾರ್ಯಗಳನ್ನು ಮುಂದುವರಿಸುವುದು. ಕೋವಿಡ್’ ನಿಯಮ ಪಾಲನೆ ಹಾಗೂ ಸಾಮಾಜಿಕ ನಡವಳಿಕೆಯ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವುದು. ರಕ್ತದಾನ ಶಿಬಿರ ಆಯೋಜನೆ, ಕೊರೋನಾ ವಾರಿಯರ್ಸ್‌ಗಳನ್ನು ಗುರುತಿಸಿ ಗೌರವಿಸುವುದು, ಸಂಕಷ್ಟದಲ್ಲಿರುವ ಜನತೆಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ, ವೈದ್ಯಕೀಯ ಸಹಾಯ ನೀಡುವುದು, ಕೋವಿಡ್ ಸಹಾಯ ಕೇಂದ್ರಗಳನ್ನು ನಿರ್ವಹಿಸುವುದು.

• ಸ್ಥಳೀಯ ಆರೋಗ್ಯ ಸ್ವಯಂಸೇವಕರು: ನಗರ ಸ್ಥಳೀಯ ಸಂಸ್ಥೆ ಹಾಗೂ ಗ್ರಾಮಗಳಲ್ಲಿ ಒಬ್ಬ ಯುವಕ ಮತ್ತು ಓರ್ವ ಮಹಿಳಾ ಕಾರ್ಯಕರ್ತರ ನೇಮಕ, ಜಿಲ್ಲಾ ಮತ್ತು ಮಂಡಲ ಮಟ್ಟದಲ್ಲಿ 3 ಸದಸ್ಯರ ತಂಡ ರಚನೆ, ವೈದ್ಯಕೀಯ ಉಪಕರಣ ಉಪಯೋಗದ ಬಗ್ಗೆ ತರಬೇತಿ, ಆರೋಗ್ಯ ಸಹಾಯಕಿಯರು ಹಾಗೂ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಲಸಿಕೆ ನೀಡುವ ಪ್ರಕ್ರಿಯೆ ಮತ್ತು ಆರೋಗ್ಯ ಸಂವರ್ಧನೆ ಅಭಿಯಾನದಲ್ಲಿ ಸಹಕರಿಸುವುದು.

• ಜಿಲ್ಲಾ ಮತ್ತು ಮಂಡಲಗಳ ಕಾರ್ಯಕಾರಿಣೆ ಸಭೆ: ರಾಜ್ಯ ಬಿಜೆಪಿ ಸೂಚನೆಯಂತೆ ಕೋಡ್ ನಿಯಮ ಪಾಲನೆಯೊಂದಿಗೆ ನಿಗದಿತ ಅವಧಿಯಲ್ಲಿ ಜಿಲ್ಲಾ ಮತ್ತು ಮಂಡಲವಾರು ಕಾರ್ಯಕಾರಿಣಿ ಸಭೆಗಳು ನಡೆಯಲಿವೆ.

• ಇ-ಪ್ರಶಿಕ್ಷಣ ವರ್ಗ: ಪಕ್ಷದ ಸೂಚನೆಯಂತೆ ಇ-ಪ್ರಶಿಕ್ಷಣ ವರ್ಗವನ್ನು ಮಂಡಲವಾರು ಆಯೋಜಿಸಲಾಗುವುದು ಎಂದು ಕುಯಿಲಾಡಿ ಹೇಳಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಬಿಜೆಪಿ ಜಿಲ್ಲಾ ಸಹ ವಕ್ತಾರರಾದ ಶಿವಕುಮಾರ್ ಅಂಬಲಪಾಡಿ, ಪ್ರತಾಪ್ ಶೆಟ್ಟಿ ಚೇರ್ಕಾಡಿ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್ ಆತ್ರಾಡಿ, ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ ಹಿರೇಬೆಟ್ಟು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply