ಜಿಲ್ಲಾ ಕಾಂಗ್ರೆಸ್ ವತಿಯಿಂದ ಭಾರತ ರತ್ನ ಪ್ರಣಬ್ ಮುಖರ್ಜಿಯವರಿಗೆ ಶ್ರದ್ಧಾಂಜಲಿ ಸಭೆ   

ಉಡುಪಿ: ಕಾಂಗ್ರೆಸ್‌ನ ಹಿರಿಯ ನಾಯಕರಾಗಿದ್ದ ಪ್ರಣಬ್ ಮುಖರ್ಜಿಯವರು ಜನಮಾನಸದಲ್ಲಿ ವಿಶಿಷ್ಟ ಸ್ಥಾನ ಪಡೆದವರು. ಉತ್ತಮ ವಾಗ್ಮಿಯಾಗಿ, ಸಂಸದೀಯ ಪಟುವಾಗಿ ರಾಷ್ಟ್ರಪತಿಯಾಗುವ ಮುನ್ನ ಕಾಂಗ್ರೆಸ್ ಸರಕಾರಗಳಲ್ಲಿ ರಕ್ಷಣೆ, ವಿದೇಶಾಂಗ, ವಾಣಿಜ್ಯ, ಹಣಕಾಸು, ಕೈಗಾರಿಕಾ ಸಚಿವಾಲಯಗಳ ಸಚಿವರಾಗಿ ಸಮರ್ಥರಾಗಿ ಕಾರ್ಯ ನಿರ್ವಹಿಸಿದವರು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹೇಳಿದರು.

ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಜಿಲ್ಲಾ ಕಾಂಗ್ರೆಸ್ ಹಮ್ಮಿಕೊಂಡ ಮಾಜಿ ರಾಷ್ಟ್ರಪತಿ, ಭಾರತ ರತ್ನ ಪ್ರಣಬ್ ಮುಖರ್ಜಿಯವರ ಶ್ರದ್ಧಾಂಜಲಿ ಸಭೆಯಲ್ಲಿ ನುಡಿ ನಮನ ಸಲ್ಲಿಸಿದರು. ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಶ್ರದ್ಧಾಂಜಲಿ ಅರ್ಪಿಸಿ, ಪ್ರಣಬ್ ಮುಖರ್ಜಿಯವರು ವಿತ್ತ ಸಚಿವರಾಗಿ ಸುಧಾರಣೆಗಳ ಮೂಲಕ ಭಾರತದ ಆರ್ಥಿಕತೆಯ ದಿಕ್ಕನ್ನು ಬದಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಜಿ.ಎಸ್.ಟಿ. ಪರಿಕಲ್ಪನೆಯನ್ನು ಮೊದಲಿಗೆ ಜಾರಿಗೆ ತಂದ ಹೆಗ್ಗಳಿಕೆ ಅವರದಾಗಿತ್ತು. ಮುಖರ್ಜಿಯವರು ಕಟ್ಟಾ ಕಾಂಗ್ರೆಸ್ಸಿಗರಾದರೂ ಪ್ರತಿಪಕ್ಷ ನಾಯಕರೊಂದಿಗೂ ಉತ್ತಮ ಭಾಂದವ್ಯ ಹೊಂದಿ ಅಜಾತಶತ್ರುವಾಗಿದ್ದರು. ದೇಶದ ಆರ್ಥಿಕ ಸುಧಾರಣೆಗೆ ಅವರ ಕೊಡುಗೆ ಅಪಾರ ಎಂದು ಬಣ್ಣಿಸಿದರು.

ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಎಂ.ಎ. ಗಫೂರ್ ಮಾತನಾಡಿ, ಮುಖರ್ಜಿಯವರು ಸುದೀರ್ಘ ಕಾಲ ಆಡಳಿತ ಸ್ಥಾನದಲ್ಲಿದ್ದು ಪ್ರಾಮಾಣಿಕರಾಗಿ ಕಳಂಕ ರಹಿತರಾಗಿ ಸೇವೆ ಸಲ್ಲಿಸಿದ ನಾಯಕರಾಗಿದ್ದರು. ವಿತ್ತ ಸಚಿವರಾಗಿದ್ದಾಗ ವಿತ್ತೀಯ ಕೊರತೆಯನ್ನು ಗಣನೀಯವಾಗಿ ತಗ್ಗಿಸಿ ದೇಶೀಯ ಉತ್ಪನ್ನಗಳನ್ನು ಉತ್ತಮ ಮಟ್ಟಕ್ಕೆ ಕೊಂಡೊಯ್ದಿದ್ದರು. ಹಾಗಾಗಿ ಅವರು ಭಾರತದ ಆರ್ಥಿಕತೆಯ ಮೊದಲ ಸುಧಾರಕ ಎಂದು ಹೇಳಿದರು.

ಈ ಸಂದರ್ಭದಲ್ಲಿ ದಿನೇಶ್ ಪುತ್ರನ್, ಬಿ. ನರಸಿಂಹ ಮೂರ್ತಿ, ವೆರೋನಿಕಾ ಕರ್ನೇಲಿಯೋ, ಹರೀಶ್ ಕಿಣಿ, ಮುರಳಿ ಶೆಟ್ಟಿ, ಭಾಸ್ಕರ್ ರಾವ್ ಕಿದಿಯೂರು, ಕುಶಲ್ ಶೆಟ್ಟಿ, ಅಣ್ಣಯ್ಯ ಶೇರಿಗಾರ್, ಕೀರ್ತಿ ಶೆಟ್ಟಿ, ಕೇಶವ್ ಕೋಟ್ಯಾನ್, ಬಾಲಕೃಷ್ಣ ಪೂಜಾರಿ, ವಿಶ್ವಾಸ್ ವಿ. ಅಮೀನ್ ಮೊದಲಾದವರು ಉಪಸ್ಥಿತರಿದ್ದರು.

Leave a Reply