ನಗರಸಭಾ ವ್ಯಾಪ್ತಿಯ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಿ: ಶೋಭಾ ಕರಂದ್ಲಾಜೆ

​ಸೆಪ್ಟೆಂಬರ್ ೯- ಉಡುಪಿ ನಗರಸಭಾ  ವ್ಯಾಪ್ತಿಯ ವಿವಿಧ ವಾರ್ಡ್ ಗಳಲ್ಲಿನ ಸಮಸ್ಯೆಗಳ ಕುರಿತು ​ಸಂಬಂಧಪಟ್ಟ ವಾರ್ಡ್ ನ ಸದಸ್ಯರುಗಳು ನೀಡುವ ದೂರುಗಳನ್ನು ಕೂಡಲೇ ಬಗೆಹರಿಸುವಂತೆ ಸಂಸದೆ ಶೋಭಾ ಕರಂದ್ಲಾಜೆ ನಗರಸಭೆಯ ಅಧಿಕಾರಿಗಳಿಗೆ ಸೂಚಿಸಿದರು.​ ಅವರು ಬುಧವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ, ಉಡುಪಿ ನಗರಸಭೆಯ ಎಲ್ಲಾ ​ವಾರ್ಡ್ ಗಳಲ್ಲಿನ ಸಮಸ್ಯೆಗಳ ಕುರಿತ ​ಸಂಬಂಧಪಟ್ಟ  ನಗರಸಭಾ ಸದಸ್ಯರೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.​

ವಾರ್ಡ್ ಗಳಲ್ಲಿ ಪ್ರಮುಖವಾಗಿರುವ ಕುಡಿಯುವ ನೀರು, ವಿದ್ಯುತ್ ದೀಪ ಸಮಸ್ಯೆ ಮತ್ತು ನೈರ್ಮಲ್ಯದ ಕುರಿತು ಸಮಸ್ಯೆಗಳನ್ನು ಆದ್ಯತೆಯಲ್ಲಿ ಇತ್ಯರ್ಥಪಡಿಸಿ, ವಾರ್ಡ್  ಗಳಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ತೆಗೆಯಲು ಹೆಚ್ಚಿನ ಸಿಬ್ಬಂದಿ ನಿಯೋಜಿಸಿ, ವರಿಗೆ ಕಳೆ ತೆಗೆಯುವ ಯಂತ್ರಗಳನ್ನು ನೀಡಿ, ಖಾಲಿ ಸೈಟ್ ಗಳಲ್ಲಿ ಬೆಳದಿರುವ ಗಿಡಗಳನ್ನು ತೆಗೆಯಲು ​ಸಂಬಂಧಪಟ್ಟ ಜಾಗದ ಮಾಲೀಕರಿಗೆ ಸೂಚಿಸಿ, ನಿಗಧಿತ ಅವಧಿಯಲ್ಲಿ ಅವರು ತೆಗೆಯದಿದ್ದಲ್ಲಿ ಅವರಿಗೆ ದಂಡ ವಿಧಿಸುವ ಕುರಿತಂತೆ ಸಾರ್ವಜನಿಕ ಪ್ರಕಟಣೆ ನೀಡುವಂತೆ ಅಧಿಕಾರಿಗಳಿಗೆ ಶೋಭಾ ಕರಂದ್ಲಾಜೆ ಸೂಚನೆ ನೀಡಿದರು.

ಮಣಿಪಾಲದಲ್ಲಿ ರಸ್ತೆ ಅಗಲೀಕರಣದಿಂದ ಸಂತ್ರಸ್ತರಾಗುವ ಗೂಡಂಗಡಿಗಳ ಮಾಲೀಕರಿಗೆ ವ್ಯಾಪಾರಕ್ಕಾಗಿ ಪರ್ಯಾಯ ಜಾಗ ಗುರುತಿಸಿ, ರಸ್ತೆ ಬದಿಯಲ್ಲಿ ಅನುಮತಿ ಇಲ್ಲದೇ  ವ್ಯಾಪಾರ ಮಾಡುವವರು ವಿರುದ್ದ ಕ್ರಮ ಕೈಗೊಳ್ಳಿ, ವಾರ್ಡ್ಗಳಲ್ಲಿನ ರಸ್ತೆಗಳ ಪಾಟ್ ಹೋಲ್ ಗಳನ್ನು ಮುಚ್ಚುವಂತೆ ಸಂಸದರು ಸೂಚನೆ ನೀಡಿದರು.​ ನಗರಸಭೆಯ ಪ್ರಸ್ತುತ ಕಟ್ಟಡ ಹಳೆಯದಾಗಿದ್ದು ಹೊಸ ಕಟ್ಟಡ ನಿರ್ಮಾಣ ಕುರಿತಂತೆ ಸದಸ್ಯರೊಬ್ಬರ ಮಾತಿಗೆ ಉತ್ತರಿಸಿದ ಸಂಸದರು, ಉಡುಪಿಯ ಹಳೇ ತಾಲೂಕು ಕಚೇರಿ ಬಳಿ ನಿರ್ಮಾಣ ಮಾಡುವಂತೆ ಈ ಹಿಂದೆ ಸಲ್ಲಿಸಿದ್ದ ಮನವಿ ಕುರಿತು ಪ್ರಶ್ನಿಸಿದರು, ಸದ್ರಿ ಜಾಗವನ್ನು ನಗರಸಭೆಗೆ ನೀಡುವ ಕುರಿತ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.​ ನಗರಸಭಾ ವ್ಯಾಪ್ತಿಯಲ್ಲಿನ ಬೀದಿ ದೀಪಗಳನ್ನು 15 ದಿನದಲ್ಲಿ ಸಮರ್ಪಕ ನಿರ್ವಹಣೆ ಮಾಡಲಾಗುವುದು, ಎಲ್ಲಾ ವಾರ್ಡ್ಗಳಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ತೆಗೆಯಲು ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗುವುದು ಎಂದು ನಗರಸಭೆಯ ಅಧಿಕಾರಿಗಳು ತಿಳಿಸಿದರು.

ಇತೀಚೆಗೆ ಮೃತಪಟ್ಟ  ಇಂದಿರಾನಗರದ ಮಹಿಳೆಯ ಸಾವಿನ ವರದಿ ಕುರಿತು ಸದ್ರಿ ವಾರ್ಡ್ನ ಸದಸ್ಯರು ಕೋರಿದರು. ಈ ಕುರಿತು ಉತ್ತರಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್, ತನಿಖೆಗಾಗಿ ನೇಮಿಸಿದ್ದ ತಜ್ಞ ವೈದ್ಯರ ವರದಿ ಪೂರ್ಣಗೊಂಡಿದ್ದು, ಮರಣೋತ್ತರ ವರದಿ ಮತ್ತು ಎಫ್.ಎಸ್.ಎಲ್ ವರದಿಗಾಗಿ ಕಾಯಲಾಗುತ್ತಿದೆ, ಸಿ.ಓ.ಡಿ ತನಿಖೆ ಸಹ ನಡೆಯುತ್ತಿದೆ, ಪ್ರಕರಣವನ್ನು ಅತ್ಯಂತ ಗಭೀರವಾಗಿ ಪರಿಗಣಿಸಿ ತನಿಖೆ ನಡೆಸಲಾಗುತ್ತಿದೆ , ಜಿಲ್ಲೆಯಲ್ಲಿ ಕೋವಿಡ್ ಕುರಿತ ಕೆಲವು ಸಾಮಾಜಿಕ ಜಾಲತಾಣಗಳ ಅಪಪ್ರಚಾರದಿಂದ ಕೋವಿಡ್ ಪರೀಕ್ಷೆಗೆ ಹಿನ್ನಡೆಯಾಗಿದ್ದು, ಇದರಿಂದ ರೋಗಿಗಳು ಕೊನೆಯ ಕ್ಷಣದಲ್ಲಿ ,ಗಂಭೀರ ಪರಿಸ್ಥಿತಿಯೊಂದಿಗೆ ಮನೆಯಿಂದ ನೇರವಾಗಿ ಐ.ಸಿ.ಯು ಚಿಕಿತ್ಸೆಗೆ ದಾಖಲಾಗುತ್ತಿದ್ದು, ಪ್ರಸ್ತುತ ಎಲ್ಲಾ ಐ.ಸಿ.ಯು. ಗಳು ಭರ್ತಿಯಾಗಿ,  ಮರಣಗಳು ಸಂಭವಿಸುತ್ತಿವೆ​.

ಕೋವಿಡ್ ನ್ನು ಬೇಗ ಗುರುತಿಸಿ ಚಿಕಿತ್ಸೆ ನೀಡಿದಲ್ಲಿ ಸಂಪೂರ್ಣ ಗುಣಮುಖರಾಗಲು ಸಾದ್ಯವಿದೆ, ಆದ್ದರಿಂದ ಎಲ್ಲಾ ನಗರಸಭಾ ಸದಸ್ಯರು ತಮ್ಮ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಅರಿವು ಮೂಡಿಸಿ, ಜ್ವರ ಶೀತ ಕೆಮ್ಮ ಲಕ್ಷಣಗಳಿದ್ದಲ್ಲಿ ಕೂಡಲೇ ಜಿಲ್ಲಾಸ್ಪತೆಯಲ್ಲಿ ಉಚಿತವಾಗಿ ಪರೀಕ್ಷೆ ಮಾಡಿಸಿಕೊಳ್ಳುವಂತೆ ತಿಳಿಸಿದರು. ಜಿಲ್ಲಾಡಳಿತದ ನಿಂದ ದಾಖಲಾಗುವ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಸಂಪೂರ್ಣ ಉಚಿತ ಚಿಕಿತ್ಸೆ ನೀಡಲಾಗುವುದು ಎಂದರು.

ಆಸ್ಪತ್ರೆಗಳಿಗೆ ದಾಖಲಾಗಲು ಇಷ್ಠವಿಲ್ಲವಾದಲ್ಲಿ ಹೋಂ ಐಸೋಲೇಶನ್  ವ್ಯವಸ್ಥೆ ಸಹ ಇದೆ ಎಂದು ಶಾಸಕ ರಘುಪತಿಭಟ್ ತಿಳಿಸಿದರು.​ ವಿವಿಧ ವಾರ್ಡ್ ಗಳಲ್ಲಿನ ಚರಂಡಿ, ಒಳಚರಂಡಿ, ನೀರು ಲೀಕೇಜ್, ಕಸ ವಿಲೇವಾರಿ , ರಸ್ತೆ ದುರಸ್ತಿ ಸಮಸ್ಯೆಗಳ ಬಗ್ಗೆ ​ಸಂಬಂಧಪಟ್ಟ ನಗರಸಭಾ ಸದಸ್ಯರು ಮಾತನಾಡಿದರು.​ ಸಭೆಯಲ್ಲಿ ನಗರಸಭೆಯ ವಿವಿಧ ವಾರ್ಡ್ ಗಳ ಸದಸ್ಯರು , ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಅರುಣ ಪ್ರಭ, ​ ​ಪೌರಾಯುಕ್ತ ಆನಂದ್ ಕಲ್ಲೋಳಿಕರ್ ಹಾಗೂ ನಗರಸಭೆಯ ಅಧಿಕಾರಿಗಳು ಉಪಸ್ಥಿತರಿದ್ದರು.

 
 
 
 
 
 
 
 
 

Leave a Reply