ಉಡುಪಿ ಧರ್ಮಪ್ರಾಂತ್ಯ ಪಿ.ಆರ್‌.ಓ ವಂ|ಚೇತನ್‌ ಲೋಬೊ ಅವರಿಗೆ ಬಿಳ್ಕೋಡುಗೆ ಸಮಾರಂಭ

ಉಡುಪಿ: ಧರ್ಮಪ್ರಾಂತ್ಯದಲ್ಲಿ 9 ವರ್ಷಗಳ ಕಾಲ ಉಜ್ವಾಡ್‌ ಪತ್ರಿಕೆಯ ಸಂಪಾದಕರಾಗಿ, ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಸೇವೆ ಸಲ್ಲಿಸಿ ಮಂಗಳೂರಿನ ಖ್ಯಾತ ಅಸ್ಸಿಸಿ ಪ್ರೆಸ್ ಹಾಗೂ ಅಸ್ಸಿಸಿ ಸ್ಟುಡಿಯೋದ ನಿರ್ದೇಶಕ ಹಾಗೂ `ಸೆವಕ್’ ಮಾಸಿಕ ಪತ್ರಿಕೆಯ ಸಂಪಾದಕರಾಗಿ ನಿಯುಕ್ತಿಗೊಂಡ ವಂ|ಚೇತನ್‌ ಲೋಬೊ ಅವರ ಬಿಳ್ಕೋಡುಗೆ ಸಮಾರಂಭ ಸೋಮವಾರ ಉಡುಪಿ ಧರ್ಮಾಧ್ಯಕ್ಷರ ನಿವಾಸದಲ್ಲಿ ನೆರವೇರಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಉಡುಪಿ ಕಥೊಲಿಕ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್‌ ಐಸಾಕ್‌ ಲೋಬೊ ಅವರು ಮಾತನಾಡಿ ವಂ|ಚೇತನ್‌ ಲೋಬೊ ಅವರು ಕಪುಚಿನ್‌ ಧಾರ್ಮಿಕ ಸಭೆಯ ಧರ್ಮಗುರುವಾಗಿದ್ದರೂ ಕೂಡ ತಮ್ಮ ಹೆಚ್ಚಿನ ಅವಧಿಯನ್ನು ಶಿವಮೊಗ್ಗ ಉಡುಪಿ ಧರ್ಮಪ್ರಾಂತ್ಯಗಳಲ್ಲಿ ಆಡಳಿತಾತ್ಮಕ ಹುದ್ದೆಗಳಲ್ಲಿ ಅತ್ಯುನ್ನತ ಸೇವೆ ನೀಡಿದ್ದು ಅವರ ಸೇವೆ ವರ್ಣನಾತೀತ. ಅತೀ ಹೆಚ್ಚು ತಾಳ್ಮೆ ಹೊಂದಿದ ವ್ಯಕ್ತಿಯಾಗಿರುವ ವಂ|ಚೇತನ್‌ ಲೋಬೊ ಅವರು ತಮ್ಮ 9 ವರ್ಷಗಳ ಸೇವೆಯಲ್ಲಿ ಧರ್ಮಪ್ರಾಂತ್ಯದ ಏಳಿಗೆಗೆ ನೀಡಿರುವ ಸೇವೆ ಅಪಾರವಾಗಿದ್ದು ಮುಂದೆಯೂ ತಮ್ಮ ಬಿಡುವಿನ ಅವಧಿಯಲ್ಲಿ ಧರ್ಮಪ್ರಾಂತ್ಯ ಅವರ ಸೇವೆಯನ್ನು ಯುವಜನರ ಮತ್ತು ಮಕ್ಕಳಿಗೆ ಮಾಧ್ಯಮದ ತರಬೇತಿ ವಿಚಾರದಲ್ಲಿ ಬಳಸಿಕೊಳ್ಳಲಾಗುವುದು ಎಂದರು.
ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ವಂ|ಚೇತನ್‌ ಲೋಬೊ ಅವರು ತಾನು ಪ್ರಥಮವಾಗಿ ಒರ್ವ ಕ್ರೈಸ್ತ ಧರ್ಮಗುರುವಾಗಿ ಗುರುತಿಸಲ್ಪಟ್ಟರೆ ಎರಡನೇಯದಾಗಿ ಒರ್ವ ಪತ್ರಕರ್ತನಾಗಿ ಗುರುತಿಸಿಕೊಳ್ಳಲು ಬಯಸುತ್ತೇನೆ. ಪತ್ರಕರ್ತನಾಗಿರವವನು ಯಾವುದೇ ವ್ಯಕ್ತಿಯ ಅಡಿಯಾಳಾಗಿರದೆ ಸಮಾಜದ ಅಂಕು ಡೊಂಕುಗಳನ್ನು ನೇರವಾಗಿ ಪ್ರಶ್ನಿಸುವಂತರಿಬೇಕು. ಸಮಾಜದಲ್ಲಿನ ಸಮಸ್ಯೆಗಳನ್ನು ಅರಿತು ಅದರ ಬಗ್ಗೆ ಪ್ರಶ್ನೆ ಮಾಡಿದಾಗ ಮಾತ್ರ ಆತ ಒರ್ವ ನೈಜ ಪತ್ರಕರ್ತನಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.
ಕಲ್ಯಾಣಪುರ ಮಿಲಾಗ್ರಿಸ್‌ ಕ್ಯಾಥೆಡ್ರಲ್‌ ಇದರ ರೆಕ್ಟರ್‌ ವಂ| ವಲೇರಿಯನ್‌ ಮೆಂಡೊನ್ಸಾ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ರಾಜೇಶ್‌ ಶೆಟ್ಟಿ, ಧರ್ಮಪ್ರಾಂತ್ಯದ ಮಾಧ್ಯಮ ಸಮನ್ವಯಕಾರರಾದ ಮೈಕಲ್‌ ರೊಡ್ರಿಗಸ್‌, ಬಿಗ್‌ ಜೆ ವಾಹಿನಿಯ ನಿರ್ದೇಶಕ ಪ್ರಶಾಂತ್‌ ಜತ್ತನ್ನ ಅವರು ಶುಭಹಾರೈಸಿದರು.
ಹಿರಿಯ ಧರ್ಮಗುರು ವಂ| ವಿಲಿಯಂ ಮಾರ್ಟಿಸ್‌ ಉಪಸ್ಥಿತರಿದ್ದರು
ಪತ್ರಕರ್ತ ಸ್ಟೀವನ್‌ ಕುಲಾಸೊ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply