ಕಾಂಗ್ರೆಸ್ ಗೂಂಡಾಗಿರಿಯಿಂದ ರಾಜ್ಯದ ಜನತೆಗೆ ಮುಕ್ತಿ ನೀಡಬೇಕಾಗಿದೆ: ಕುಯಿಲಾಡಿ ಸುರೇಶ್ ನಾಯಕ್

ರಾಮನಗರ : ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯವರ ಎದುರಲ್ಲೇ ರಾಜ್ಯದ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಮೇಲೆ ಹಲ್ಲೆಗೆ ಮುಂದಾಗಿರುವ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಮತ್ತು ಅವರಿಗೆ ಬೆಂಬಲ ನೀಡಿರುವ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಎಸ್.ರವಿಯ ಗೂಂಡಾಗಿರಿಯನ್ನು ಉಡುಪಿ ಜಿಲ್ಲಾ ಬಿಜೆಪಿ ತೀವ್ರವಾಗಿ ಖಂಡಿಸಿದೆ.

ರಾಮನಗರದಲ್ಲಿ ನಡೆದಿರುವುದು ಕಾಂಗ್ರೆಸ್ ಗೂಂಡಾಗಿರಿಯ ಒಂದು ಮಾದರಿಯಷ್ಟೇ. ಗ್ರಾಮ ಮಟ್ಟದಿಂದ ರಾಜ್ಯ ಮತ್ತು ರಾಷ್ಟ್ರ ಮಟ್ಟದವರೆಗೂ ಗೂಂಡಾಗಿರಿ, ಪಾಳೆಗಾರಿಕೆ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಇವೇ ಮುಂತಾದವುಗಳು ಕಾಂಗ್ರೆಸ್ ರಾಜಕಾರಣದ ಮೂಲ ಸಂಸ್ಕೃತಿಯಾಗಿದೆ. ಇಂತಹ ಕಾಂಗ್ರೆಸ್ ನ ಕೀಳು ಮಟ್ಟದ ಗೂಂಡಾಗಿರಿಯಿಂದ ರಾಜ್ಯದ ಜನತೆಯನ್ನು ಪಾರು ಮಾಡಬೇಕಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.

ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲದ ಕಾಂಗ್ರೆಸಿಗರು ಇಂತಹ ಹೇಯ ಕೃತ್ಯಗಳಿಂದ ಕಾಂಗ್ರೆಸ್ ಅಂದರೆ ಗೂಂಡಾಗಿರಿ ಎಂಬುದನ್ನು ನಿರೂಪಿಸಿ, ಸ್ವತಃ ಕಾಂಗ್ರೆಸ್ಸನ್ನು ಬಸ್ಮ ಮಾಡಲು ಹೊರಟಂತಿದೆ.

ವಿಶ್ವ ನಾಯಕ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯ ವೈಖರಿಯನ್ನು ಮೆಚ್ಚಿ ಜನತೆ ದೇಶಾದ್ಯಂತ ಜನಪರ ಆಡಳಿತಕ್ಕಾಗಿ ಬಿಜೆಪಿಗೆ ಅಧಿಕಾರವನ್ನು ನೀಡಿದೆ. ಇತ್ತೀಚೆಗೆ ನಡೆದ ಎಲ್ಲಾ ಚುನಾವಣೆಗಳಲ್ಲಿ ಬಿಜೆಪಿಯ ಗೆಲುವಿನ ನಾಗಾಲೋಟದಿಂದ ಕಂಗೆಟ್ಟಿರುವ ಕಾಂಗ್ರೆಸ್ ಇಂತಹ ಗೂಂಡಾಗಿರಿಯ ಕೀಳು ಸಂಸ್ಕೃತಿಯಿಂದ ಜನತೆಯಿಂದ ಇನ್ನಷ್ಟು ತಿರಸ್ಕರಿಸಲ್ಪಟ್ಟು ಮೂಲೆಗುಂಪಾಗಲಿದೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply