ಬೆಂಗಳೂರು : ಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿಯನ್ನು ನೋಡಿಕೊಳ್ಳಲು ನಿಯೋಜಿಸಿದ್ದ ನರ್ಸ್ ಒಬ್ಬಳು, ಮಾಲೀಕನ ಮನೆಯಲ್ಲಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ಚಿನ್ನಾಭರಣ ಕಳ್ಳತನ ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾಳೆ. ಮನೆ ಮಾಲೀಕರಾದ ನಿವೃತ್ತ ಹೆಡ್ ಮಾಸ್ಟರ್ ಮೇಲೂರಪ್ಪ ಎಂಬುವರು ನೀಡಿದ ದೂರಿನ ಮೇರೆಗೆ ಕೇರ್ಟೇಕರ್ ನರ್ಸ್ ಪವಿತ್ರ ಎಂಬವಳನ್ನು ಪೊಲೀಸರು ಬಂಧಿಸಿದ್ದಾರೆ.
ಅಮೃತಹಳ್ಳಿಯ ಪೊಲೀಸ್ ಠಾಣಾ ವ್ಯಾಪ್ತಿಯ ವೆಂಕಟಪ್ಪ ಬಡಾವಣೆಯಲ್ಲಿ ಮೇಲೂರಪ್ಪ ವಾಸವಾಗಿದ್ದಾರೆ. ಇವರ ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದರು. ಹೆಂಡತಿಯನ್ನು ನೋಡಿಕೊಳ್ಳುವ ಸಲುವಾಗಿ ಡಿನೋವಾ ಏಜೆನ್ಸಿ ಕಡೆಯಿಂದ ಆರೈಕೆ ಮಾಡಲು ದಾದಿಯನ್ನು ಮನೆ ಮಾಲೀಕರು ನೇಮಿಸಿದ್ದರು.
ಡಿಸೆಂಬರ್ 10 ರಂದು ಪವಿತ್ರ ಎಂಬವಳನ್ನು ಮನೆಗೆ ಕರೆತಂದಿದ್ದರು. ಮೂರ್ನಾಲ್ಕು ದಿನ ಕೆಲಸ ಮಾಡಿದ್ದ ನರ್ಸ್ ಮನೆಯಲ್ಲಿದ್ದ 4 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನ ಕದ್ದು ಎಸ್ಕೇಪ್ ಆಗಿದ್ದಳು. ಸದ್ಯ ಆ ಖತರ್ನಾಕ್ ನರ್ಸ್ ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ.