ಬ್ರಹ್ಮಾವರದ ಉನ್ನತಿ ಸಭಾಭವನದಲ್ಲಿ ಶುಕ್ರವಾರ ಅಜಪುರ ಕರ್ನಾಟಕದ ಸಂಘದ ವತಿಯಿಂದ ನಡೆದ 66ನೇ ವರ್ಷದ ನಾಡಹಬ್ಬದ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ರಹ್ಮಾವರದ ತಹಶಿಲ್ದಾರ ರಾಜಶೇಖರ ಮೂರ್ತಿ ಅವರು ಮಾತನಾಡಿ ಹಿಂದೆ ಮಾನವೀಯ ಸಂಬಂಧಗಳು ಹೆಚ್ಚಿತ್ತು.
ಆದರೆ ಇಂದು ವಿದ್ಯುನ್ಮಾನ ಮಾಧ್ಯಮದಿಂದ ನಾವು ಎಲ್ಲವನ್ನೂ ಕಳೆದುಕೊಂಡಿದ್ದೇವೆ. ಓದುವ ಹವ್ಯಾಸ ವೂ ನಮ್ಮಿಂದ ದೂರವಾಗಿದೆ. ಅಜ್ಜನ ಕಾಲದ ಪುಸ್ತಕಗಳು ನಮಗೆ ಬೇಡವಾಗಿ, ವಿದ್ಯುನ್ಮಾನ ಮಾಧ್ಯಮ ದಿಂದ ಕಣ್ಣಿನ ತೊಂದರೆಗಳನ್ನು ಹೆಚ್ಚು ಅನುಭವಿಸುವಂತಾಗಿದೆ.
ಹಳೆಯ ಆಯ್ಕೆಯ ಜತೆಗೆ ಹಿಂದಿನ ಸಂಪ್ರದಾಯಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಆಗಬೇಕಿತ್ತು. ನಂಬಿಕೆ ಮತ್ತು ತಿಳುವಳಿಕೆಯ ನಡುವೆ ಭಾನಾತ್ಮಕ ಬುದ್ಧಿ ಜೀವಿಗಳಾಗಿ ಹೊಂದಾಣಿಕೆಯಿಂದ ನಮ್ಮ ಜೀವನ ಸಾಗಿ ದಲ್ಲಿ ಮಾತ್ರ ಸುಖಮಯವಾಗಿರುತ್ತದೆ ಎಂದು ಹೇಳಿದರು.
ಶಿಕ್ಷಕರಿಗಿಂತಲೂ ಗುರುವಿಗೆ ಮಹತ್ವ ಹೆಚ್ಚಿರುವ ನಮ್ಮೀ ದೇಶದಲ್ಲಿ ಹಿರಿಯರಿಂದ ತಮ್ಮ ಕಿರಿಯರಿಗೆ ತಮ್ಮ ಕರ್ತವ್ಯಗಳನ್ನು ತಿಳಿಸಿಕೊಡುವ ಪ್ರಯತ್ನವಾಗುತ್ತಿಲ್ಲ. ಆದ್ದರಿಂದ ನಮ್ಮ ಸಂಪ್ರದಾಯಗಳು ಯುವಕರಿಂದ ದೂರವಾಗುತ್ತಿದೆ ಎಂದು ವಿಷಾಧ ವ್ಯಕ್ತಪಡಿಸಿದರು.
ಇದೇ ಸಂದರ್ಭ ನಿವೃತ್ತ ಶಿಕ್ಷಕ ಹಾಗೂ ಸಾಹಿತಿ ಅಲ್ಫೋನ್ಸ್ ಡಿಸೋಜಾ ಅವರಿಗೆ ಸುವರ್ಣ ನಿಧಿ ಸನ್ಮಾನ. ಯಕ್ಷಗಾನ ಪ್ರಸಾಧನ ಕಲಾವಿದ ಬಾಲಕೃಷ್ಣ ನಾಯಕ್ ಹಂದಾಡಿ ಅವರಿಗೆ ಹಾರಾಡಿ ರಾಮ ಗಾಣಿಗ, ಮಟಪಾಡಿ ವೀರಭದ್ರ ನಾಯಕ್ ಹಂದಾಡಿ ಸುಬ್ಬಣ್ಣ ಭಟ್, ಹಾಸ್ಯಗಾರ ಚಂದು ನಾಯಕ್ ಸ್ಮಾರಕ ದತ್ತಿನಿಧಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಅವರ ಧರ್ಮಪತ್ನಿ ಪ್ರಭಾಮಣಿ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಎಚ್.ನಿತ್ಯಾನಂದ ಶೆಟ್ಟಿ ಹಾರಾಡಿ ಸ್ವಾಗತಿಸಿದರು. ಕಾರ್ಯದರ್ಶಿ ಮೋಹನ್ ಉಡುಪ ವಂದಿಸಿದರು. ದಿನಕರ ಬೈಕಾಡಿ ಕಾರ್ಯಕ್ರಮ ನಿರೂಪಿಸಿದರು. ಉಮೇಶ್ ಪೂಜಾರಿ, ಅಲ್ತಾರು ನಾಗರಾಜ್, ದಿನೇಶ್ ಮತ್ತು ಬಿ.ಮಾಧವ ಖಾರ್ವಿ ಸಹಕರಿಸಿದರು.