ಬ್ರಹ್ಮಾವರದ ಮೂಲಕ ಉಡುಪಿಗೆ ಬರುವ ಎಲ್ಲಾ ವೇಗದೂತ ರಸ್ತೆ ಸಾರಿಗೆ ಅಂಬಲಪಾಡಿ ವೃತ್ತ, ಜೋಡುಕಟ್ಟೆ ಮಾರ್ಗವಾಗಿ ಖಾಸಗಿ ರಸ್ತೆ ಸಾರಿಗೆ ನಿಲ್ದಾಣಕ್ಕೆ ಬರುತ್ತಿತ್ತು. ಇದರಿಂದ ಅಂಬಲಪಾಡಿ ದೇವಸ್ಥಾನಕ್ಕೆ, ಜಿಲ್ಲಾ ಆಸ್ಪತ್ರಗೆ, ಭಾರತೀಯ ಜೀವ ವಿಮಾ ವಿಭಾಗೀಯ ಕಚೇರಿಗೆ, ಡಾ. ತೋನ್ಸೆ ಮಾಧವ ಅನಂತ ಪೈ ಆಸ್ಪತ್ರೆಗೆ, ನ್ಯಾಯಾಲಯಗಳ ಸಂಕಿರಣಕ್ಕೆ, ಉಡುಪಿ ನಗರ ಸಭಾ ಕಚೇರಿಗೆ ಮತ್ತು ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಹೋಗುವವರಿಗೆ ಅನುಕೂಲವಾಗುತ್ತಿತ್ತು. ರಾಷ್ಟ್ರೀಯ ಹೆದ್ದಾರಿ 66ರ ಅದರ ಸೇವಾರಸ್ತೆಯ ಕಾಮಗಾರಿ ಪ್ರಾರಂಭವಾದಾಗಿನಿಂದ ಕರಾವಳಿ ವ್ರತ್ತದಿಂದ ನೇರವಾಗಿ ನಿಲ್ದಾಣಕ್ಕೆ ಹೋಗಲು ಪ್ರಾರಂಭವಾಯಿತು. ಈ ಬಗ್ಗೆ ಉಡುಪಿ ಬಳಕೆದಾರರ ವೇದಿಕೆಯಲ್ಲಿ ನಡೆದ ಮುಖಾಮುಖಿಯಲ್ಲಿ ಪ್ರಸ್ತಾಪಿಸಿದಾಗ ಕಾಮಗಾರಿ ಮುಕ್ತಾಯವಾಗುತ್ತಲೇ ಮೊದಲಿನಂತೆ ಸಂಚರಿಸುವವು ಎಂದು ಹೇಳಲಾಯಿತು. ಕಾಮಗಾರಿ ಮುಗಿದು ರಸ್ತೆ ಬಿಟ್ಟುಕೊಟ್ಟಿದ್ದು ಬಹಳ ಸಮಯವಾದರೂ ಬಸ್ಸುಗಳು ಮಾತ್ರ ಸಂಚರಿಸುತ್ತಿಲ್ಲ. ಇದರಿಂದ ಜನರಿಗೆ ವಿಶೇಷವಾಗಿ ಬಡವರಿಗೆ ಸಮಯದ, ಹಣದ ನಷ್ಟವಾಗುತ್ತಿದೆ. ಖಾಸಗಿ ರಸ್ತೆ ಸಾರಿಗೆ ಜನರ ಅನುಕೂಲಕ್ಕಾಗಿ ಸಂಚರಿಸುವುದರಿಂದ ಮೊದಲಿನಂತೆ ಸಂಚರಿಸುವಂತೆ ಮಾಡಿ ಸಂಬಂಧಟ್ಟವರು ಜನಹಿತ ದೃಷ್ಟಿಯಿಂದ ಸಹಕರಿಸಬೇಕೆನ್ನುತ್ತಾರೆ ಉಡುಪಿ ನಗರ ಸಭೆಯ ಮಾಜಿ ಸದಸ್ಯ ಶ್ರೀನಿವಾಸ ಶೆಟ್ಟಿ ತೋನ್ಸೆ.