ಜನರ ಆಶಿರ್ವಾದದಿಂದ ಎಲ್ಲಾ ಸಮಸ್ಯೆಗಳಿಂದ ನಾನು ಹೊರ ಬರುತ್ತೇನೆ~ ಉದ್ಯಮಿ ಬಿ.ಆರ್.ಶೆಟ್ಟಿ 

ಉಡುಪಿ: ನಾನು ಕೆಲವು ಜನರನ್ನು ನಂಬಿ ಮೋಸ ಹೋದೆ. ನನ್ನ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಸೇರಿದ ಒಬ್ಬನನ್ನು ಸಿ ಎಫ್ ಓ ಮಾಡಿದೆ. ಅವನೇ ನನ್ನ ಬೆನ್ನಿಗೆ ಚೂರಿ ಹಾಕಿದ ಎಂದು  ಇಂದು ಉದ್ಯಮಿ ಬಿ.ಆರ್ ಶೆಟ್ಟಿ ಉಡುಪಿಯಲ್ಲಿ ಸುದ್ದಿಗೋಷ್ಠಿ ಮಾಡಿ ಮಾತನಾಡಿದರು. 
ನನಗೇ ತಿಳಿಯದ ಹಾಗೆ ಬೆನ್ನ ಹಿಂದೆ ಆರ್ಥಿಕ ವಂಚನೆ ಮಾಡಿದ್ದಾರೆ. ಇಂತಹ ವ್ಯಕ್ತಿಯನ್ನು ಆರೋಪಿ ಎಂದು ನಾನು ಹೇಳಲಾರೆ . ಏಕೆಂದರೆ ಆರೋಪ ಇನ್ನೂ ಸಾಬೀತಾಗಿಲ್ಲ. ಪ್ರಕರಣ ನ್ಯಾಯಾಲಯದಲ್ಲಿದೆ ಹಾಗಾಗಿ ಹೆಚ್ಚೇನು ಹೇಳಲಾರೆ. ಪಟ್ಟಭದ್ರ ಹಿತಾಸಕ್ತಿಗಳು ಸೇರಿ ನನಗೆ ವಂಚನೆ ಮಾಡಿದ್ದಾರೆ ಎಂದು ಬಿ.ಆರ್ ಶೆಟ್ಟಿ ಹೇಳಿದರು.

ಜನರ ಆಶಿರ್ವಾದದಿಂದ ಈ ಎಲ್ಲಾ ಸಮಸ್ಯೆಗಳಿಂದ ನಾನು ಹೊರ ಬರುತ್ತೇನೆ. ಜನಸೇವೆಯೇ ಜನಾರ್ದನ ಸೇವೆ ಎಂದು ನಂಬಿದವನು ನಾನು . ಟ್ರಂಪ್ ಗೆ ಒಂದು ಕ್ರೆಡಿಟ್ ಕಾರ್ಡ್ ಕೂಡ ಕೊಡಲು ಅಮೆರಿಕದ ಬ್ಯಾಂಕುಗಳು ಹಿಂದೆ ಮುಂದೆ ನೋಡುತ್ತಿದ್ದವು. ಅಂತಹ ದಿವಾಳಿ ಆಗಿದ್ದ ಮನುಷ್ಯ ಬಳಿಕ ಅಮೆರಿಕದ ಅಧ್ಯಕ್ಷ ಆಗಲಿಲ್ಲವೇ? ಎಂದು ಪ್ರಶ್ನಿಸಿದರು. 

ಯಾರಿಗೂ ನಾನು ವಂಚನೆ ಮಾಡಿಲ್ಲ ಎಂಬ ಆತ್ಮವಿಶ್ವಾಸವಿದೆ. ನಾನು ಉಡುಪಿಯಲ್ಲಿದ್ದಾಗ ನನ್ನ ಕಿಸೆಯಲ್ಲಿ ಒಂದು ರೂಪಾಯಿ ದುಡ್ಡು ಇರುತ್ತಿರಲಿಲ್ಲ. ಸಾಲಮಾಡಿ ಬೈಕಿಗೆ ಪೆಟ್ರೋಲ್ ಹಾಕಿ ಓಡಾಡುತ್ತಿದ್ದೆ. ಯಾರಿಂದ ಸಾಲ ಪಡೆದಿದ್ದೇನೆ ಎಲ್ಲವನ್ನೂ ವಾಪಾಸು ಮಾಡಿದ್ದೇನೆ ಎಂದು ಹೇಳಿದರು. ಐ ವಿಲ್ ಕಮ್ ಬ್ಯಾಕ್ ಅಗೈನ್.

ನಾನು ಕಷ್ಟಪಟ್ಟು ದುಡಿದ ಹಣವನ್ನು ಮರು ಗಳಿಸುತ್ತೇನೆ. ನನ್ನ ಟ್ರಸ್ಟ್ ಮೂಲಕ ನಡೆಯುತ್ತಿರುವ ಎಲ್ಲಾ ಉಚಿತ ಸಮಾಜ ಸೇವೆಗಳನ್ನು ಮುಂದುವರಿಸುತ್ತೇನೆ ಎಂದರು. ನನ್ನ ಆಸ್ತಿಯ ಅರ್ಧ ಭಾಗವನ್ನು ಮಿಲಿಂದಾ ಗೇಟ್ ಫೌಂಡೇಶನ್ ಗೆ ದಾನ ಮಾಡಿದ್ದೇನೆ. ಪಾರ್ಕಿನ್ಸನ್ ಅಮ್ನೇಶಿಯಾ ಮೊದಲಾದ ಕಾಯಿಲೆಗಳ ಬಗ್ಗೆ ಈ ಸಂಸ್ಥೆ ಅಧ್ಯಯನ ನಡೆಸುತ್ತಿದೆ ಎಂದರು.

ಇದೊಂದು ನನಗೆ ಗ್ರಹಚಾರ ಬಂದಿದೆ ಏನು ಮಾಡಲು ಸಾಧ್ಯ? ಬಿಆರ್ ಶೆಟ್ಟಿ ಸಾಮ್ರಾಜ್ಯ ಮುಳುಗಿಹೋಯಿತು ಎಂಬ ಸುದ್ದಿಗಳನ್ನು ನೋಡಿ ಬೇಸತ್ತು ಹೋಗಿದ್ದೇನೆ. ದೇವರ ದಯೆಯಿಂದ ನನ್ನ ಆರ್ಥಿಕ ಪರಿಸ್ಥಿತಿ ಅಷ್ಟೇನೂ ಹದಗೆಟ್ಟಿಲ್ಲ. ನೀವು ಯಾರು ಊಹಿಸಿರದಷ್ಟು ಬಿ ಆರ್ ಶೆಟ್ಟಿ ಆರ್ಥಿಕವಾಗಿ ಸಕ್ಷಮವಾಗಿದ್ದಾರೆ. ಹೊರದೇಶದಲ್ಲಿರುವ ನನ್ನ ಸಾಮ್ರಾಜ್ಯ ಹೋಗಿರಬಹುದು. ಆದರೆ ಭಾರತದ ಆಸ್ತಿ ಸುರಕ್ಷಿತವಾಗಿದೆವೆಂದು ಹೇಳಿದರು.

ಯಾರಾದರೂ ಮೇಲೆ ಹೋಗುತ್ತಾರೆ ಎನ್ನುವಾಗ ಮತ್ಸರ ಪಡುವ ಜನರು ಇರುವುದು ಸಹಜ. ಮೋದಿ ನನಗೆ ಆತ್ಮೀಯರು ಆದರೆ ಅವರಿಂದ ನೆರವು ಯಾಚಿಸಿಲ್ಲ ಎಂದರು. ನಾನು ಪ್ರಧಾನಿ ಅವರ ಜೊತೆ ಮಾತನಾಡಲು ಹೋದರೆ ರಾಹುಲ್ ಗಾಂಧಿಗೆ ಮಾತನಾಡಲು ವಿಷಯ ಸಿಗುತ್ತದೆ. ನೀರವ್ ಮೋದಿ, ವಿಜಯ್ ಮಲ್ಯ ಆಯ್ತು ಈಗ ಬಿಆರ್ ಶೆಟ್ಟಿಯೂ ದಿವಾಳಿ ಎನ್ನಬಹುದು. ಯಾವ ಬಿಜೆಪಿಯ ಮುಖಂಡರನ್ನು ನಾನು ಮಾತನಾಡಿಸಲು ಹೋಗಿಲ್ಲ.

ಅಬುದಾಬಿಯಲ್ಲಿ ನಿರ್ಮಾಣವಾಗುತ್ತಿರುವ ದೇವಸ್ಥಾನಕ್ಕೆ ನನ್ನನ್ನು ಅಧ್ಯಕ್ಷ ಮಾಡಿದ್ದಾರೆ. ಅಲ್ಲಿಯ ದೊರೆಯೇ ಆ ಜವಾಬ್ದಾರಿಯನ್ನು ನನಗೆ ನೀಡಿದ್ದಾರೆ ಎಂದು ಹೇಳಿದರು.

ಅತಿ ದೊಡ್ಡದಾದ ದೇವಸ್ಥಾನವನ್ನು ಅಲ್ಲಿ ಕಟ್ಟಲಿದ್ದೇವೆ. ವಾರಣಾಸಿಯಲ್ಲಿ ಆಸ್ಪತ್ರೆ ಮಾಡಲು 5 ಎಕರೆಯಷ್ಟು ಜಾಗ ನೀಡಿದ್ದಾರೆ. ಫೆಬ್ರವರಿ ತಿಂಗಳಲ್ಲಿ ಅಲ್ಲಿ ಶಿಲಾನ್ಯಾಸವನ್ನು ನಡೆಸಿದ್ದೇವೆ ಎಂದ ಅವರು, ಅಯೋಧ್ಯೆಯಲ್ಲೂ ಆಸ್ಪತ್ರೆ ಮಾಡುವ ಚಿಂತನೆ ಇದೆ ಎಂದರು. ನನ್ನ ಮೂರು ಹೆಣ್ಣು ಓರ್ವ ಗಂಡು ಮಗ ಸಂತೃಪ್ತ ಜೀವನ ನಡೆಸುತ್ತಿದ್ದಾರೆ.

ನನ್ನ ಆಸ್ತಿ ಕೇವಲ 36 ಸಾವಿರ ಕೋಟಿ ಆಗಿರಲಿಲ್ಲ. 2012ರಲ್ಲಿ ನನಗೆ 12.8 ಬಿಲಿಯನ್ ಡಾಲರ್ ಮಾರ್ಕೆಟ್ ಕ್ಯಾಪಿಟಲ್ ಇತ್ತು. 2017ರಿಂದ ನಾನು ನ್ಯೂ ಮೆಡಿಕಲ್ ಸಂಸ್ಥೆಯಿಂದ ಹೊರ ಬಂದೆ

2019ರಲ್ಲಿ ನನ್ನ ಎಲ್ಲಾ ಸಾಮ್ರಾಜ್ಯ ಕುಸಿದು ಹೋಯಿತು. ಲಕ್ಷ್ಮೀ ಚಂಚಲೆ ಏನೂ ಮಾಡಲು ಸಾಧ್ಯವಿಲ್ಲ.  ಸರಸ್ವತಿ ಮಾತ್ರ ಸ್ಥಿರವಾಗಿ ಇರುತ್ತಾಳೆ ಎಂದು ಹೇಳಿದರು. ನಾನು ಯಾವತ್ತೋ ಆನಂದಬಾಷ್ಪ ಸುರಿಸಿದ ಚಿತ್ರವನ್ನು ಮಾಧ್ಯಮಗಳು ಕಣ್ಣೀರು ಎಂದು ಬಿಂಬಿಸಿದವು.

ಅಬುದಾಬಿಯಲ್ಲಿ ಅಲ್ಲಿಯ ದೊರೆ ಅರಮನೆ ಕಟ್ಟಿದಾಗ ಮೋದಿ ವಿಶೇಷ ಅತಿಥಿಯಾಗಿ ಬಂದಿದ್ದರು. ಆಗ ಮೋದಿ ಸಮ್ಮುಖದಲ್ಲಿ ಅಲ್ಲಿನ ಉದ್ಯಮಿಗಳ ಸಭೆ ನಡೆದಿತ್ತು. ಆಗ ನಾನು ನನ್ನನ್ನು ಶೆಟ್ಟಿ ಎಂದು ಅವರಿಗೆ ಪರಿಚಯಿಸಿಕೊಂಡೆ.

ಆಗ ಅವರಿಗೆ ನಿಮ್ಮ 5 ಟ್ರಿಲ್ಲಿಯನ್ ಎಕಾನಮಿ ಗೆ ನನ್ನ 5 ಮಿಲಿಯನ್ ಡಾಲರ್ ಕೊಡುಗೆ ಇದೆ ಎಂದು ಹೇಳಿದ್ದೆ. ಆಗ ಅವರು ನಿಮ್ಮ ಪ್ರತಿಯೊಂದು ಮಾತಿನ ಮೇಲೆ ನನಗೆ ಭರವಸೆ ಇದೆ ಎಂದಿದ್ದರು. ಈಗ ಮಾಧ್ಯಮಗಳು ಮಾಡುತ್ತಿರುವ ವರದಿಯನ್ನು ಕಂಡರೆ ಅವರು ಏನೆಂದು ಕೊಂಡಾರು? ನಾನು ಅಳುವ ಚಿತ್ರವನ್ನು ಅವರು ನೋಡಿದರೆ ಅವರಿಗೆ ನನ್ನ ಮೇಲೆ ಭರವಸೆ ಉಳೀದೀತೆ ?

ಶೆಟ್ಟಿಯ ಸಾಮ್ರಾಜ್ಯ ಉರುಳಿಬಿದ್ದಿದೆ ಎಂದು ಅವರು ಕೂಡ ಪತ್ರಿಕೆಗಳಲ್ಲಿ ಓದಿರುತ್ತಾರೆ. ನನ್ನ ಮುಂದೆ ಎಂಬತ್ತನಾಲ್ಕು ಬ್ಯಾಂಕುಗಳು ನಾನು ಕೊಡಲು ಕ್ಯೂ ನಿಂತಿದ್ದವು .ಈಗ ಏನೇನೋ ಮಾತನಾಡುತ್ತಿದ್ದಾರೆ. ಆದರೂ ನಾನು ಧೃತಿಗೆಡುವುದಿಲ್ಲ ಮತ್ತೆ ಎದ್ದು ಬರುತ್ತೇನೆ ಎಂದು ಶೆಟ್ಟಿ ಹೇಳಿದ್ದಾರೆ.

 
 
 
 
 
 
 
 
 
 
 

Leave a Reply