ಪುತ್ತಿಗೆ ಶ್ರೀಗಳ ಕೈಯಲ್ಲಿ ʻಇಸ್ಲಾಂ ಭಯೋತ್ಪಾದನೆಯ ಧರ್ಮವಲ್ಲʼ ಪುಸ್ತಕ ~ 2012ರ ಈ ಚಿತ್ರಕ್ಕೆ ಶ್ರೀ ಮಠದಿಂದ ಸ್ಪಷ್ಟನೆ

ಉಡುಪಿ: ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರ10 ವರ್ಷದ ಹಿಂದಿನ ಫೋಟೊವೊಂದು ವಿವಾದದ ಕಿಡಿಯನ್ನು ಹೊತ್ತಿಸಿದೆ. “ಇಸ್ಲಾಂ ಭಯೋತ್ಪಾದನೆಯ ಧರ್ಮವಲ್ಲ” ಎಂಬ ಪುಸ್ತಕವನ್ನು ಅವರು ಕೈಯಲ್ಲಿ ಹಿಡಿದುಕೊಂಡಿರುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಮತ್ತೊಮ್ಮೆ ವೈರಲ್‌ ಆಗಿದ್ದು, ಹಿಂದು ಪರ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

2012ರಲ್ಲಿ ನಡೆದಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಫೋಟೊ ಇದಾಗಿದೆ. ಈಗ ಈ ಫೋಟೊ ವೈರಲ್‌ ಆಗುತ್ತಿದ್ದಂತೆ ಸ್ಥಳೀಯ ಹಿಂದು ಮುಖಂಡ ಬಾಲಾಜಿ ರಾಘವೇಂದ್ರ ಆಚಾರ್ಯ ತಮ್ಮ ಹೇಳಿಕೆಯೊಂದನ್ನು ವಿಡಿಯೊ ಮೂಲಕ ಬಿಡುಗಡೆ ಮಾಡಿದ್ದು, ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ.

ಈ ಪುಸ್ತಕ ಬಿಡುಗಡೆ ಮಾಡಿರುವುದು ನಮಗೆ ಆಘಾತವನ್ನು ತಂದಿದೆ. ಇಸ್ಲಾಂನವರು ಅಲ್ಲಾಹು ಮಾತ್ರ ದೇವರು, ಉಳಿದವರು ಕಾಫೀರರು ಎಂದು ಹೇಳುತ್ತಾರೆ. ಕಾಫೀರರ ವಿರುದ್ಧ ಜಿಹಾದ್ ಮಾಡಬೇಕು. ಕೊಲ್ಲಬೇಕು ಎಂದು ಹೇಳುತ್ತಾರೆ. ಇಂತಹ ಸಂದರ್ಭದಲ್ಲಿ ಶ್ರೀಪಾದರು ಈ ಪುಸ್ತಕವನ್ನು ಹೇಗೆ ಬಿಡುಗಡೆ ಮಾಡಿದ್ದಾರೆ? ಅಂತಾರಾಷ್ಟ್ರೀಯವಾಗಿ ಜಿಹಾದಿ ಭಯೋತ್ಪಾದನೆ ಯಿಂದ ಪ್ರಪಂಚವು ತತ್ತರಿಸಿದೆ. ಹಿಂದು ಸಮಾಜ ಸ್ವಾಭಿಮಾನಿ ಆಗಬೇಕು. ಸ್ವಾಮೀಜಿಗಳನ್ನು ಕೂಡಾ ಪ್ರಶ್ನೆ ಮಾಡುವ ಮನೋಭಾವ ಬೆಳೆದಿದೆ​~ ಬಾಲಾಜಿ ರಾಘವೇಂದ್ರ ಆಚಾರ್ಯ . ​

ಅಷ್ಟ ಮಠಾಧೀಶರಲ್ಲೊಬ್ಬರಾಗಿರುವ ಪುತ್ತಿಗೆ ಸುಗುಣೇಂದ್ರ ತೀರ್ಥರು ಇಸ್ಲಾಂ ಕುರಿತಾದ ಪುಸ್ತಕವನ್ನು ಬಿಡುಗಡೆ ಮಾಡಿರುವುದನ್ನು ನಾನು ಖಂಡಿಸುತ್ತಿದ್ದೇನೆ​.   ಸ್ವಾಮೀಜಿಗಳ ಬಗ್ಗೆ ನನಗೆ ಬಹಳ ಗೌರವವಿದೆ. ಆದರೆ, ಇಂದು ಇಸ್ಲಾಂ ಇಡೀ ಜಗತ್ತಿನಲ್ಲಿ ಯಾವ ರೀತಿ ನಡೆದುಕೊಳ್ಳುತ್ತಿದೆ? ನಮ್ಮ ಎಷ್ಟೋ ಹಿಂದು ಭಾಗಗಳನ್ನು ಕಳೆದುಕೊಂಡಿದ್ದೇವೆ ಎನ್ನುವುದು ನಿಮ್ಮ ಗಮನದಲ್ಲಿದೆ ಆದರೂ ಇಂಥ ಹೇಳಿಕೆ ನೀಡಿರುವುದು ಸರಿಯಲ್ಲ ​~ ಪ್ರಮೋದ್ ಮುತಾಲಿಕ್

​ಶ್ರೀ ​ಪುತ್ತಿಗೆ ಮಠ​ದಿಂದ  ಸ್ಪಷ್ಟನೆ​: ಇದು ಹತ್ತು ವರ್ಷಗಳ ಹಿಂದೆ ನಡೆದ ಕಾರ್ಯಕ್ರಮವಾಗಿದೆ. ಸಮಾಜದಲ್ಲಿ ಒಡಕು ಉಂಟು ಮಾಡಲು ಕೆಲವರು ಈ ರೀತಿ ವೈರಲ್ ಮಾಡುತ್ತಿದ್ದಾರೆ. ಜನಾಂಗಗಳ ನಡುವೆ ಪರಸ್ಪರ ಸೌಹಾರ್ದ ಬೆಳೆಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ನಡೆದಿತ್ತು. ಸಾಧು-ಸಂತರು, ಪೀಠಾಧಿಪತಿಗಳು ಶಾಂತಿ-ಸೌಹಾರ್ದತೆಗೆ ಮೊದಲ ಆದ್ಯತೆ ನೀಡುತ್ತಾ ಬಂದಿದ್ದಾರೆ. 

ಸನಾತನ ಧರ್ಮದ ಮೊದಲ ಆದ್ಯತೆ ಕೂಡ ಶಾಂತಿ-ಸೌಹಾರ್ದತೆಯೇ ಆಗಿದೆ. ಅದ್ವೈತ ಆಚಾರ್ಯರೊಬ್ಬರು ಹಿಂದಿಯಲ್ಲಿ ಬರೆದ ಪುಸ್ತಕದ ಕನ್ನಡ ಅನುವಾದ ಇದಾಗಿತ್ತು. “ಇಸ್ಲಾಂ ಆತಂಕ್ ಯಾ ಆದರ್ಶ್” ಪುಸ್ತಕದ ಕನ್ನಡ ಅನುವಾದ ಇದಾಗಿದ್ದು, ಶ್ರೀಗಳು ಅಂದು​ (2012)​ ಈ ಪುಸ್ತಕವನ್ನು ಬಿಡುಗಡೆ ಮಾಡಿದ್ದರು ಎಂದು ಪುತ್ತಿಗೆ ಮಠ ಸ್ಪಷ್ಟನೆ ನೀಡಿದೆ.

ಪುತ್ತಿಗೆ ಶ್ರೀಗಳು ಮೊದಲಿನಿಂದಲೂ ಭಯೋತ್ಪಾದನೆಯನ್ನು ತೀಕ್ಷ್ಣವಾಗಿ ಖಂಡಿಸುತ್ತಾ ಬಂದಿದ್ದಾರೆ. ವಿಶ್ವಸಂಸ್ಥೆಯ ಅಂಗಸಂಸ್ಥೆಯಾಗಿರುವ “ರಿಲಿಜನ್ ಫಾರ್ ಪೀಸ್”ನ ಅಂತಾರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಇಸ್ಲಾಂ ದೇಶ ಸಹಿತ ಪ್ರಪಂಚದ ಅನೇಕ ರಾಷ್ಟ್ರಗಳಲ್ಲಿ ಭಯೋತ್ಪಾದ ನೆಯ ವಿರುದ್ಧ ಅಭಿಪ್ರಾಯವನ್ನು ರೂಪಿಸಿದ್ದಾರೆ. ಅಮೆರಿಕದ ಶ್ವೇತ ಭವನದಲ್ಲೂ ಭಯೋತ್ಪಾದನೆಯ ವಿರುದ್ಧ ಮಾತನಾಡಿದ್ದಾರೆ. ಜೀವ ಬೆದರಿಕೆಗಳನ್ನು ಲೆಕ್ಕಿಸದೆ ಈ ಕೆಲಸ ಮಾಡುತ್ತಾ ಬಂದಿದ್ದಾರೆ. ಶ್ರೀಗಳ ವಿಶ್ವತೋಮುಖ ವ್ಯಕ್ತಿತ್ವ ಅರಿಯದೆ ಕೆಲವು ವಿಕೃತ ಮನಸ್ಸಿನವರು ಸಮಾಜದಲ್ಲಿ ಒಡಕು ಮೂಡಿಸುತ್ತಿದ್ದಾರೆ ಎಂದು ಶ್ರೀಗಳ ಆಪ್ತ ಹೆಜಮಾಡಿ ಸುದೀಂದ್ರ ಆಚಾರ್ಯ ಸ್ಪಷ್ಟನೆ ನೀಡಿದ್ದಾರೆ.

 
 
 
 
 
 
 
 
 
 
 

Leave a Reply