ಕಾರಿನ ಮೇಲೆ ಬಿದ್ದ ಲಾರಿ: ಕಾರು ಚಾಲಕ ಸಾವು

ಸುರತ್ಕಲ್: ರಸ್ತೆ ದಾಟಿ ಮತ್ತೊಂದು ಬದಿಗೆ ಸಂಚರಿಸಲು ಯತ್ನಿಸುತ್ತಿದ್ದ ಕಾರೊಂದರ ಮೇಲೆ ಲಾರಿಯೊಂದು ಮಗುಚಿ ಬಿದ್ದು ಕಾರು ಚಾಲಕ ಸ್ಥಳದಲ್ಲಿಯೇ ಮೃತಪಟ್ಟ ದುರಂತವೊಂದು ನಗರದ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಹೊನ್ನಕಟ್ಟೆ ಸಿಗ್ನಲ್ ಬಳಿ ಇಂದು ಮಧ್ಯಾಹ್ನ ನಡೆದಿದೆ.

ನಗರದ ಕುಳಾಯಿಯ ಗೋಕುಲನಗರ ನಿವಾಸಿ ಲೋಕನಾಥ ಮೃತಪಟ್ಟ ದುರ್ದೈವಿ. ಲೋಕನಾಥ ಅವರು ಎನ್ಎಚ್ 66ರ ಹೊನ್ನಕಟ್ಟೆ ಸಿಗ್ನಲ್ ಬಳಿ ರಸ್ತೆ ದಾಟಲೆಂದು ಕಾರು ನಿಲ್ಲಿಸಿದ್ದರು. ಈ ವೇಳೆ ಹಿಂದಿನಿಂದ ಬಂದ ಲಾರಿಯೊಂದು ನಿಯಂತ್ರಣ ತಪ್ಪಿ ಇವರ ಕಾರಿನ ಮೇಲೆಯೇ ಏಕಾಏಕಿ ಮಗುಚಿ ಬಿದ್ದಿದೆ. ಪರಿಣಾಮ ಕಾರು ಸಂಪೂರ್ಣ ಜಖಂಗೊಂಡು ಕಾರಿನೊಳಗಿದ್ದ ಲೋಕನಾಥ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಲಾರಿ ಬಿದ್ದ ರಭಸಕ್ಕೆ ಕಾರಿನ ಮುಂಭಾಗದಲ್ಲಿದ್ದ ದ್ವಿಚಕ್ರ ವಾಹನವೊಂದು ಹಾನಿಯಾಗಿದೆ‌. ಆದರೆ ತಕ್ಷಣ ದ್ವಿಚಕ್ರ ವಾಹನ ಸವಾರ ತನ್ನ ಸ್ಕೂಟರ್‌ ಬಿಟ್ಟು ಓಡಿದ ಪರಿಣಾಮ ಮತ್ತೊಂದು ಜೀವ ಬಲಿಯಾಗುವುದು ತಪ್ಪಿದೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರ ವಿಭಾಗದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

 
 
 
 
 
 
 
 
 

Leave a Reply