ಲಾರಿ ಡಿಕ್ಕಿ; ತಂದೆ ಮಗ ಸಾವು!

ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ತಂದೆ ಮಗನಿಗೆ ಲಾರಿ ಢಿಕ್ಕಿಯಾಗಿ ತಂದೆ ಮಗ ಸಾವನ್ನಪ್ಪಿದ ಘಟನೆ ನಡೆದಿದೆ. ಡಿಕ್ಕಿ ಹೊಡೆದ ಲಾರಿ ನಿಲ್ಲಿಸದೆ ಪರಾರಿಯಾಗಿತ್ತು.

ತಂದೆ ಪ್ರಭಾಕರ್ ಶಂಕರ್ ಮಗ ಸಮರ್ಥ್ ನನ್ನು ಶಾಲೆಗೆ ಸೇರಿಸುವ ಸಲುವಾಗಿ ಬೆಳಗಾವಿಯಿಂದ ಕಾಪುವಿಗೆ ಬಂದಿದ್ದರು ಎಂದು ತಿಳಿದು ಬಂದಿದೆ. ಉಚ್ಚಿಲದಲ್ಲಿ ಬಸ್ಸಿನಿಂದ ಇಳಿದು ರಸ್ತೆ ಪಕ್ಕದಲ್ಲಿ ನಿಂತಿದ್ದಾಗ ಲಾರಿ ಡಿಕ್ಕಿಯಾಗಿ ಪ್ರಭಾಕರ್ ಮೃತಪಟ್ಟು, ಸಮರ್ಥ್ ಗಂಭೀರ ಗಾಯಗೊಂಡಿದ್ದರು. ಚಿಕಿತ್ಸೆ ಫಲಿಸದೇ ಸಮರ್ಥ್ ಇವತ್ತು ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿದ್ದ ಲಾರಿಯನ್ನು ಪತ್ತೆ ಮಾಡಲಾಗಿದೆ. ಕಾಪು ಸರ್ಕಲ್ ಇನ್ಸ್‌ಪೆಕ್ಟರ್ ಪೂವಯ್ಯ ಹಾಗೂ ಪಡುಬಿದ್ರಿ ಎಸ್.ಐ ಪುರುಷೋತ್ತಮ ತಂಡದ ತ್ವರಿತ ಕಾರ್ಯಚರಣೆಯಿಂದ ಮೂಡಬಿದ್ರೆ ಬಳಿ ಲಾರಿ ತಡೆದು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಲಾರಿ ಮಹಾರಾಷ್ಟ್ರದ ಸೂರತ್‌ನಿಂದಲೂ 120 ಕೀ.ಮೀ.ದೂರದಿಂದ ಪ್ಲಾಸ್ಟಿಕ್ ಸಲಕರಣೆ ಮಾಡುವ ಕಚ್ಚಾವಸ್ತುಗಳನ್ನು ಹೇರಿಕೊಂಡು ಮೂಡಬಿದಿರೆ ಸಮೀಪದ ಗಂಜಿಮಠ ಎಂಬಲ್ಲಿನ ಫ್ಯಾಕ್ಟರಿಗೆ ಕಳೆದ ಮೂರು ದಿನಗಳ ಹಿಂದೆ ಹೊರಟಿತ್ತು.

ಬುಧವಾರ ಮುಂಜಾನೆ ಆರರ ಸುಮಾರಿಗೆ ಉಚ್ಚಿಲ ಬಳಿ ಬರುತ್ತಿದ್ದಂತೆ ಚಾಲಕನ ನಿದ್ದೆಯ ಮಂಪರಿನಿಂದಾಗಿ ಲಾರಿ ರಸ್ತೆ ಬಿಟ್ಟು, ರಸ್ತೆ ಪಕ್ಕದಲ್ಲಿ ನಿಂತಿದ್ದ ತಂದೆ ಮಗನಿಗೆ ಢಿಕ್ಕಿಯಾಗಿ ಪರಾರಿಯಾಗಿತ್ತು.

 
 
 
 
 
 
 
 
 
 
 

Leave a Reply