ಆಷಾಢಮಾಸ ಆರಂಭ

ಆಷಾಢಮಾಸ ಅಶುಭಮಾಸ ಎಂಬುದು ಜನರ ನಂಬಿಕೆ. ಆದರೆ ಈ ಮಾಸದಲ್ಲಿ ಕೆಲ ಕಾರಣಗಳಿಂದ ಶುಭಕಾರ್ಯ ಮಾಡಬಾರದು ಅಷ್ಟೇ. ಇದಕ್ಕೆ ವೈಜ್ಞಾನಿಕ ಹಿನ್ನೆಲೆಯೂ ಉಂಟು. ಅದನ್ನು ತಿಳಿಯೋಣ. ಆದರೆ ಈ ಮಾಸ ಅಶುಭವಲ್ಲ ಎಂಬುದನ್ನು ನೆನಪಿಡಿ.

 ಅಶ್ವಿನ್ಯಾದಿ ನಕ್ಷತ್ರಗಳ ಪೈಕಿ, ಅಶ್ವಿನಿ, ಕೃತ್ತಿಕಾ, ಮೃಗಶಿರ, ಪುಷ್ಯ, ಮಘ, ಉತ್ತರ ಫಲ್ಗುಣಿ, ಚಿತ್ತಾ, ವಿಶಾಖ, ಜ್ಯೇಷ್ಠ, ಪೂರ್ವಾಷಾಢ, ಶ್ರವಣ, ಪೂರ್ವಭಾದ್ರಪದ, ಈ 12 ನಕ್ಷತ್ರಗಳಲ್ಲಿ ಪ್ರತಿ ತಿಂಗಳು ಹುಣ್ಣಿಮೆಯಂದು ಚಂದ್ರ ಗ್ರಹದ ಜತೆ ಒಂದೊಂದು ನಕ್ಷತ್ರ ಮಿಳಿತಗೊಳ್ಳುತ್ತವೆ. ಹಾಗಾಗಿ ಆ ತಿಂಗಳನ್ನು ನಕ್ಷತ್ರದ ಹೆಸರಲ್ಲಿ ಕರೆಯಲಾಗುತ್ತದೆ.

 ಅಶ್ವಿನಿ ನಕ್ಷತ್ರದ ಜತೆ ಚಂದ್ರನಿದ್ದಾಗ ಆಶ್ವಯುಜ ಮಾಸ, ಕೃತ್ತಿಕಾ ಜತೆಯಿದ್ದಾಗ ಕಾರ್ತೀಕ ಮಾಸ, ಮೃಗಶಿರದ ಜತೆಯಿದ್ದಾಗ ಮಾರ್ಗಶಿರ ಮಾಸ, ಪುಷ್ಯದ ಜತೆಗಿದ್ದಾಗ ಪುಷ್ಯ ಮಾಸ, ಮಘ(ಮುಖೆ) ಜತೆಗಿದ್ದಾಗ ಮಾಘಮಾಸ, ಉತ್ತರಫಲ್ಗುನಿ ಜತೆಗಿದ್ದಾಗ ಫಾಲ್ಗುಣ ಮಾಸ, ಚಿತ್ತಾ ನಕ್ಷತ್ರದೊಂದಿಗಿದ್ದಾಗ ಚೈತ್ರಮಾಸ, ವಿಶಾಖದೊಂದಿಗಿದ್ದಾಗ ಚೈತ್ರಮಾಸ, ಜ್ಯೇಷ್ಠದೊಂದಿಗಿದ್ದಾಗ ಜ್ಯೇಷ್ಠ ಮಾಸ, ಪೂರ್ವಾಷಾಢದೊಂದಿಗೆ ಇದ್ದಾಗ ಆಷಾಢ ಮಾಸ, ಶ್ರವಣದೊಂದಿಗೆ ಇದ್ದಾಗ ಶ್ರಾವಣ ಮಾಸ, ಉತ್ತರ ಭಾದ್ರಪದದೊಂದಿಗೆ ಇದ್ದಾಗ ಭಾದ್ರಪದ ಮಾಸ ಎಂದು ಕರೆಯಲಾಗುತ್ತದೆ.

 ಈ ತಿಂಗಳ ಹುಣ್ಣಿಮೆಯಂದು ಚಂದ್ರ ಗ್ರಹದ ಜತೆ ಪೂರ್ವಾಷಾಢ ನಕ್ಷತ್ರ ಮಿಳಿತಗೊಳ್ಳುತ್ತದೆ. ಹಾಗಾಗಿ ಈ ಮಾಸವನ್ನು *ಆಷಾಢ ಮಾಸ* ಎಂದು ಕರೆಯಲಾಗುತ್ತದೆ. ಸಹಜವಾಗಿ ಈ ತಿಂಗಳು ಅಶುಭ ಎಂಬ ಮಾತು ವಾಡಿಕೆಯಲ್ಲಿದೆ. ಆದರೆ ಇದು ಅಶುಭ ಮಾಸ ಎಂಬುದು ಯಾವ ಶಾಸ್ತ್ರದಲ್ಲೂ ಉಲ್ಲೇಖವಿಲ್ಲ.

 ಈ ತಿಂಗಳಲ್ಲಿ ಮಾಡುವ ಶುಭಕರ ಕೆಲಸಗಳು ಫಲ ನೀಡುವುದಿಲ್ಲ ಎಂಬ ಮಾತು ಜನ ಜನಿತವಾಗಿದೆ. ಆದರೆ ಈ ತಿಂಗಳಲ್ಲಿ ಶುಭಕಾರ್ಯ ಮಾಡದಿರಲು ಸಾಮಾಜಿಕ ಕಳಕಳಿಯಿಂದ ಕೂಡಿದ ವೈಜ್ಞಾನಿಕ ಕಾರಣವಿದೆಯೇ ಹೊರತು ಧಾರ್ಮಿಕ ಕಾರಣವಿಲ್ಲ. 

 ಆಷಾಢ ಮಾಸದಲ್ಲಿ ಮದುವೆ, ಗೃಹಪ್ರವೇಶ, ಉಪನಯನ, ವಾಹನ ಖರೀದಿ, ಜಮೀನು ಖರೀದಿ, ಹೊಸದಾಗಿ ವ್ಯಾಪಾರ ಆರಂಭಿಸುವುದು ಮತ್ತಿತರ ಶುಭಕಾರ್ಯಗಳನ್ನು ಮಾಡುವಂತಿಲ್ಲ. ಇದಕ್ಕೆ ಮೂಲ ಕಾರಣ ದೇಶದ ಬೆನ್ನೆಲುಬಾದ ಕೃಷಿ ಚಟುವಟಿಕೆ ಹಾಗೂ ಜೋರು ಮಳೆ.

 ಮುಂಗಾರು ಮಳೆ ಆರಂಭಗೊಂಡ ನಂತರ ಗ್ರೀಷ್ಮ ಋತುವಿನಲ್ಲಿ ಅಬ್ಬರಿಸಲು ಆರಂಭಿಸುತ್ತದೆ. ಗುಡುಗು, ಮಿಂಚು, ಸಿಡಿಲು, ಬಿರುಗಾಳಿಯ ಆರ್ಭಟವೇ ಹೆಚ್ಚು. 

ಶತಮಾನಗಳ ಹಿಂದೆ ಆಷಾಢ ಮಾಸದಲ್ಲಿ ಸುರಿಯುತ್ತಿದ್ದ ಜೋರು ಮಳೆಯಿಂದ ಜನ ಈಚೆ ಬರಲು ಸಾಧ್ಯವಾಗುತ್ತಿರಲಿಲ್ಲ. ಮನೆಯಿಂದ ಹೊರಗೆ ಹೋಗುವುದೇ ಬಹಳ ದುಸ್ತರವಾಗುತ್ತಿತ್ತು. 

 ಜತೆಗೆ ಈ ತಿಂಗಳಲ್ಲಿ ಗದ್ದೆಯಲ್ಲಿ ಭತ್ತ ನಾಟಿ ಮಾಡುವ ಕೆಲಸದ ಜತೆ, ಕೃಷಿ ಚಟುವಟಿಕೆ ನಡೆಯುತ್ತದೆ. ಎಲ್ಲರು ಸಾಮಾನ್ಯವಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಇಷ್ಟ ಮಿತ್ರರು, ಬಂಧುಗಳು ಶುಭಕಾರ್ಯದಲ್ಲಿ ಸೇರಲಾಗುತ್ತಿರಲಿಲ್ಲ. ಹಾಗಾಗಿ ಆಷಾಢ ಮಾಸದಲ್ಲಿ ಶುಭ ಕಾರ್ಯ ಮಾಡಲು ಅನಾನುಕೂಲ. ಈ ಕಾರಣಗಳಿಂದ ಶುಭಕಾರ್ಯ ಮಾಡುವುದನ್ನು ನಿಷೇಧಿಸಿದ್ದರು. ಇದರ ಹೊರತಾಗಿ ಯಾವುದೇ ಧಾರ್ಮಿಕ ಕಾರಣವಿಲ್ಲ. 

  ಮತ್ತೊಂದು ಮಾತಿದೆ. ಹೊಸದಾಗಿ ಮದುವೆಯಾದ ಸೊಸೆ ಆಷಾಢಮಾಸದಲ್ಲಿ ಅತ್ತೆಯೊಂದಿಗೆ ಒಂದೇ ಮನೆಯಲ್ಲಿ ವಾಸಿಸಬಾರದು. ಇದು ಅಮಂಗಲ ಎಂಬ ಪ್ರತೀತಿ. ಆದರೆ ಇದು ಶುದ್ಧ ಸುಳ್ಳು. 

 ಈ ತಿಂಗಳಲ್ಲಿ ಕೃಷಿ ಚಟುವಟಿಕೆಗೆ ಆದ್ಯತೆ. ಕೆಲಸ ಮಾಡಬೇಕಾದ ಹುಡುಗ, ಮನೆಗೆ ಹೊಸದಾಗಿ ಬಂದ ಹೆಂಡತಿಯ ಮುಖ ಸೌಂದರ್ಯ ನೋಡುತ್ತಾ, ಸೀರೆ ಸೆರಗು (ಈ ತಿಂಗಳಲ್ಲಿ ಮಳೆಯಿಂದ ಚಳಿ ಹೆಚ್ಚಾಗುವ ಕಾರಣ ಪರಸ್ಪರ ಆಕರ್ಷಣೆ) ಹಿಡಿದುಕೊಂಡು ಓಡಾಡಿದರೆ ಕೆಲಸ ಮಾಡಲಾಗುವುದಿಲ್ಲ. ಕೃಷಿ ಚಟುವಟಿಕೆ ಕುಂಟಿತಗೊಳ್ಳುತ್ತದೆ. ಅಲ್ಲದೇ ನವ ದಂಪತಿ ಒಟ್ಟಾಗಿದ್ದರೆ, ಈ ತಿಂಗಳಲ್ಲಿ ನವವಧು ಗರ್ಭಧರಿಸಿದರೆ ಚೈತ್ರ ಮಾಸದಲ್ಲಿ ಮಗು ಜನನವಾಗುತ್ತದೆ. ವೈಖಾಖ ಮಾಸದಲ್ಲಿ ಬಿಸಿಲ ಬೇಗೆ ಹೆಚ್ಚಾಗುವುದರಿಂದ ಮಗುವಿಗೆ ತ್ರಾಸವಾಗುತ್ತದೆ. ಈ ಎಲ್ಲ ಕಾರಣಗಳಿಂದ ಆಷಾಢಮಾಸದಲ್ಲಿ ನೆಂಟರಿಷ್ಟರು ಸೇರಿ ಆಚರಿಸುವ ಕಾರ್ಯಕ್ರಮಗಳಿಗೆ ಬಿಡುವು ನೀಡಲಾಗಿದೆ. ಬದಲಿಗೆ ಕೃಷಿ ಚಟುವಟಿಕೆಗೆ ಆದ್ಯತೆ ನೀಡಲಾಗಿದೆ.‌

 ಈ ಮಾಸದಲ್ಲಿಯೇ ಪರಶಿವನು ತನ್ನ ಸತಿ ಪಾರ್ವತಿದೇವಿಗೆ ಗುಹೆಯಲ್ಲಿ ರಾಮಮಂತ್ರದ ಮಹಿಮೆ ಬೋಧಿಸಿದ. ಅನುಸೂಯಾ ದೇವಿ ಈ ತಿಂಗಳಲ್ಲಿ ಬರುವ ನಾಲ್ಕು ಸೋಮವಾರಗಳಂದು ರುದ್ರದೇವರ ಪೂಜೆ ಮಾಡಿದಳು. ವಿಶೇಷವಾಗಿ ಈ ತಿಂಗಳ ಶುಕ್ರವಾರಗಳಲ್ಲಿ ಲಕ್ಷ್ಮಿ ಪೂಜೆ ಮಾಡಲಾಗುತ್ತದೆ. 

ಹುಣ್ಣಿಮೆಯಂದು ಗುರುಪೂರ್ಣಿಮೆ, ಮಠಗಳಲ್ಲಿ ಯತಿಗಳು ಚಾತುರ್ಮಾಸ್ಯ ಆರಂಭಿಸುತ್ತಾರೆ. ಸುಮಂಗಲಿಯರು ದೀರ್ಘ ಸೌಮಾಂಗಲ್ಯ ಪಾಪ್ತಿಗಾಗಿ ಅಮಾವಾಸ್ಯೆಯಂದು ಜ್ಯೋತಿರ್ಭೀಮೇಶ್ವರ ವ್ರತ ಆಚರಿಸುತ್ತಾರೆ.        

ಹಾಗಾಗಿ ಈ ಆಷಾಢಮಾಸವನ್ನು ನಿಷಿದ್ಧ ಮಾಸವೆಂದು ತಿರಸ್ಕರಿಸದೆ, ಆತ್ಮೋನ್ನತಿಗೆ ಮುಂದಾಗಬಹುದು. ವೈಜ್ಞಾನಿಕ ಕಾರಣಗಳಿಂದ ನಿಷಿದ್ಧವೇ ಹೊರತು ಧಾರ್ಮಿಕವಾಗಿ ನಿಷಿದ್ಧವಲ್ಲ. 

ಎಲ್ಲರಿಗೂ ಆಷಾಢಮಾಸಾಧಿಪತಿ ಶ್ರೀವಾಮನ ದೇವರು ಎಲ್ಲರಿಗೂ ಒಳಿತನ್ನುಂಟು ಮಾಡಲಿ.

ಶ್ರೀಶ ಚರಣಾರಾಧಕ:

ಕೆ.ವಿ.ಲಕ್ಷ್ಮೀನಾರಾಯಣಾಚಾರ್ಯ, ಆನೇಕಲ್.

 
 
 
 
 
 
 
 
 
 
 

Leave a Reply