ಕುಂದಾಪುರ: ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಖಂಬದಕೋಣೆ ನಾಗೂರಿನ ಸಂದೀಪನಿ ಪ್ರೌಢಶಾಲೆಯ ವಿದ್ಯಾರ್ಥಿನಿ ಸುರಭಿ ಎಸ್.ಶೆಟ್ಟಿ 624 ಅಂಕ ಪಡೆದು ರಾಜ್ಯದಲ್ಲಿ ದ್ವಿತೀಯ ಸ್ಥಾನ ಪಡೆದು, ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ್ದಾಳೆ.
ಉಪ್ಪುಂದ ಚಮ್ಟೆಹರ್ಲು ನಿವಾಸಿ, ಉದ್ಯಮಿ ಸುರೇಶ ಎಚ್. ಶೆಟ್ಟಿ ಮತ್ತು ಸೀಮಾ ಎಸ್. ಶೆಟ್ಟಿ ದಂಪತಿ ಪುತ್ರಿ ಸುರಭಿ ಎಸ್. ಶೆಟ್ಟಿ ಎಲ್.ಕೆ.ಜಿ.ಯಿಂದಲೂ ಸಂದೀಪನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದಿದ್ದಾಳೆ.
ಪ್ರತಿದಿನ 6ರಿಂದ 8 ಗಂಟೆ ಕಾಲ ಅಭ್ಯಾಸ ಮಾಡುತ್ತಿದ್ದುದಾಗಿ ಹೇಳಿದ ಸುರಭಿ,. ಶಾಲೆಯಲ್ಲಿ ಶಿಕ್ಷಕರು ಮತ್ತು ಮನೆಯಲ್ಲಿ ಪೋಷಕರು ಹಾಗೂ ಸಹೋದರಿ, ಸ್ನೇಹಿತರು ಉತ್ತಮ ಪ್ರೋತ್ಸಾಹ ನೀಡಿದ್ದಾರೆ.
ಕೊರೊನಾ ಭಯವಿದ್ದರೂ ನನಗೆ ಎಲ್ಲಾ ಪರೀಕ್ಷೆ ಸುಲಭವಾಗಿತ್ತು. 625 ಅಂಕ ನಿರೀಕ್ಷೆಯಲ್ಲಿದ್ದೆ. ಆದರೆ ಸಮಾಜ ವಿಜ್ಞಾನದಲ್ಲಿ 1 ಅಂಕ ಕಡಿಮೆಯಾಗಿದೆ. ಮರು ಮೌಲ್ಯಮಾಪನ ಮಾಡಿಸುವುದಾಗಿ ತಿಳಿಸಿದಳು.
ಮುಂದೆ ವಿಜ್ಞಾನ ವಿಭಾಗದಲ್ಲಿ ಪಿಯುಸಿ ಶಿಕ್ಷಣ ಪಡೆದು, ವೈದ್ಯಕೀಯ ಶಿಕ್ಷಣ ಪಡೆಯಲು ಆಸಕ್ತಳಾಗಿರುವುದಾಗಿ ಸುರಭಿ ತಿಳಿಸಿದ್ದಾಳೆ.