ಶಿವಮೊಗ್ಗದಲ್ಲಿ 4 ಲಕ್ಷ ಮಂದಿಗೆ ಆಯುರ್ವೇದ ಕಿಟ್ ವಿತರಣೆ

ಶಿವಮೊಗ್ಗ: ದೇಶದಲ್ಲೇ ಮೊದಲ ಪ್ರಯತ್ನವಾಗಿ ಕೊರೊನಾ ನಿಯಂತ್ರಣ ಹಿನ್ನೆಲೆಯಲ್ಲಿ ಜನರಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುವ ಉದ್ದೇಶದಿಂದ ಶಿವಮೊಗ್ಗ ನಗರದಲ್ಲಿ 4 ಲಕ್ಷ ಮಂದಿಗೆ ಆಯುರ್ವೇದಿಕ್ ರೋಗ ನಿರೋಧಕ ಶಕ್ತಿವರ್ಧಕ ಕಿಟ್ ವಿತರಣೆಗೆ ಬುಧವಾರ ಚಾಲನೆ ನೀಡಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಕೆ. ಎಸ್. ಈಶ್ವರಪ್ಪ ಮಾತನಾಡಿ, ಪುತ್ತೂರು ಮೂಲದ ಬೆಂಗಳೂರಿನ ಡಾ. ಗಿರಿಧರ ಕಜೆ ಮಾರ್ಗದರ್ಶನದಲ್ಲಿ ಕಿಟ್ ಸಿದ್ಧಪಡಿಸಲಾಗಿದೆ. ಮೊದಲ ಹಂತದಲ್ಲಿ 1 ಲಕ್ಷ ಕಿಟ್  ವಿತರಣೆಗೆ ಸಿದ್ಧವಾಗಿದೆ. ಮುಂದೆ ಎರಡು ಹಂತಗಳಲ್ಲಿ ಶಿವಮೊಗ್ಗ ನಗರದ ಪ್ರತಿಯೊಬ್ಬರಿಗೂ ಕಿಟ್ ಹಂಚಲಾಗುವುದು. ಅದಕ್ಕಾಗಿ ವಾರ್ಡುವಾರು ಸಿದ್ಧತೆ ಮಾಡಲಾಗಿದೆ ಎಂದರು.

ಶಿವಮೊಗ್ಗದಲ್ಲಿ 4 ಲಕ್ಷ ಮಂದಿಗೆ ಆಯುರ್ವೇದ ಕಿಟ್ ವಿತರಣೆ

ಕೊರೋನಾ ಸೋಂಕಿಗೆ ಡಾ. ಕಜೆ ಸಿದ್ಧಪಡಿಸಿದ ಆಯುರ್ವೇದ ಔಷಧವನ್ನು ಸರ್ಕಾರದ ಹಂತದಲ್ಲಿ ಆದಷ್ಟು ಶೀಘ್ರ ಮಾರುಕಟ್ಟೆಗೆ ಬಿಡುಗಡೆ ಮಾಡಲು ಅನುಮತಿ ನಿರೀಕ್ಷಿಸಲಾಗಿದೆ. ಕೊರೊನಾ ನಿಯಂತ್ರಣಕ್ಕೆ ಆಯುರ್ವೇದ ದಿವ್ಯೌಷಧಿಯಾಗಿದೆ. ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದ್ದು, ಸಾರ್ವಜನಿಕರು ಪೂರಕವಾಗಿ ಸ್ಪಂದಿಸುವ ಅಗತ್ಯವಿದೆ ಎಂದು ಸಚಿವ ಈಶ್ವರಪ್ಪ ಹೇಳಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಡಾ. ಗಿರಿಧರ ಕಜೆ, ಜನರು ಕೊರೊನಾಕ್ಕೆ ಗಾಬರಿ ಪಡಬೇಕಾಗಿಲ್ಲ. ಆದರೆ, ರೋಗ ಕಡೆಗಣಿಸದೆ ಸರ್ಕಾರದ ಮಾರ್ಗಸೂಚಿ ಪಾಲಿಸಿಕೊಂಡು, ಮನೆ ಮದ್ದಿನ ಮೂಲಕ ನಿಯಂತ್ರಿಸಬಹುದು. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡರೆ ಅದಕ್ಕೆ ಭಯಪಡುವ ಅಗತ್ಯವಿಲ್ಲ ಎಂದರು.

ಶಾಸಕರಾದ ಆಯನೂರು ಮಂಜುನಾಥ ಮತ್ತು ಆರ್. ಪ್ರಸನ್ನ ಕುಮಾರ್, ಆರ್ಯ ವೈಶ್ಯ ನಿಗಮದ ಡಿ. ಎಸ್. ಅರುಣ್, ಎಂಎಡಿಬಿ ಅಧ್ಯಕ್ಷ ಕೆ. ಎಸ್. ಗುರುಮೂರ್ತಿ, ಮೇಯರ್ ಸುವರ್ಣಾ ಶಂಕರ್, ಉಪ ಮೇಯರ್ ಸುರೇಖಾ ಮುರಳೀಧರ, ಆರ್ ಎಸ್ ಎಸ್ ದಕ್ಷಿಣ ಪ್ರಾಂತ ಸಹಕಾರ್ಯವಾಹ ಪಟ್ಟಾಭಿರಾಮ್ ಮೊದಲಾದವರಿದ್ದರು.

 
 
 
 
 
 
 
 
 
 
 

Leave a Reply