ಗೃಹಸಚಿವರ ಚಪ್ಪಲಿ ಕಿತ್ತುಕೊಂಡು ಮರಳಿಸಿದ ಸಮುದ್ರರಾಜ!

ಉಡುಪಿ: ಸಮುದ್ರ ಕೊರೆತ ವೀಕ್ಷಣೆಗೆಂದು ಬಂದಿದ್ದ ಗೃಹಸಚಿವ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರ ಚಪ್ಪಲಿಯನ್ನು ಸ್ವತಃ ಸಮುದ್ರ ರಾಜನೇ ಕಿತ್ತುಕೊಂಡು ಮತ್ತೆ ಮರಳಿಸಿದ ಕುತೂಹಲಕಾರಿ ಘಟನೆ ಮಂಗಳವಾರ ಪಡುಬಿದ್ರಿ ಸಮುದ್ರ ಕಿನಾರೆಯಲ್ಲಿ ಸಂಭವಿಸಿದೆ.


ತನ್ನ ಎಂದಿನ ಶ್ರೀಮದ್ಗಾಂಭೀರ್ಯದಿಂದ ಸಮುದ್ರದೆಡೆಗೆ ಬಂದ ಸಚಿವ ಬೊಮ್ಮಾಯಿ, ತೆರೆಯ ಸೆಳೆತಕ್ಕೆ ಸಿಲುಕಿದರು. ತಾ ನಿಂತ ನೆಲವೇ ಸೆಳೆಯಲು ಆರಂಭಿಸಿದಾಗ ಕಾಲಿನ ಶ್ವೇತವರ್ಣದ ಚಪ್ಪಲಿ ಕಾಲಿಂದ ತಪ್ಪಿ ಸಮುದ್ರಪಾಲಾಯ್ತು. ಅಲೆಯ ಸೆಳೆತಕ್ಕೆ ಸಿಲುಕಿ ಒಂದರೆಕ್ಷಣ ಕಂಗಾಲಾದಂತೆ ಕಂಡುಬಂದಿದ್ದ ಸಚಿವರನ್ನು ಸನಿಹದಲ್ಲಿದ್ದ ಬಿಜೆಪಿ ನಾಯಕರು ಕೈಹಿಡಿದು ಬರಸೆಳೆದರು.
ಉಸ್ತುವಾರಿ ಸಚಿವರ ಈ ಸ್ಥಿತಿ ಕಂಡ ಸಮುದ್ರರಾಜನಿಗೆ ಕನಿಕರ ಮೂಡಿತೇನೋ ಎಂಬಂತೆ ತಾ ಕಸಿದಿದ್ದ ಚಪ್ಪಲಿ ಮರಳಿಸಿದ.
ಬಳಿಕ ತನ್ನ ಚಪ್ಪಲಿಯನ್ನೇ ಮೆಟ್ಟಿ ಮುಂದಿನ ಕಾರ್ಯಕ್ರಮ ಮುನ್ನಡೆಸಿದರು ಸಚಿವ ಬೊಮ್ಮಾಯಿ.


ಕರಾವಳಿಗರನ್ನು ಹಗುರವಾಗಿ ಕಾಣಬೇಡಿ ಎಂಬ ಎಚ್ಚರಿಕೆಯ ಸಂದೇಶ ಈ ಪ್ರಕರಣದ ಮೂಲಕ ರವಾನೆಯಾಗಿದೆ ಎಂಬ ಕುಹಕ ಮಾತುಗಳೂ ಕೇಳಲಾರಂಭಿಸಿದೆ.

 
 
 
 
 
 
 
 
 

Leave a Reply