ಕೊರೊನ ದ್ವಿತೀಯ ಅಲೆಯ ಪ್ರಕೋಪದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಉಪಯುಕ್ತ ಸಲಹೆಗಳು~ಡಾ. ವೈ ಸುದರ್ಶನ ರಾವ್

1) ಫ್ಲೂ ಅಥವಾ ಅನಾರೋಗ್ಯದ ಯಾವುದೇ ಲಕ್ಷಣಗಳು ಕಂಡುಬಂದಾಗ ಮೊದಲನೆಯದಿನವೇ ಅಥವಾ ಎರಡನೆಯ ದಿನವಾದರೂ ಕೋವಿಡ್ ಪರೀಕ್ಷೆ ಮಾಡಿಸಿ ( ಒಂದೇ ದಿನದಲ್ಲಿ ಗುಣವಾಗಿ ದ್ದರೂ ಸಹಾ). ಇದರಿಂದ ನಿಮಗೆ ಸಕಾಲದಲ್ಲಿ ಚಿಕಿತ್ಸೆ ಪಡೆಯಲು ಅನುಕೂಲವಾಗುವುದು. ಆರೋಗ್ಯ ಹದಗೆಟ್ಟಲ್ಲಿ ಕೋವಿಡ್ ಪರೀಕ್ಷೆಯ ಪಲಿತಾಂಶಕ್ಕಾಗಿ ವ್ಯರ್ಥವಾಗುವ ಒಂದೆರಡು ಅಮೂಲ್ಯ ದಿನಗಳನ್ನು ಉಳಿಸಬಹುದು. ಸರಕಾರವೂ ಪ್ಲೂ ಜ್ವರದ ಮೊದಲನೆಯ ದಿನವೇ ಕೋವಿಡ್ ತಪಾಸಣೆಗೆ ಒತ್ತು ನೀಡಬೇಕು.

ಇವತ್ತು ನೂರುರೋಗಿಗಳು ಕೋವಿಡ್ ಖಾಯಿಲೆಯ ಮೊದಲನೆಯ ದಿನದಲ್ಲಿದ್ದಾರೆಂದರೆ ಅವರಲ್ಲಿ 15 ಜನರಿಗೆ ಇನ್ನು ಹನ್ನೆರಡು ದಿನಗಳ ನಂತರ ಆಸ್ಪತ್ರೆ ಬೆಡ್ , ಆಕ್ಸಿಜನ್ ಬೇಕಾಗಬಹುದು ಹಾಗೆಯೆ ಒಬ್ಬರಿಗೆ ಐಸಿಯು ವೆಂಟಿಲೇಟರ್ ಬೇಕಾದೀತು ಎಂದು ಅಂದಾಜಿಸಿ ತಯಾರಾಗಿರ ಬಹುದು. ಆದುದರಿಂದ ಕೋವಿಡ್ ಪರೀಕ್ಷೆಯನ್ನು ಮೊದಲನೆಯ ದಿನ ಮಾಡಿಸುವುದು ಸಾರ್ವಜನಿ ಕರ ಜವಾಬ್ದಾರಿಯೆಂದು ಘೋಷಿಸಿ ಅವರಿಗೆ ಮಾತ್ರಾ ಉಚಿತ ಚಿಕಿತ್ಸೆಯೆಂದೋ ಅಥವಾ ಕೋವಿಡ್ ನೋಂದಣಿಯ ಕ್ರಮಸಂಖ್ಯೆ ಪ್ರಕಾರವೇ ಆಸ್ಪತ್ರೆಯ ಬೆಡ್ ನೀಡಲಾಗುವುದೆಂದೋ ಘೋಷಣೆ ಮಾಡಬಹುದು ( ಐಸಿಯು ಬೆಡ್ ಗೆ ಈ ನೀತಿ ಅನ್ವಯಿಸಬಾರದು).

2) ಒಂದು ವೇಳೆ ನಿಮ್ಮ ಕೋವಿಡ್ ಪರೀಕ್ಷೆಯ ಪಲಿತಾಂಶ ಪೊಸಿಟಿವ್ ಬಂದರೆ, ಮೊದಲನೆಯ ವಾರದಲ್ಲಿ ಲಕ್ಷಣಗಳು ಸೌಮ್ಯವಾಗಿರುವುದರಿಂದ ಮನೆಯಲ್ಲಿ ಉಳಿದು ,ಸಂಪೂರ್ಣ ವಿಶ್ರಾಂತಿ ಪಡೆಯಿರಿ. ದಿನಕ್ಕೆ ಎಂಟರಿಂದ ಹತ್ತು ಗಂಟೆ ನಿದ್ದೆ ಮಾಡಿರಿ. ಪೌಷ್ಟಿಕ ಆಹಾರ ಸೇವಿಸಿರಿ. ಮದ್ಯಪಾನ ಧೂಮಪಾನ ನಿಲ್ಲಿಸಿರಿ. ನಿಮಗೆ ಡಯಾಬಿಟಿಸ್ ಬ್ಲಡ್ ಪ್ರೆಶರ್ ಇತ್ಯಾದಿ ಖಾಯಿಲೆ ಇದ್ದರೆ ಅದನ್ನು ತಹಬಂದಿಗೆ ತಂದಿಟ್ಟಿರಿ.

ಸಾಕಷ್ಟು ನೀರು ಕುಡಿಯಿರಿ. ಲಘು ವ್ಯಾಯಾಮ , ಪ್ರಾಣಾಯಾಮ ಒಳ್ಳೆಯದು. ಯಾವುದೇ ದೈಹಿಕ ಚಿಹ್ನೆಗಳಿಲ್ಲದಿದ್ದರೂ ಕೂಡಾ ಕನಿಷ್ಟ ಹತ್ತು ದಿನಗಳನ್ನು ಹೀಗೆ ಮನೆಯಲ್ಲಿ ಕಳೆಯುವುದ ರಿಂದ ನಿಮ್ಮ ಖಾಯಿಲೆ ವಿಷಮಿಸದೇ ಅಲ್ಲಿಯೇ ಗುಣವಾಗಿಬಿಡುತ್ತದೆ. ಕೋವಿಡ್ ಪರೀಕ್ಷೆ ಮಾಡಿಸದೆ ಇತರ ಫ್ಲೂ ಜ್ವರಗಳು ಬಂದಾಗ ಮಾಡಿದಂತೆ ನಿತ್ಯ ಕೆಲಸಗಳನ್ನು ಮುಂದುವರಿಸಿದರೆ ಸುಮಾರು ಏಳರಿಂದ ಹತ್ತನೆಯ ದಿನಗಳಲ್ಲಿ ಒಂದೊಂದಾಗಿ ತೀವ್ರ ಚಿಹ್ನೆಗಳು ಆರಂಭವಾಗಿ ಆಕ್ಸಿಜನ್, ಐಸಿಯು ಚಿಕಿತ್ಸೆ ಬೇಕಾಗುತ್ತದೆ.

3) ಪೊಸಿಟಿವ್ ರಿಪೋರ್ಟ್ ಬಂದಾಕ್ಷಣ ಸಹಾಯಕ್ಕೆ ಬರಬಲ್ಲ ಬಂಧುಮಿತ್ರರಿಗೆ ವಿಷಯ ತಿಳಿಸಿರಿ ಹಾಗೂ ಯಾವುದಾದರೂ ಕೋವಿಡ್ ಚಿಕಿತ್ಸೆ ನೀಡುವ ಆಸ್ಪತ್ರೆಯ ವೈದ್ಯರೊಂದಿಗೆ ಸಂಪರ್ಕ ದಲ್ಲಿರಿ. ಅವರ ಸೂಚನೆಗಳನ್ನು ಪಾಲಿಸಿ. ದೈಹಿಕ ಪರಿಸ್ಥಿತಿ ಬಿಗಡಾಯಿಸಿದಲ್ಲಿ ಈ ಸಂಪರ್ಕ ನಿಮಗೆ ತುರ್ತು ಚಿಕಿತ್ಸೆ ಒದಗಿಸುವಲ್ಲಿ ಸಹಕಾರಿಯಾಗುತ್ತದೆ

4) ಮನೆಯಲ್ಲಿ ಚಿಕಿತ್ಸೆ ಪಡೆಯುವವರು ಟಿವಿ ಯಲ್ಲಿ ಬರುವ ಸುದ್ದಿಗಳಿಂದ ಭಯಭೀತರಾಗಿ ಆಸ್ಪತ್ರೆಗೆ ದಾಖಲಾಗುವುದು ಸಹಜ. ಹೀಗೆ ಗಾಬರಿಯಾಗಿ ಬಂದ ರೋಗಿಗಳನ್ನು ವೈದ್ಯರು ವಾಪಾಸು ಕಳಿಸಿದಲ್ಲಿ ನಾಳೆ ಅವನ ಪರಿಸ್ಥಿತಿ ವಿಶಮಿಸಿದರೆ ವೈದ್ಯನನ್ನು ದೋಷಿಯೆನ್ನುವುದಿಲ್ಲವೆ? ಆದುದರಿಂದ ಸರಕಾರವು ಪ್ರತಿಯೊಂದು ವಾರ್ಡ್ ಅಥವಾ ಗ್ರಾಮಕ್ಕೆ ಒಂದು ವೈದ್ಯ ಒಂದು ನರ್ಸ್ ಹಾಗೂ ಓರ್ವ ಪರಿಚಾರಕರಿರುವ ತಂಡ ರಚಿಸಿ ರೋಗಿಯ ಮನೆಯಲ್ಲೋ ಅಥವಾ ಅಂಗನವಾಡಿ , ಶಾಲೆ ಎಲ್ಲಾದರೊಂದು ಕಡೆ ಸ್ಥಳ ನಿಗದಿ ಮಾಡಿ ಅವರನ್ನು ನಿತ್ಯವೂ ತಪಾಸಣೆ ಮಾಡಿ ಸಲಹೆ ಚಿಕಿತ್ಸೆ ಇತ್ತು ಧೈರ್ಯ ತುಂಬುವ ಕೆಲಸ ಮಾಡಿದಲ್ಲಿ ಅನಗತ್ಯವಾಗಿ ಆಸ್ಪತ್ರೆಗಳಿಗೆ ದಾಖಲಾಗುವವರ ಸಂಖ್ಯೆ ಇಳಿಯುತ್ತದೆ.

5) ಕೋವಿಡ್ ಚಿಕಿತ್ಸೆಯ ಪರಿಣಿತರ ತಂಡ ರಚಿಸಿ, ಅವರು ಆಸ್ಪತ್ರೆಗೆ ದಾಖಲಾದ ಪ್ರತೀ ರೋಗಿ ಯನ್ನು ಭೇಟಿಯಾಗಿ ಅವರಿಗಿತ್ತ ಚಿಕಿತ್ಸೆ ಮಾರ್ಗದರ್ಶಿ ಸೂತ್ರಕ್ಕನುಗುಣವಾಗಿದೆಯೆ? ಎಂದು ವರದಿ ನೀಡಬೇಕು. ಚಿಕಿತ್ಸೆ ನೀಡುವ ವೈದ್ಯರಿಗೆ ಅಗತ್ಯಬಿದ್ದಲ್ಲಿ ಸಲಹೆ ನೀಡಬಹುದು. ಆಗ ಅನಗತ್ಯವಾದ ಆಕ್ಸಿಜನ್, ರೆಮಿಡಿಸಿವಿರ್ ಬಳಕೆ ತಪ್ಪುತ್ತದೆ.

6) ಐಸಿಯು ಹಾಗೂ ವೆಂಟಿಲೇಟರ್ ಚಿಕಿತ್ಸೆಯ ಪರಿಣಿತರ ಇನ್ನೊಂದು ತಂಡ ರಚಿಸಿ ಅವರು ಐಸಿಯು ಹಾಗೂ ವೆಂಟಿಲೇಟರ್ ನಲ್ಲಿರುವ ರೋಗಿಗಳನ್ನು ಒಂದು ಭಾರಿಯಾದರೂ ಭೇಟಿಯಾಗಿ ಚಿಕಿತ್ಸೆ ನೀಡುವ ವೈದ್ಯರಿಗೆ ಸಲಹೆ ಸೂಚನೆ ನೀಡಬೇಕು. ಇದರಿಂದ ಆಸ್ಪತ್ರೆಗಳ ಐಸಿಯು ಚಿಕಿತ್ಸೆಯ ಗುಣಮಟ್ಟ, ಚಿಕಿತ್ಸೆ ನೀಡುವ ವೈದ್ಯರ ಮನೋಬಲ ಹಾಗೂ ರೋಗಿಯ ಸಂಬಂಧಿ ಕರಿಗೆ ವೈದ್ಯರ ಮೇಲೆ ನಂಬಿಕೆ ಹೆಚ್ಚಾಗುತ್ತದೆ.

7) ಎರಡನೆಯ ಅಲೆ ಇಳಿದಮೇಲೂ ಮೂರನೆಯ ನಾಲ್ಕನೆಯ ಅಥವಾ ಹತ್ತು ಹನ್ನೆರಡು ಅಲೆ ಗಳ ತನಕವೂ ಬರಬಹುದು ಅಥವಾ ಕೋವಿಡ್ ಕಾಯಿಲೆ ಖಾಯಂ ಆಗಿಯೇ ಉಳಿಯ ಬಹುದು. ಯಾವ ಅಲೆಯಲ್ಲಿ ಯಾವುದರ ಕೊರತೆ ಕಾಡೀತು ಎಂದು ಅಂದಾಜಿಸುವುದು ಕಷ್ಟ. ಹಾಗೆಯೇ ಲಕ್ಷಗಟ್ಟಲೆ ಸಂಖ್ಯೆಯಲ್ಲಿ ಆಸ್ಪತ್ರೆ ಐಸಿಯು ಗಳನ್ನು ಕಟ್ಟಿಸಿದರೆ ಅವು ಮುಂದೆ ಯಾವ ಉಪಯೋಗ ಕ್ಕೂ ಸಲ್ಲವು. ಆರು ತಿಂಗಳಿಗೊಮ್ಮೆ ಲಾಕ್ ಡೌನ್ ಮಾಡಿದರೆ ಜೀವನ ದುಸ್ತರವಾಗುವುದು.

ಆದುದರಿಂದ ಮುಂದಿನ ಅಲೆಗಳು ಬರದಂತೆಯೂ ಬಂದರೂ ಸೌಮ್ಯವಾಗಿರುವಂತೆಯೂ ಮಾಡುವುದೇ ಸರಿಯಾದ ಕ್ರಮ. ಆದುದರಿಂದ ಜನರು ಕೋವಿಡ್ ಬರದಂತೆ ಮಾರ್ಗ ಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸುವಂತೆ ಕಠಿಣ ಕ್ರಮಗಳನ್ನು ಕೈಗೊಳ್ಳುವುದು
ಅಗತ್ಯ

-ಡಾ. ವೈ ಸುದರ್ಶನ ರಾವ್ , ಉಡುಪಿ. ಸರ್ಜನ್, ಇಂಚರ ಸರ್ಜಿಕಲ್ ಕ್ಲಿನಿಕ್, ಎ. ಜೆ ಆಲ್ಸೆ ರಸ್ತೆ , ಅಲಂಕಾರ್ ಥಿಯೇಟರ್ ಹಿಂಬದಿ, ಉಡುಪಿ, ಹಾಗೂ ಭಾರತೀಯ ವೈದ್ಯಕೀಯ ಸಂಘ, ಉಡುಪಿ ಜಿಲ್ಲಾ ಸಂಯೋಜಕರು.

 
 
 
 
 
 
 
 
 
 
 

Leave a Reply