ಮಣಿಪಾಲದ ಗ್ರಾಮೀಣ ಹೆರಿಗೆ ಮತ್ತು ಮಕ್ಕಳ ಕಲ್ಯಾಣ ಕೇಂದ್ರಗಳಲ್ಲಿ  ನೇತ್ರ ತಪಾಸಣಾ ಸೌಲಭ್ಯದ ಆರಂಭ

ಮಣಿಪಾಲ 24ನೇ ಫೆಬ್ರವರಿ 2021: ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ನೇತ್ರ ಚಿಕಿತ್ಸಾ ವಿಭಾಗವು , ಮಣಿಪಾಲದ ಗ್ರಾಮೀಣ ಹೆರಿಗೆ ಮತ್ತು ಮಕ್ಕಳ ಕಲ್ಯಾಣ ಕೇಂದ್ರಗಳಲ್ಲಿ ನೇತ್ರ ತಪಾಸಣಾ ಸೌಲಭ್ಯವನ್ನು ಆರಂಭಿಸಿದೆ. ಈ ಪ್ರಯುಕ್ತ ಸಾಂಕೇತಿಕವಾಗಿ ಮಂಗಳವಾರದಂದು ಗ್ರಾಮೀಣ ಹೆರಿಗೆ ಮತ್ತು ಮಕ್ಕಳ ಕಲ್ಯಾಣ ಕೇಂದ್ರ, ಮಲ್ಪೆಯಲ್ಲಿ ನೇತ್ರ ತಪಾಸಣಾ ಸೌಲಭ್ಯವನ್ನು ಉದ್ಘಾಟಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ನೇತ್ರಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಸುಲತಾ ವಿ ಭಂಡಾರಿ ಅವರು , ಕಣ್ಣಿನ ದೋಷ ಹಾಗೂ ಸಮಸ್ಯೆಗಳ ಬಗ್ಗೆ ನಿರ್ಲಕ್ಷ ತೋರಬಾರದು. ಕಾಲ ಕಾಲಕ್ಕೆ ಕಣ್ಣಿನ ತಪಾಸಣೆ ಮಾಡಿಕೊಂಡು ಕಣ್ಣಿನ ಆರೈಕೆ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಇಲ್ಲಿ ಕಣ್ಣಿನ ಸಂಪೂರ್ಣ ತಪಾಸಣೆ ನಡೆಸಿ, ಅಗತ್ಯವಿರುವವರಿಗೆ ಕಸ್ತೂರ್ಬಾ ಆಸ್ಪತ್ರೆ , ಮಣಿಪಾಲ ಮತ್ತು ಉಡುಪಿಯ ಜಿಲ್ಲಾ ಅಂದತ್ವ ನಿವಾರಣಾ ವಿಭಾಗದ ಜಂಟಿ ಆಶ್ರಯದಲ್ಲಿ ಉಚಿತವಾಗಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ, ಗ್ಲುಕೊಮಾ ಸಂಬಂಧಿತ ಚಿಕಿತ್ಸೆ ಮತ್ತು ಇತರ ಚಿಕಿತ್ಸೆಗಳನ್ನು ಮಾಡಲಾಗುವುದು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥೆ ಡಾ. ಸುಮಾ ನಾಯರ್ ಅವರು, ಈಗ ಗ್ರಾಮೀಣ ಹೆರಿಗೆ ಮತ್ತು ಮಕ್ಕಳ ಕಲ್ಯಾಣ ಕೇಂದ್ರಗಳಲ್ಲಿ ಈ ಸೌಲಭ್ಯ ಆರಂಭಿಸಿರುವುದರಿಂದ ಹತ್ತಿರದ ಜನತೆಗೆ ನಮ್ಮ ಮನೆ ಬಾಗಿಲಲ್ಲೇ ನೇತ್ರ ತಪಾಸಣಾ ಸೌಲಭ್ಯ ದೊರಕಿದಂತಾಗಿದೆ. ಪ್ರತೀ ತಿಂಗಳ 4ನೇ ಸೋಮವಾರ ಅಲೆವೂರು , 4ನೇ ಮಂಗಳವಾರ ಮಲ್ಪೆ, 4ನೇ ಬುಧವಾರ ಉದ್ಯಾವರ, 4ನೇ ಗುರುವಾರ ಕಾಪು, ಮತ್ತು 4ನೇ ಶುಕ್ರವಾರ ಕಡೆಕಾರಿನಲ್ಲಿ ಈ ಸೌಲಭ್ಯ ದೊರೆಯಲಿದೆ ಎಂದರು. ಲಯನ್ಸ್ ಕ್ಲಬ್ ಪ್ರಕ್ರತಿ ಉಡುಪಿಯ ಅಧ್ಯಕ್ಷ ಲ. ಸುಧಾಕರ್ ಶೆಟ್ಟಿ , ಕಾರ್ಯದರ್ಶಿ ಲ. ಪ್ರಶಾಂತ್ ಶೆಟ್ಟಿ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply