ಕಸ್ತೂರ್ಬಾ ಆಸ್ಪತ್ರೆ ವೈದ್ಯರಿಂದ ಕ್ಲಿಷ್ಟವಾದ ಮತ್ತು ಸಂಕೀರ್ಣವಾದ ಅಪರೂಪದ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗಳು

ಮಣಿಪಾಲ, 2ನೇ ಜನವರಿ 2021: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗವು ಸಂಕೀರ್ಣವಾದ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗಳನ್ನು ನಡೆಸುತ್ತಿದ್ದು, ಇದನ್ನು ಭಾರತದ ಕೆಲವೇ ಪ್ರತಿಷ್ಠಿತ ಕ್ಯಾನ್ಸರ್ ಕೇಂದ್ರಗಳಲ್ಲಿ ಮಾತ್ರ ನಡೆಸಲಾಗುತ್ತದೆ.

ಶ್ವಾಸ ನಾಳದ (ವಿಂಡ್‌ಪೈಪ್) ಕ್ಯಾನ್ಸರ್ ಶಸ್ತ್ರಚಿಕಿತ್ಸೆಯು ಒಂದು ಕ್ಲಿಷ್ಟವಾದ ಮತ್ತು ಅತ್ಯಂತ ಸಂಕೀರ್ಣವಾದ ಶಸ್ತ್ರಚಿಕಿತ್ಸೆಗಳಲ್ಲಿ ಒಂದಾಗಿದ್ದು, ಅಲ್ಲಿ ಕ್ಯಾನ್ಸರ್ ಗೆಡ್ಡೆಯ ಜೊತೆಗೆ ಶ್ವಾಸ ನಾಳದ ಭಾಗವನ್ನು ತೆಗೆದು ಹಾಕಲಾಗುತ್ತದೆ ಮತ್ತು ಉಳಿದ ಶ್ವಾಸ ನಾಳವನ್ನು ಕೆಳಗಿನ ಭಾಗ ಅಥವಾ ಶಾಖೆಗಳಿಗೆ (ಮುಖ್ಯ ಬ್ರಾಂಕಸ್) ಸಂಪರ್ಕಿಸಲಾಗುತ್ತದೆ.ಶ್ವಾಸ ನಾಳದ ಕ್ಯಾನ್ಸರ್, ಶ್ವಾಸನಾಳವನ್ನು ಮುಚ್ಚುವುದರ ಮೂಲಕ ಉಸಿರಾಟದ ತೊಂದರೆಗಳಿಗೆ ಕಾರಣ ವಾಗುತ್ತದೆ. ಈ ಶಸ್ತ್ರಚಿಕಿತ್ಸೆಯು ರೋಗಿಯ ಜೀವ ಉಳಿಸುವ ಮತ್ತು ಕ್ಯಾನ್ಸರ್ ಗುಣಪಡಿಸುವ ವಿಧಾನವಾಗಿದೆ. ಮಣಿಪಾಲದ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗವು ಇತ್ತೀಚೆಗೆ 70 ವರ್ಷದ ರೋಗಿ ಸೇರಿದಂತೆ, ಇಂತಹ 4 ಕ್ಯಾನ್ಸರ್ ರೋಗಿಗಳಿಗೆ ಪ್ರಮುಖ ಟ್ರಾಕಿಯೊಬ್ರಾಂಕಿಯಲ್ (ಶ್ವಾಸನಾಳ ) ಶಸ್ತ್ರಚಿಕಿತ್ಸೆಯನ್ನು ನಡೆಸಿದ್ದು,

ಪ್ರಸ್ತುತ ಈ ರೋಗಿಯು 9 ತಿಂಗಳಿಂದ ಆರೋಗ್ಯವಾಗಿದ್ದು, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯ ಶಸ್ತ್ರಚಿಕಿತ್ಸಕ ಡಾ.ನವೀನ ಕುಮಾರ್ ಹೇಳಿದರು.

ಇತ್ತೀಚೆಗೆ ಎದೆಯೊಳಗಿನ ಫುಟ್ಬಾಲ್ ಗಾತ್ರದ ಕ್ಯಾನ್ಸರ್ ಗೆಡ್ಡೆಗೆ 2 ಪ್ರಮುಖ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾ ಯಿತು. ಕ್ಯಾನ್ಸರ್ ಗೆಡ್ಡೆಯಿಂದ ಹೃದಯ, ಪ್ರಮುಖ ರಕ್ತನಾಳಗಳು, ಶ್ವಾಸಕೋಶ ಮತ್ತು ಶ್ವಾಸ ನಾಳವು ಸಂಕುಚಿತವಾಗಿದ್ದವು. ಇದರಲ್ಲಿ, ಒಬ್ಬ 15 ವರ್ಷದ ಬಾಲಕನಿಗೆ 3 ಕೆಜಿಯಷ್ಟು ತೂಕದ ಗೆಡ್ಡೆ ಇಡೀ ಎದೆಯ ಮೂಳೆ (ಸ್ಟರ್ನಮ್) ಮತ್ತು ಎದೆಯ ಎಡಭಾಗವನ್ನು ಒಳಗೊಂಡಿತ್ತು. 10 ಗಂಟೆಗಳ ಸುಧೀರ್ಘ ಶಸ್ತ್ರಚಿಕಿತ್ಸೆಯ ಮೂಲಕ ಸಂಪೂರ್ಣಗೆಡ್ಡೆಯನ್ನು ತೆಗೆದುಹಾಕಲಾಯಿತು ಮತ್ತು ಎದೆಯ ಮೂಳೆಯನ್ನು ಕೃತಕ ಮೂಳೆಯೊಂದಿಗೆ ಪುನರ್ನಿರ್ಮಿಸಲಾಯಿತು.

ಪ್ರಸ್ತುತ ಈತ ಕಳೆದ 5 ತಿಂಗಳಿಂದ ನಿಯಮಿತ ವಾಗಿ ವೈದ್ಯರನ್ನು ಸಂದರ್ಶಿಸುತ್ತಿದ್ದು, ಆರೋಗ್ಯವಾಗಿದ್ದಾನೆ. ಮತ್ತೊಂದು 15 ವರ್ಷದ ಬಾಲಕಿಗೆ ಕುತ್ತಿಗೆಯನ್ನು ಒಳಗೊಂಡ ದೊಡ್ಡ ರಕ್ತಸ್ರಾವದ ಗೆಡ್ಡೆಯನ್ನು ತೆಗೆದುಹಾಕುವ ಶಸ್ತ್ರಚಿಕಿತ್ಸೆ ಮಾಡಲಾಯಿತು. ಇಲ್ಲಿ 14 ಗಂಟೆಗಳ ಸುಧೀರ್ಘ ಶಸ್ತ್ರಚಿಕಿತ್ಸೆಯ ಮೂಲಕ 5 ಕೆಜಿ ಗೆಡ್ಡೆಯನ್ನು ಸಂಪೂರ್ಣವಾಗಿ ತೆಗೆದುಹಾಕಲಾಯಿತು ಮತ್ತು ಪ್ಲಾಸ್ಟಿಕ್ ಸರ್ಜರಿಯಿಂದ ಕುತ್ತಿಗೆಯನ್ನು ಪುನರ್ನಿರ್ಮಿ ಸಲಾಯಿತು, ಮತ್ತು ಪ್ರಸ್ತುತ, ಇವಳು ಕೂಡ ನಿಯಮಿತ ತಪಾಸಣೆಯೊಂದಿಗೆ ಆರೋಗ್ಯವಾಗಿದ್ದಾಳೆ.

ಥೋರಾಕೋಸ್ಕೋಪಿಕ್ ಮತ್ತು ಲ್ಯಾಪರೊಸ್ಕೋಪಿಕ್ (ಕೀಹೋಲ್) ಕ್ಯಾನ್ಸರ್ ಶಸ್ತ್ರಚಿಕಿತ್ಸೆಯನ್ನು ನಿರಂತರವಾಗಿ ಶ್ವಾಸಕೋಶದ ಕ್ಯಾನ್ಸರ್, ಅನ್ನನಾಳ, ಹೊಟ್ಟೆ, ದೊಡ್ಡ ಕರುಳು ಮತ್ತು ಕರುಳಿನ ಕೊನೆಯ ಭಾಗ , ಗರ್ಭಾಶಯ ಮತ್ತು ಮೂತ್ರಪಿಂಡದ ಕ್ಯಾನ್ಸರ್ ಗಾಗಿ ನಡೆಸಲಾಗುತ್ತಿದೆ.

ಇತ್ತೀಚೆಗೆ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗವು ಏಕ ಗಾಯದ ಕೀಹೋಲ್ ಶ್ವಾಸಕೋಶ ಕ್ಯಾನ್ಸರ್ ಶಸ್ತ್ರ ಚಿಕಿತ್ಸೆಯನ್ನು ನಡೆಸಿದೆ. ಹಿಂದೆ ಒಮ್ಮೆ ಜಠರದ ಶಸ್ತ್ರಚಿಕಿತ್ಸೆಗೊಳಗಾಗಿದ್ದ, 25 ವರ್ಷದ ಅನ್ನನಾಳ ಕ್ಯಾನ್ಸರ್ ರೋಗಿಗೆ ಕೀಹೋಲ್ ಸಂಕೀರ್ಣ ವಿಧಾನದೊಂದಿಗೆ ಶಸ್ತ್ರಚಿಕಿತ್ಸೆ ನಡೆಸಿ, ಅನ್ನನಾಳವನ್ನು ಕರುಳನ್ನು ಬಳಸಿ ಪುನರ್ನಿರ್ಮಿಸಲಾಯಿತು. ಕಳೆದ ಒಂದೂವರೆ ವರ್ಷದೊಂದಿಗೆ ನಿಯಮಿತವಾಗಿ ವೈದ್ಯರನ್ನು ಭೇಟಿಯಾಗುತ್ತ ರೋಗಿ ಆರೋಗ್ಯವಾಗಿದ್ದಾರೆ.

ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗವು ಹೈಪರ್ಥರ್ಮಿಕ್ ಇಂಟ್ರಾಪೆರಿಟೋನಿಯಲ್ ಕೀಮೋಥೆರಪಿ ವಿಧಾನದೊಂದಿಗೆ 4 ನೇ ಹಂತದ ಜಠರ, ದೊಡ್ಡ ಕರುಳು ಮತ್ತು ಕರುಳಿನ ಕೊನೆಯ ಭಾಗ ಮತ್ತು ಅಂಡಾಶಯದ ಕ್ಯಾನ್ಸರ್ ಗೆ ಸಂಬಂದಿತ ಶಸ್ತ್ರಚಿಕಿತ್ಸೆಯನ್ನು ನಡೆಸುತ್ತಿದೆ ಎಂದು ಡಾ.ನವೀನ ಕುಮಾರ್ ಹೇಳಿದರು.

ಸಂಕೀರ್ಣವಾದ ಕಾಲು ಉಳಿಸುವ ಕ್ಯಾನ್ಸರ್ ಶಸ್ತ್ರಚಿಕಿತ್ಸೆಯನ್ನು ಮೂಳೆಯ ಕ್ಯಾನ್ಸರ್ ಗೆ ನಡೆಸುತ್ತಿದ್ದು, 3 ವರ್ಷದ ಬಾಲಕಿಗೆ ತೊಡೆಯ ಮೂಳೆಯ ಕ್ಯಾನ್ಸರ್ ಗಾಗಿ ಶಸ್ತ್ರ ಚಿಕಿತ್ಸೆ ನಡೆಸಲಾಯಿತು. ಅಲ್ಲಿ ಮೂಳೆಯ ಕ್ಯಾನ್ಸರ್ ಭಾಗವನ್ನು ತೆಗೆದುಹಾಕಿ ಹೆಚ್ಚಿನ ಪ್ರಮಾಣದ ರೇಡಿಯೊಥೆರಪಿಗೆ (ಎಕ್ಸ್ಟ್ರಾಕಾರ್ಪೊರಿಯಲ್ ರೇಡಿಯೊ ಥೆರಪಿ) ಒಳಪಡಿಸಿ ರೋಗಿಗೆ ಮರುಜೋಡಣೆ ಮಾಡಲಾಗಿದೆ. ಅವರು ಕಳೆದ ಒಂದೂವರೆ ವರ್ಷಗಳಿಂದ ನಿಯಮಿತ ವೈದ್ಯರ ತಪಾಸಣೆಯೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮತ್ತೊಂದು 50 ವರ್ಷದ ಮಹಿಳೆಗೆ ಸ್ಯಾಕ್ರೊ-ಇಲಿಯಾಕ್ ಜಂಟಿ (ಬೆನ್ನು ಮತ್ತು ತೊಡೆಯೊಂದಿಗೆ ಸೇರಿ ಕೊಳ್ಳುವುದು) ಒಳಗೊಂಡ ಶ್ರೋಣಿಯ ಮೂಳೆಯ ಕ್ಯಾನ್ಸರ್ ಗಾಗಿ ಶಸ್ತ್ರಚಿಕಿತ್ಸೆ ಮಾಡಲಾಯಿತು, ಅಲ್ಲಿ ಮುಖ್ಯ ಸ್ಯಾಕ್ರೊ-ಇಲಿಯಾಕ್ ಜಂಟಿ (ಆಂತರಿಕ ಹೆಮಿಪೆಲ್ವೆಕ್ಟಮಿ ಟೈಪ್ 4) ಜೊತೆಗೆ ಗೆಡ್ಡೆಯನ್ನು ಸಂಪೂರ್ಣವಾಗಿ ತೆಗೆದುಹಾಕಲಾಯಿತು. ಒಂದೂವರೆ ವರ್ಷಗಳಿಂದ ರೋಗಿಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಡಾ.ನವೀನ ಕುಮಾರ್ ಎ.ಎನ್ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥರಾಗಿದ್ದು ಡಾ.ನವಾಜ್ ಉಸ್ಮಾನ್, ಡಾ. ಕೇಶವ ರಾಜನ್ ಮತ್ತು ಡಾ. ಪ್ರೀತಿ ಶೆಟ್ಟಿ ಈ ನುರಿತ ತಂಡದಲ್ಲಿದ್ದಾರೆ. ಇವರೆಲ್ಲರೂ ಮುಂಬೈನ ಪ್ರತಿಷ್ಠಿತ ಟಾಟಾ ಸ್ಮಾರಕ ಕ್ಯಾನ್ಸರ್ ಆಸ್ಪತ್ರೆಯಲ್ಲಿ ತರಬೇತಿ ಪಡೆದಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಮಣಿಪಾಲ ಸಮಗ್ರ ಆರೈಕೆ ಕೇಂದ್ರದ ಸಂಯೋಜಕರಾದ ಡಾ ನವೀನ್ ಎಸ್ ಸಲಿನ್ಸ್ ರವರು ,“ ಗುಣಮಟ್ಟದ ಶಸ್ತ್ರಚಿಕಿತ್ಸಕರು, ಅರಿವಳಿಕೆ ತಜ್ಞರು, ದಾದಿಯರು ಮತ್ತು ಆಸ್ಪತ್ರೆಯ ಸಮರ್ಥ ಆಡಳಿತ ತಂಡದಿಂದ ನಾವು ಈ ಶಸ್ತ್ರಚಿಕಿತ್ಸೆಗಳನ್ನು ಮಾಡಲು ಸಾಧ್ಯವಾಗುತ್ತಿದೆ “ ಎಂದರು ಮತ್ತು ಮಣಿಪಾಲ ಸಮಗ್ರ ಕ್ಯಾನ್ಸರ್ ಆರೈಕೆ (ಎಂಸಿಸಿಸಿಸಿ ) ಕೇಂದ್ರದಲ್ಲಿ ದೊರೆಯುವ ಸೌಲಭ್ಯಗಳು ಮತ್ತು ಹೊಸದಾಗಿ ಆರಂಭಿಸಿದ ಸೇವೆಗಳ ಕುರಿತು ಸಂಕ್ಷಿಪ್ತ ವಾಗಿ ಮಾತನಾಡಿದರು.

ಕಿಷ್ಟಕರ ಮತ್ತು ಸಂಕೀರ್ಣ ಶಸ್ತ್ರಚಿಕಿತ್ಸೆಗಳನ್ನು ನಡೆಸುತ್ತಿರುವ ನುರಿತ ಮತ್ತು ತಜ್ಞ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ತಂಡವನ್ನು ಅಭಿನಂದಿಸಿದ ಉಪವೈದ್ಯಕೀಯ ಅಧೀಕ್ಷಕರಾದ ಡಾ ಪದ್ಮರಾಜ ಹೆಗ್ಡೆ ಅವರು, “ಪ್ರತಿಷ್ಠಿತ ಟಾಟಾ ಸ್ಮಾರಕ ಕ್ಯಾನ್ಸರ್ ಆಸ್ಪತ್ರೆಯಲ್ಲಿ ತರಬೇತಿ ಹೊಂದಿದ ತಂಡ ನಮಲ್ಲಿರುವುದರಿಂದ ಇಂತಹ ಗುಣಮಟ್ಟದ ಹಾಗೂ ಸಂಕೀರ್ಣ ಶಸ್ತ್ರಚಿಕಿತ್ಸೆ ನಡೆಸಲು ಸಾಧ್ಯವಾಗುತ್ತಿದೆ ಎಂದು ಹೇಳಿದರು.

ಪ್ರಸ್ತುತ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗವು ಪ್ರತಿಷ್ಠಿತ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ಯಾನ್ಸರ್ ಕೇಂದ್ರಗಳಿಗೆ ಸಮಾನವಾದ ಎಲ್ಲಾ ಪ್ರಮುಖ ಮತ್ತು ಅತಿ ಕ್ಲಿಷ್ಟಕರ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗಳನ್ನು ಮಾಡುತ್ತಿದ್ದು, ಇದು ಕರಾವಳಿ ಮತ್ತು ಮಧ್ಯ ಕರ್ನಾಟಕದ ಕ್ಯಾನ್ಸರ್ ರೋಗಿಗಳಿಗೆ ಹೊಸ ಭರವಸೆಯನ್ನು ನೀಡಲಿದೆ” ಎಂದು ಹೇಳಿದರು. ಡಾ ಕಾರ್ತಿಕ್ ಉಡುಪ, ಡಾ ಸುಮಿತ್ ಮಾಲಾಪುರೆ, ಡಾ ವಾಸುದೇವ ಭಟ್, ಡಾ ನವಾಜ್ ಉಸ್ಮಾನ್, ಡಾ ಕೇಶವರಾಜನ್, ಶ್ರೀ ಸುಧಾಕರ್ ಪ್ರಭು ಪತ್ರಿಕಾ ಘೋಷ್ಟಿ ಯಲ್ಲಿ ಉಪಸ್ಥಿತರಿದ್ದರು.

 

 
 
 
 
 
 
 
 
 
 
 

Leave a Reply